
ಶಹಾಬಾದ್: ತಾಲ್ಲೂಕಿನ ಎಚ್ಎಂಪಿ ಕಾರ್ಖಾನೆಯ ಜೆ.ಪಿ ಕಾಲೊನಿಗೆ ತರಕಾರಿ ಮಾರುವ ವಯೋವೃದ್ಧ ಹನುಮಂತ ಎಂಬುವರು ವ್ಯಾಪಾರಕ್ಕಾಗಿ ಹೋಗಿದ್ದಾಗ ಅಲ್ಲಿರುವ ಬೀದಿ ನಾಯಿಗಳು ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿವೆ.
ಬೀದಿ ನಾಯಿಗಳು ವೃದ್ಧನ ಮೇಲೆ ದಾಳಿಮಾಡಿ ಕಚ್ಚಿ ತೀವ್ರವಾಗಿ ಗಾಯಗೊಳಿಸಿವೆ. ಕಾಲಿಗೆ ಕಚ್ಚಿದ್ದರಿಂದ ತುಂಬಾ ರಕ್ತ ಸ್ರಾವವಾಗಿದೆ. ತಕ್ಷಣ ಸಮುದಾಯ ಆರೋಗ್ಯ ಕೇಂದ್ರಕ್ಕೆ ತಂದು ಪ್ರಾರ್ಥಮಿಕ ಚಿಕಿತ್ಸೆ ನೀಡಲಾಗಿದೆ.
ತಿಂಗಳ ಹಿಂದೆ ನಗರಸಭೆಯ ವಾರ್ಡ್ ನಂ–27ರ ಯುವ ಮುಖಂಡ ಮೊಹಮ್ಮದ್ ಇಮ್ರಾನ್ ಅವರು ಜೆ.ಪಿ ಕಾಲೊನಿಯಲ್ಲಿ ನಾಯಿಗಳ ಹಾವಳಿ ಜಾಸ್ತಿಯಾಗಿದೆ, ಇವುಗಳನ್ನು ತಡೆಯಿರಿ ಎಂದು ಎನ್ಎಸಿ ಮುಖ್ಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದರು.
ಆದರೆ, ಎನ್ಎಸಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮುಖ್ಯ ಅಧಿಕಾರಿ ಮತ್ತು ಜನ ಪ್ರತಿನಿಧಿಗಳ ಮಾತಿಗೂ ಬೆಲೆ ಕೊಡದೇ ನಾಯಿಗಳ ಹಾವಳಿ ತಡೆಯಲು ವಿಫಲರಾಗಿದ್ದಾರೆ. ನಾಯಿಗಳ ದಾಳಿ ಹೆಚ್ಚಾಗಿ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಅಧಿಕಾರಿಗಳ ಈ ನಿಷ್ಕಾಳಜಿ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಕಾಲೊನಿ ಸ್ವಚ್ಛತೆ ಮತ್ತು ನಾಯಿಗಳ ಹಾವಳಿ ಬಗ್ಗೆ ಕಾಲೊನಿಯ ನಿವಾಸಿಗಳು ಹಲವಾರು ಬಾರಿ ಅಧಿಕಾರಿಗಳ ಗಮನಕ್ಕೆ ತಂದರು ಕೂಡ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ನಾಯಿಗಳನ್ನು ಸೆರೆ ಹಿಡಿಯಬೇಕು ಹಾಗೆ ಅಧಿಕಾರಿಯ ವಿರುದ್ಧ ಸೂಕ್ತ ಕ್ರಮವಾಗಬೇಕು ಎಂದು ನಿವಾಸಿಗಳ ಒತ್ತಾಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.