ADVERTISEMENT

ಗಾಣಗಾಪುರ: ದಿಂಡಿ ಉತ್ಸವ ಇಂದು

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2020, 4:21 IST
Last Updated 14 ನವೆಂಬರ್ 2020, 4:21 IST

ಅಫಜಲಪುರ: ತಾಲ್ಲೂಕಿನ ಸುಕ್ಷೇತ್ರ ದೇವಲಗಾಣಗಾಪುರದಲ್ಲಿ ದೀಪಾವಳಿ ನಿಮಿತ್ತ ನರಕ ಚತುರ್ಥಿಯಂದು (ಶನಿವಾರ) ದಿಂಡಿ ಉತ್ಸವ ನಡೆಯಲಿದೆ.

ನರಕ ಚತುರ್ಥಿ ನಿಮಿತ್ತ ದಿಂಡಿ ಉತ್ಸವ ದೇವಸ್ಥಾನದಿಂದ ಸಂಗಮಕ್ಕೆ ತೆರಳುವುದು. ಬೆಳಿಗ್ಗೆ 8 ಗಂಟೆಗೆ ದಿಂಡಿ ಉತ್ಸವ, ಮಧ್ಯಾಹ್ನ 8 ಗಂಟೆಗೆ ಕಲ್ಮೇಶ್ವರ ದೇವಸ್ಥಾನ ತಲುಪುವುದು. ಉತ್ಸವಕ್ಕೆ ವಿವಿಧ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯ ಯಾತ್ರಿಕರು ಆಗಮಿಸುತ್ತಾರೆ ಎಂದು ಅರ್ಚಕರಾದ ಉದಯಭಟ್ ಪೂಜಾರಿ ತಿಳಿಸಿದರು.

ದತ್ತ ದೇವಸ್ಥಾನಕ್ಕೆ ಆಗಮಿಸುವ ಯಾತ್ರಿಕರು ದತ್ತ ಮಹಾರಾಜರ ಪಾದುಕೆಗಳ ದರ್ಶನ ಪಡೆಯುತ್ತಾರೆ. ಅಷ್ಟ ತೀರ್ಥಗಳಲ್ಲಿ ಪುಣ್ಯ ಸ್ನಾನ ಮಾಡುತ್ತಾರೆ. ಕೋವಿಡ್‌ ತಡೆಗೆ ದೇವಸ್ಥಾನದ ಸಮಿತಿಯವರು ಸುರಕ್ಷಿತ ಅಂತರ ಕಾಯ್ದುಕೊಳ್ಳುವಂತೆ ನಾಮಫಲಕ ಹಾಕಿದ್ದಾರೆ. ಸ್ಯಾನಿಟೈಸ್‌ ವ್ಯವಸ್ಥೆ ಮಾಡಿದ್ದಾರೆ.

ADVERTISEMENT

ಘತ್ತರಗಿ ಭಾಗ್ಯವಂತಿ ದೇವಸ್ಥಾನದಲ್ಲಿ ಸಿಡಿ ಆರಂಭ: ತಾಲ್ಲೂಕಿನ ಸುಕ್ಷೇತ್ರ ಘತ್ತರಗಿ ಭಾಗ್ಯವಂತಿ ದೇವಸ್ಥಾನದಲ್ಲಿ ದೀಪಾವಳಿ ಪಾಡ್ಯಾದಿಂದ ಸಿಡಿ ಆಡುವ ಕಾರ್ಯಕ್ರಮ ಆರಂಭವಾಗುತ್ತದೆ. ಅಂದರೆ ಭಕ್ತರು ತಮ್ಮ ಮನಸ್ಸಿನಲ್ಲಿರುವ ಬೇಡಿಕೆಗಳು ಈಡೇರಿದ ಮೇಲೆ ದೇವಸ್ಥಾನಕ್ಕೆ ಬಂದು ಸಿಡಿ ಆಡುತ್ತಾರೆ. ಅದಕ್ಕಾಗಿ ರಾಜ್ಯದ ವಿವಿಧ ಭಾಗಗಳಿಂದ ಹಾಗೂ ಮಹಾರಾಷ್ಟ್ರದಿಂದಲೂ ಅಮವಾಸ್ಯೆಗೆ, ದೀಪಾವಳಿ ಪಾಡ್ಯಮಿಯಂದು ಭೇಟಿ ನೀಡುತ್ತಾರೆ.

ಹರಕೆ ಹೊತ್ತವರು ಹರಕೆ ಈಡೇರಿದ ಮೇಲೆ ಬಂದು ಸಿಡಿ ಆಡುತ್ತಾರೆ.ಸಿಡಿ ಆಡುವುದನ್ನು ಸರ್ಕಾರ ನಿಷೇಧ ಮಾಡಿದೆ. ಹೀಗಾಗಿ ಸಿಡಿ ಆಡುವುದು ಮೊದಲಿನ ಹಾಗೆ ಇರುವುದಿಲ್ಲ ಎಂದುಘತ್ತರಗಿ ಭಾಗ್ಯವಂತಿ ದೇವಸ್ಥಾನದ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಕೆ.ಜಿ.ಬಿರಾದಾರ ತಿಳಿಸಿದರು.

ಸಿಡಿ ಆಡುವ ಮಹಿಳೆಯರು ಭಾಗ್ಯವಂತಿ ಮುಡಿಸಿಕೊಳ್ಳುವ ವಸ್ತ್ರಾಭರಣವನ್ನು ಹಾಕಿಕೊಂಡು ಭಾಜಾ ಭಜಂತ್ರಿಯೊಂದಿಗೆ ದೇವಸ್ಥಾನದ ಸುತ್ತ ಐದು ಸುತ್ತು ಹಾಕುತ್ತಾರೆ. ನಂತರ ಅವರೊಬ್ಬರಿಗೆ ದೇವಸ್ಥಾನದ ಗರ್ಭಗುಡಿಯಲ್ಲಿ ದರ್ಶನಕ್ಕೆ ಬಿಡಲಾಗುತ್ತದೆ. ಶುಕ್ರವಾರ ಹರಕೆ ಹೊತ್ತ 35 ಭಕ್ತರು ಸಿಡಿ ಆಡಿದ್ದಾರೆ ಎಂದರು.

‘ಭಾನುವಾರ ಅಮಾವಾಸ್ಯೆ ಮತ್ತು ಸೋಮವಾರ ಪಾಡ್ಯಮಿ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಹೀಗಾಗಿ ಪೊಲೀಸ್ ಸೇವೆಯನ್ನು ಬಳಸಿಕೊಳ್ಳಲಾಗುತ್ತಿದೆ. ಭಕ್ತರು ಒಂದೇ ಕಡೆ ಗುಂಪಾಗಿ ಸೇರದ ಹಾಗೆ ನೋಡಿಕೊಳ್ಳಲಾಗುವುದು. ಸ್ಯಾನಿಟೈಸ್‌ ವ್ಯವಸ್ಥೆ ಮಾಡಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.