ADVERTISEMENT

ಲಸಿಕೆಯನ್ನು ಅನುಮಾನಿಸಬೇಡಿ: ವೈದ್ಯರು, ಸಿಬ್ಬಂದಿಗೆ ಸಚಿವ ಡಾ.ಕೆ.ಸುಧಾಕರ್ ಮಾಹಿತಿ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2021, 9:44 IST
Last Updated 21 ಫೆಬ್ರುವರಿ 2021, 9:44 IST
ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್
ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್    

ಕಲಬುರ್ಗಿ: ಭಾರತದ ಕೋವಿಡ್ ಲಸಿಕೆಗೆ ಜಗತ್ತಿನ 25 ದೇಶಗಳಿಂದ ಬೇಡಿಕೆ ಬಂದಿದೆ. ನಮ್ಮ ವೈದ್ಯರು, ವೈದ್ಯಕೀಯ ಸಿಬ್ಬಂದಿಯನ್ನು ಅನುಮಾನಿಸುವುದು ಸರಿಯಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದರು.

ಕಲಬುರ್ಗಿಯಲ್ಲಿ ನಿರ್ಮಿಸಿದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳು ವಿಶ್ವವಿದ್ಯಾಲಯದ ಪ್ರಾದೇಶಿಕ ಕಚೇರಿಯನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ವೈದ್ಯರು ಲಸಿಕೆ ಪಡೆಯುವ ಮೂಲಕ ತಮ್ಮ ಆರೋಗ್ಯ ಹಾಗೂ ತಮ್ಮನ್ನು ನಂಬಿರುವವರ ಆರೋಗ್ಯ ಕಾಪಾಡಿಕೊಳ್ಳಬೇಕು. ದೇಶಿ ಲಸಿಕೆಯು ಕೋವಿಡ್ ಬಂದರೂ ಸಾವು ಸಂಭವಿಸದಂತೆ ತಡೆಯುವ ಸಾಮರ್ಥ್ಯ ಹೊಂದಿದೆ. ದೇಶದಲ್ಲಿ 1 ಕೋಟಿ ಜನ ಲಸಿಕೆ ಪಡೆದಿದ್ದಾರೆ. ರಾಜ್ಯದಲ್ಲಿ ಕೂಡ 6 ಲಕ್ಷ ಸಿಬ್ಬಂದಿಗೆ ಲಸಿಕೆ ನೀಡಿದ್ದೇವೆ. ಇದು ಕೂಡ ಗಮನಾರ್ಹ ಸಾಧನೆ ಎಂದು ಹೇಳಿದರು.

ADVERTISEMENT

ರಾಜ್ಯಕ್ಕೆ ಹೊಸದಾಗಿ ಮತ್ತೆ ನಾಲ್ಕು ವೈದ್ಯಕೀಯ ಕಾಲೇಜುಗಳು ಮಂಜೂರಾಗಿವೆ. ಈ ಹಿಂದೆ ಕೂಡ 17 ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ಎಲ್ಲ 21 ಕಾವೇಜುಗಳನ್ನು ಸಾಮಾನವಾಗಿ ಉತ್ಕೃಷ್ಟಗೊಳಿಸುವ ಮೂಲಕ ಏಮ್ಸ್ ಗಿಂತಲೂ ಶ್ರೇಷ್ಠವಾಗಿ ಬೆಳೆಸುವ ಗುರಿ ನನ್ನ ಮುಂದಿದೆ. ಕಲಬುರ್ಗಿಗೆ ಏಮ್ಸ್ ಬರುವುದೋ ಇಲ್ಲವೋ ಎನ್ನುವುದಕ್ಕಿಂತ ಈಗಿರುವ ಜಿಮ್ಸ್ ಅನ್ನೇ ಏಮ್ಸ್ ಮಟ್ಟಕ್ಕೆ ಬೆಳೆಸೋಣ. ಈ ಭಾಗದ ವೈದ್ಯಕೀಯ ಶಿಕ್ಷಣವನ್ನು ಗುಣಮಟ್ಟಗೊಳಿಸಲು ಆದ್ಯತೆ ನೀಡೋಣ. ಪೌಷ್ಟಿಕಾಂಶ ಕೊರತೆ ನೀಗಿಸುವುದು ಹಾಗೂ ಆರೋಗ್ಯ ಕ್ಷೇತ್ರ ಗುಣಮಟ್ಟಗೊಳಿಸುವುದು ಆದ್ಯತೆ ಆಗಲಿ ಎಂದೂ ಹೇಳಿದರು.

ನರ್ಸಿಂಗ್ ಹಾಗೂ ಪ್ಯಾರಾಮೆಡಿಕಲ್ ಕಾಲೇಜುಗಳ ಗುಣಮಟ್ಟದ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ಇಂಥ ಕಾಲೇಜು ಸ್ಥಾಪನೆಗೆ ಅನುಮತಿ ನೀಡುವ ಮುನ್ನ ಗುಣಮಟ್ಟದ ಬಗ್ಗೆ ಖಾತ್ರಿ ಮಾಡಿಕೊಳ್ಳಬೇಕು ಎಂದು ಸಚಿವರು ಆರೋಗ್ಯ ವಿಶ್ವವಿದ್ಯಾಲಯದ ಕುಲಪತಿಗೆ ಸಲಹೆ ನೀಡಿದರು.

ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ: ಕೋವಿಡ್ ಬಂದ ನಂತರವೇ ವೈದ್ಯಕೀಯ ಕ್ಷೇತ್ರದ ಮಹತ್ವ ಎಷ್ಟಿದೆ ಎಂದು ಪ್ರಪಂಚಕ್ಕೆ ಅರಿವಾಗಿದೆ. ಸೋಂಕು ವಿಪರೀತವಾದಾಗ ನಮ್ಮಲ್ಲಿ ವೈದ್ಯಕೀಯ ಸಿಬ್ಬಂದಿ ಕೊರತೆ ಬಹಳ ಕಾಡಿತು. ಹಿಂದಿನ ಸರ್ಕಾರಗಳು ಆರೋಗ್ಯಕ್ಕೆ ಆದ್ಯತೆ ನೀಡಬೇಕಿತ್ತು. ಈಗ ಆ ಕೊರತೆ ನೀಗಿಸಲು ಪ್ರಧಾನಿ ಮುಂದಾಗಿದ್ದಾರೆ. ಆರೋಗ್ಯ ಕ್ಷೇತ್ರಕ್ಕೆ ಶೇ 137ರಷ್ಟು ಹೆಚ್ಚು ಅನುದಾನ ನೀಡಿದ್ದಾರೆ. 138 ಹೊಸ ವೈದ್ಯಕೀಯ ಕಾಲೇಜುಗಳ ಸ್ಥಾಪನೆಗೆ ಮುಂದಾಗಿದ್ದಾರೆ. ಈ ಬಾರಿಯ ರಾಜ್ಯ ಬಜೆಟ್ ನಲ್ಲಿ ಕೂಡ ಹೆಚ್ಚಿನ ಅನುದಾನ ನೀಡಲು ಮುಖ್ಯಮಂತ್ರಿ ಅವರಿಗೆ ಪ್ರಸ್ತಾವ ಸಲ್ಲಿಸಿದ್ದೇನೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.