ವಾಡಿ: ಪಟ್ಟಣದ ಪುರಸಭೆಯ ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ದೇವಿಂದ್ರ ಕರದಳ್ಳಿ ಗೆಲುವು ಸಾಧಿಸುವುದರ ಮೂಲಕ ಗೆಲುವಿನ ನಗೆ ಬೀರಿದ್ದಾರೆ.
ಒಟ್ಟು 14 ಜನ ಸದಸ್ಯರು ಕೈ ಎತ್ತುವ ಮೂಲಕ ದೇವೀಂದ್ರ ಕರದಳ್ಳಿ ಆಯ್ಕೆಗೆ ಒಲವು ತೋರಿದರು.
ಪ್ರತಿಸ್ಪರ್ಧಿ ಬಿಜೆಪಿಯ ರವಿ ನಾಯಕ ಅವರಿಗೆ 7 ಮತಗಳು ಬಂದರೆ, ದೇವಿಂದ, ಕರದಳ್ಳಿ ಅವರಿಗೆ 14 ಜನ ಸದಸ್ಯರು ಕೈ ಎತ್ತುವ ಮೂಲಕ ಆಯ್ಕೆಗೆ ಬೆಂಬಲ ವ್ಯಕ್ತಪಡಿಸಿದರು.
ತಿಮ್ಮಯ್ಯ ಪವಾರ ನಿಧನದಿಂದ ತೆರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ, ಸೋಮವಾರ ಮಧ್ಯಾಹ್ನ ಚುನಾವಣೆ ಜರುಗಿತು. ತಹಶೀಲ್ದಾರ್ ಉಮಾಕಾಂತ ಹಳ್ಳೆ ಚುನಾವಣೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.
ಒಟ್ಟು 23 ಸದಸ್ಯರ ಸಂಖ್ಯಾಬಲ ಹೊಂದಿರುವ ಪುರಸಭೆಯಲ್ಲಿ 21 ಜನ ಚುನಾವಣೆ ಪ್ರಕ್ರಿಯೆಯದಲ್ಲಿ ಭಾಗಿಯಾದರೆ ಇಬ್ಬರು ಸದಸ್ಯರು ಗೈರು ಇದ್ದರು. ಬೆಳಿಗ್ಗೆ 9ಗಂಟೆಗೆ ನಾಮಪತ್ರ ಸಲ್ಲಿಕೆಯೊಂದಿಗೆ ಆರಂಭಗೊಂಡ ಚುನಾವಣೆ ಪ್ರಕ್ರಿಯೆ, ಮಧ್ಯಾಹ್ನ 2 ಗಂಟೆವರೆಗೆ ನಡೆಯಿತು. ಬಿಜೆಪಿ ಬೆಂಬಲಿತ ಸದಸ್ಯರಾದ ಸುಶೀಲಬಾಯಿ ಮೊಸಲಗಿ ಹಾಗೂ ಶೋಭಾ ಪವಾರ್ ಚುನಾವಣೆ ಸಭೆಗೆ ಗೈರಾಗಿದ್ದರು. ಶೋಭಾ ಪವಾರ್ ಅನಾರೋಗ್ಯ ನಿಮಿತ್ತ ಗೈರಾದರೆ, ಸುಶೀಲಬಾಯಿ ಮೌಸಲಗಿ ನಿಗದಿತ ಸಮಯಕ್ಕೆ ಬಾರದಿರುವುದ್ದರಿಂದ ಮತದಾನದಲ್ಲಿ ಪಾಲ್ಗೊಳ್ಳಲು ಆಗಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.