ADVERTISEMENT

ಕಲಬುರಗಿ: ಮಳೆಗೆ ಭೀಮೆಯ ಒಡಲು ಸೇರುವ ರಾಡಿ ನೀರು; ಶುದ್ಧೀಕರಣವೇ ಸವಾಲು

​ಪ್ರಜಾವಾಣಿ ವಾರ್ತೆ
Published 29 ಜುಲೈ 2024, 6:04 IST
Last Updated 29 ಜುಲೈ 2024, 6:04 IST
ಕಲಬುರಗಿಯ ಕೋಟನೂರ ಜಲಶುದ್ಧೀಕರಣ ಘಟಕದಲ್ಲಿ ನೀರು ಶುದ್ಧೀಕರಿಸುತ್ತಿರುವುದು   
ಕಲಬುರಗಿಯ ಕೋಟನೂರ ಜಲಶುದ್ಧೀಕರಣ ಘಟಕದಲ್ಲಿ ನೀರು ಶುದ್ಧೀಕರಿಸುತ್ತಿರುವುದು      

ಕಲಬುರಗಿ: ಜಿಲ್ಲೆಯ ಜೀವಜಲಕ್ಕೆ ಭೀಮಾ ನದಿಯೇ ಆಧಾರ. ಬೇಸಿಗೆಯಲ್ಲಿ ತಣ್ಣಗೆ ಮಲಗಿ, ಮಳೆಗಾಲದಲ್ಲಿ ಭೋರ್ಗರೆಯುವ ಭೀಮೆ ತೊಗರಿ ಕಣಜದ ಒಡಲು ತಂಪಾಗಿಸುತ್ತಾಳೆ. ನಗರ ಸೇರಿದಂತೆ ಜಿಲ್ಲೆಯ ಜನರಿಗೆ ಅವಳೇ ಆಧಾರ. ಹೀಗಿದ್ದರೂ ಜಿಲ್ಲೆಯಲ್ಲಿ ಮಾತ್ರ ಕುಡಿಯಲು ‘ಶುದ್ಧ ನೀರಿಗೆ ಬರ’ ಬರವಿದೆ. ಮಳೆಗಾಲದಲ್ಲಂತೂ ರಾಡಿ ನೀರೇ ಗತಿ ಎಂಬಂತಾಗಿದೆ.

ಕಲಬುರಗಿ ನಗರಕ್ಕೆ ನಿತ್ಯ 110 ಮಿಲಿಯನ್‌ ಲೀಟರ್‌ ನೀರು ಬೇಕು. ಆದರೆ, 82 ಮಿಲಿಯನ್ ಲೀಟರ್‌ ನೀರು ಮಾತ್ರ ಪೂರೈಕೆಯಿದೆ. ಭೀಮಾ ನದಿಗೆ ಸರಡಗಿ ಬಳಿ ಜಾಕ್‌ವೆಲ್ ಕೂಡಿಸಿ 60 ಎಂಎಲ್‌ಡಿ ನೀರು ತೆಗೆದುಕೊಳ್ಳಲಾಗುತ್ತದೆ. ಬೆಣ್ಣೆತೊರಾ ಜಲಾಶಯದಿಂದ 22 ಎಂಎಲ್‌ಡಿ ನೀರು ಪಡೆಯಲಾಗುತ್ತದೆ.

ಎರಡೂ ಜಾಕ್‌ವೆಲ್‌ಗಳಿಂದ 82 ಎಂಎಲ್‌ಡಿ ನೀರು ಪೂರೈಕೆಯಾದರೂ ನಗರಕ್ಕೆ ಸಿಗುವುದು 47 ಎಂಎಲ್‌ಡಿ ನೀರು ಮಾತ್ರ. ಶುದ್ಧೀಕರಣ ಪ್ರಕ್ರಿಯೆ. ಪೈಪ್‌ ಲೀಕೇಜ್‌ಗಳಿಂದಾಗಿ ಉಳಿದ ನೀರು ವೆಚ್ಚವಾಗುತ್ತದೆ ಎನ್ನುತ್ತಾರೆ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್‌ ಶಿವಕುಮಾರ.

ADVERTISEMENT

ನದಿಯಿಂದ ಬರುವ ನೀರನ್ನು ಶುದ್ಧೀಕರಿಸಲು ಮೂರು ಜಲಶುದ್ಧೀಕರಣ ಘಟಕಗಳನ್ನು ಸ್ಥಾಪಿಸಲಾಗಿದೆ. ಶೋರ್‌ಗುಂಬಜ್‌, ಕೋಟನೂರು ಮತ್ತು ಗಂಜ್‌ನಲ್ಲಿ ವಿವಿಧ ಸಾಮರ್ಥ್ಯದ ಶುದ್ಧೀಕರಣ ಘಟಕಗಳಿವೆ. ಅಲ್ಲಿಂದ ನಗರದಲ್ಲಿರುವ 37 ಓವರ್‌ ಹೆಡ್‌ ಟ್ಯಾಂಕ್‌ಗಳಿಗೆ ನೀರು ಸರಬರಾಜು ಮಾಡಿ ನಗರದ 55 ವಾರ್ಡ್‌ಗಳಿಗೆ ನೀರು ಪೂರೈಸಲಾಗುತ್ತದೆ. ಶುದ್ಧೀಕರಣ ಘಟಕದಲ್ಲಿ ಸೂಪರ್‌ ಕ್ಲೋರಿನೇಶನ್ ಮಾಡಿದರೂ ಮನೆಗಳಿಗೆ ಕಲುಷಿತ ನೀರು ಬರುತ್ತಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ಸದ್ಯ ಮಳೆಗಾಲ ಇರುವುದರಿಂದ ನದಿಗೆ ಮಣ್ಣಿನ ನೀರು ಸೇರಿ ಮನೆಯವರೆಗೂ ಮಣ್ಣು ಬರುತ್ತಿದೆ. ಕುಡಿಯೋದಿರಲಿ, ಬಟ್ಟೆ ತೊಳೆಯೋದಕ್ಕೂ ಜನತೆ ಯೋಚಿಸುವಂತಾಗಿದೆ. ಇದು ಶುದ್ಧೀಕರಣ ಘಟಕಗಳ ವೈಫಲ್ಯ ಎನ್ನುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ‘ನದಿ ನೀರೇ ಕೆಸರುಮಯವಾದಾಗ ಸಂಪೂರ್ಣ ಶುದ್ಧೀಕರಿಸಿದ ನೀರು ಅಸಾಧ್ಯ ಎಂಬ ಮಾತುಗಳನ್ನಾಡುತ್ತಿದ್ದಾರೆ. ಹೀಗಾಗಿ ಇನ್ನೂ ಹೆಚ್ಚಿನ ತಂತ್ರಜ್ಞಾನದ ಯಂತ್ರಗಳನ್ನು ಬಳಸಿ ಸಂಪೂರ್ಣ ಶುದ್ಧ ಕುಡಿಯುವ ನೀರು ಪೂರೈಸುವುದೇ ಇದಕ್ಕೆ ಪರಿಹಾರ’ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.

ನಗರದಲ್ಲಿ ಎಲ್ಲ ಪ್ರದೇಶಗಳಿಗೂ ನಿತ್ಯ ನೀರು ಬರುವುದಿಲ್ಲ. 55 ವಾರ್ಡ್‌ಗಳಲ್ಲಿ 23 ವಾರ್ಡ್‌ಗಳಿಗೆ 3 ದಿನಕ್ಕೊಮ್ಮೆ, 15 ವಾರ್ಡ್‌ಗಳಲ್ಲಿ 4 ದಿನಕ್ಕೊಮ್ಮೆ, 10 ವಾರ್ಡ್‌ಗಳಲ್ಲಿ 5 ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ. 7 ವಾರ್ಡ್‌ಗಳಲ್ಲಿ ಮಾತ್ರ ದಿನದ 24 ಗಂಟೆಯೂ ನೀರು ಪೂರೈಸಲಾಗುತ್ತಿದೆ.

ಕಲುಷಿತ ನೀರಿನ ಕುರಿತು ‘ಪ‍್ರಜಾವಾಣಿ’ ರಿಯಾಲಿಟಿ ಚೆಕ್‌ಗೆ ಇಳಿದಾಗ ನಗರಕ್ಕೆ ನೀರು ಪೂರೈಸುವ ಪೈಪ್‌ಗೆ ಹಾನಿ ಮಾಡಿರುವುದೇ ಕಲುಷಿತ ನೀರು ಮನೆಗಳನ್ನು ಸೇರಲು ಪ್ರಮುಖ ಕಾರಣವಾಗಿದೆ. ಯುಜಿಡಿ (ಒಳಚರಂಡಿ) ಕಾಮಗಾರಿ ಸೇರಿದಂತೆ ವಿವಿಧ ಕಾಮಗಾರಿಗಳಿಗಾಗಿ ನೆಲ ಅಗೆಯುವಾಗ ‍ಪೈಪ್‌ಗೆ ಹಾನಿಯಾಗುವುದು ಒಂದೆಡೆಯಾದರೆ, ಸುಂದರನಗರ ಸೇರಿದಂತೆ ಹಲವೆಡೆ ಅನಧಿಕೃತವಾಗಿ ನಲ್ಲಿ ಸಂಪರ್ಕ ಪಡೆಯಲಾಗಿದೆ. ಇದರಿಂದ ಕೆಲ ಸಂದರ್ಭದಲ್ಲಿ ಕಲುಷಿತ ನೀರು ಮನೆಗಳನ್ನು ಸೇರುತ್ತಿದೆ.

ನಗರದಲ್ಲಿ ಸುಮಾರು 35 ಇಂಚಿನ ನೀರು ಪೂರೈಕೆ ಪೈಪ್‌ಗಳು ಹಾದುಹೋಗಿದ್ದು, ಅವುಗಳಿಗೆ ಹಾನಿಯಾದಾಗ ಒಳಚರಂಡಿ ನೀರು, ಮಣ್ಣು ಮಿಶ್ರಿತ ಮಳೆ ನೀರು ಸೇರಿಕೊಳ್ಳುತ್ತಿದೆ. ಕೆಲವೆಡೆ ನೀರು ತುಂಬಿಕೊಂಡ ನಂತರ ಸಾರ್ವಜನಿಕರು ನಲ್ಲಿ ಬಂದ್‌ ಮಾಡದೇ ನೀರನ್ನು ಚರಂಡಿಗೆ ಬಿಡುತ್ತಿದ್ದಾರೆ. ಆ ನೀರು ಮತ್ತೆ ಒಡೆದ ಪೂರೈಕೆ ಪೈಪ್‌ ಸೇರಿಕೊಳ್ಳುತ್ತದೆ. ಇನ್ನೂ ಕೆಲವೆಡೆ ಮೋಟರ್ ಹಚ್ಚಿ ನೀರು ಜಗ್ಗಿಸುತ್ತಾರೆ. ಹೀಗಾಗಿ ಪೈಪ್‌ಲೈನ್‌ ಡ್ಯಾಮೇಜ್‌ ಆಗಿದ್ದರೆ ಮಾತ್ರ ಅಂತಹ ಪ್ರದೇಶಗಳಲ್ಲಿ ನೀರು ಕಲುಷಿತವಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು. ಹೀಗಾಗಿ ಶುದ್ಧ ನೀರು ಮನೆಗಳನ್ನು ಸೇರಲು ಸಾರ್ವಜನಿಕರ ಸಹಕಾರವೂ ಮುಖ್ಯವಾಗಿದೆ. 

ಭೀಮಾತೀರದಲ್ಲೇ ಸಿಗದ ಶುದ್ಧ ನೀರು!

ಅಫಜಲಪುರ: ಪಟ್ಟಣದ ಜನತೆ ನದಿಯ ನೀರನ್ನೇ ಕುಡಿಯುತ್ತಾರೆ. 30 ವರ್ಷಗಳ ಹಿಂದಿನ ಶುದ್ಧೀಕರಣ ಘಟಕ ಹಾಳಾಗಿ 20 ವರ್ಷಗಳೇ ಕಳೆದಿವೆ. ಇದುವರೆಗೂ ದುರಸ್ತಿ ಮಾಡಿಲ್ಲ. ಪುರಸಭೆಯವರು ಯಾವುದೇ ನೀರು ಶುದ್ಧೀಕರಣ ಘಟಕ ಅಳವಡಿಸಿಲ್ಲ.

ಭೀಮೆಯ ಒಡಲಿಗೆ ಪಟ್ಟಣದ ಚರಂಡಿ ನೀರೂ ಸೇರುತ್ತಿದೆ. ಹೀಗಾಗಿ ಅದೇ ಮರಳುತ್ತಿದೆ. ಭೀಮಾ ತೀರದ ಸುಮಾರು 40 ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಹಾಳಾಗಿವೆ. ಮರಳಿ ಯಾರೂ ತಿರುಗಿ ನೋಡಿಲ್ಲ. ನಿರ್ವಹಣೆ ಹೊಣೆ ಹೊತ್ತ ಪಂಚಾಯಿತಿಯವರು ದುರಸ್ತಿ ಮಾಡಿಲ್ಲ. 10 ಗ್ರಾಮಗಳಲ್ಲಿ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು ವ್ಯವಸ್ಥೆ ಮಾಡಲಾಗಿದೆ. ಆದರೆ, ಎಲ್ಲ ಘಟಕಗಳೂ ಹಾಳುಬಿದ್ದಿವೆ. ಇಲ್ಲಿಯವರೆಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯವರೂ ಯಾವುದೇ ಕ್ರಮ ಕೈಗೊಂಡಿಲ್ಲ.

ಕಮಲಾಪುರಕ್ಕೆ ಬೇಕು ಕ್ಲೊರಿನೇಷನ್‌

ಕಮಲಾಪುರ: ತಾಲ್ಲೂಕಿನ ಬಬಲಾದ ಐ.ಕೆ ಹಾಗೂ ಐದು ಗ್ರಾಮಗಳಿಗೆ ನೀರೊದಗಿಸುವ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಬೆಣ್ಣೆತೊರೆಯಿಂದ ನೀರು ಸರಬರಾಜಾಗುತ್ತಿದೆ. ಬಬಲಾದ ಐಕೆ ಗ್ರಾಮದ ದಿಬ್ಬದ ಮೇಲೆ ಶುದ್ಧೀಕರಣ ಘಟಕ ಸ್ಥಾಪಿಸಲಾಗಿದೆ. ಇಲ್ಲಿ ಕೇವಲ ಮರಳಿನಿಂದ ನೀರು ಶುದ್ಧೀಕರಣ ನಡೆಯುತ್ತದೆ. ಕ್ಲೋರಿನೇಷನ್‌ ಮಾಡುತ್ತಿಲ್ಲ.

ಇನ್ನು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಗಂಡೋರಿ ಜಲಾಶಯದ ನೀರು ಸರಬರಾಜಾಗುತ್ತದೆ. ನವನಿಹಾಳ ಬಳಿ ಶುದ್ಧೀಕರಣ ಘಟಕವಿದೆ. ಇಲ್ಲಿಯೂ ಕೇವಲ ಮರಳಿನಿಂದ ಶುದ್ಧೀಕರಣ ಮಾಡಲಾಗುತ್ತಿದೆ. ಹರಸೂರ ಗ್ರಾಮಕ್ಕೂ ಬೆಣ್ಣೆತೊರೆ ನೀರು ಸರಬರಾಜಾಗುತ್ತದೆ. ಅಲ್ಲಿಯೂ ಇದೆ ಸಮಸ್ಯೆ. ಜಲಾಶಯದ ನೀರು ನೇರವಾಗಿ ಮರಳಿನಲ್ಲಿ ಬಿಡುವುದು ಬಿಟ್ಟರೆ ಮತ್ತೇನ್ನೂ ಮಾಡುವುದಿಲ್ಲ. ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯವರು ಒಂದು ಬಾರಿಯೂ ಭೇಟಿ ಕೊಡುವುದಿಲ್ಲ. ಶುದ್ಧೀಕರಣ ಘಟಕ ಕಾರ್ಯನಿರ್ವಹಿಸುವ ಬಗ್ಗೆ ಮಾಹಿತಿ ಪಡೆಯುವುದಿಲ್ಲ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದರು.

ಶಹಾಬಾದ್‌ಗೆ ಶುದ್ಧ ನೀರೇ ಸಿಗಲ್ಲ!

ಶಹಾಬಾದ್: ನಗರದಲ್ಲಿ ನೀರು ಶುದ್ಧೀಕರಣ ಘಟಕ 2012ರಲ್ಲಿ ಪ್ರಾರಂಭವಾಗಿದೆ. ಆದರೆ ಇಲ್ಲಿಯವರೆಗೂ ಶುದ್ಧ ನೀರು ಸರಬರಾಜು ಆಗುತ್ತಿಲ್ಲ. ಕೆಲವೊಂದು ಬಾರಿ ಪಾಚಿ ನೀರು, ಹಸಿರು ಬಣ್ಣದ ನೀರು, ಕಲುಷಿತ ನೀರು ಬರುತ್ತಿದೆ.

ಶುದ್ಧೀಕರಣ ಘಟಕಕ್ಕೆ ಭೇಟಿಕೊಟ್ಟಾಗ, ನದಿಯಿಂದ ಬರುವ ನೀರಿನಲ್ಲಿ ಕೆಸರು, ಮಣ್ಣು ಮತ್ತು ಪಾಚಿಯನ್ನು ಸ್ವಚ್ಛಗೊಳಿಸಿದ ಬಳಿಕ ನೀರನ್ನು ಬಿಡುವ ವ್ಯವಸ್ಥೆ ಮಾತ್ರ ಇದೆ. ಸಂಪೂರ್ಣವಾಗಿ ಶುದ್ಧೀಕರಣ ಮಾಡುವುದಿಲ್ಲ. ಇತ್ತೀಚೆಗೆ ನಡೆದ ವಾರ್ಡ್ ಮಟ್ಟದ ಜನಸ್ಪಂದನ ಸಭೆಯಲ್ಲಿ ಬಹುತೇಕರು ರಾಡಿ ನೀರು ಕೊಟ್ಟು ಶುದ್ಧ ನೀರು ಎಂದು ಹೇಳುತ್ತಿದ್ದೀರಿ. ಅದು ಕೂಡ ಸಮಯಕ್ಕೆ ಸರಿಯಾಗಿ ಬರುವುದಿಲ್ಲ’ ಎಂದು ನಿವಾಸಿಗಳು ದೂರು ಸಲ್ಲಿಸಿದ್ದಾರೆ.

ಪೂರಕ ಮಾಹಿತಿ: ಶಿವಾನಂದ ಹಸರಗುಂಡಗಿ, ಜಗನ್ನಾಥ ಶೇರಿಕಾರ, ಸಂಜಯ ಪಾಟೀಲ, ತೀರ್ಥಕುಮಾರ ಬೆಳಕೋಟಾ, ನಿಂಗಣ್ಣ ಜಂಬಗಿ, ಶ್ರಾವಣಯೋಗಿ ಹಿರೇಮಠ

ಚಿಂಚೋಳಿಯ ಚಂದಾಪುರದ ನೀರು ಶುದ್ಧೀಕರಣ ಘಟಕ
ನಗರದಲ್ಲಿವೆ 37 ಓವರ್‌ಹೆಡ್‌ ಟ್ಯಾಂಕ್‌, 964 ಬೋರ್‌ವೆಲ್‌ ಸರ್ಕಾರಿ ಹಾಸ್ಟೆಲ್‌, ಗಾರ್ಡನ್‌ಗಳಿಗೆ ಬೋರ್‌ವೆಲ್‌ ನೀರು ಮಾಸಿಕ 175 ನೀರಿನ ಕರ, ಕೆಲವಡೆ ಮೀಟರ್ ಲೆಕ್ಕ
ಜಿಲ್ಲೆಯಲ್ಲಿ ಕೊಳವೆಬಾವಿ ನೀರು ಕುಡಿಯಲು ಯೋಗ್ಯವಾಗಿಲ್ಲ. ಇಲ್ಲಿ ಸುಣ್ಣದಕಲ್ಲು ಹೆಚ್ಚಾಗಿರುವುದರಿಂದ ಕೊಳವೆಬಾವಿ ನೀರಲ್ಲಿ ಕ್ಯಾಲ್ಸಿಯಂ ಅಂಶ ಅಧಿಕವಾಗಿದೆ. ಹೀಗಾಗಿ ಕಾಯಿಸಿ ಸೋಸಿ ಆರಿಸಿ ಕುಡಿಯುವುದು ಉತ್ತಮ
ಡಾ.ರತ್ನಾಕರ ತೋರಣ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಅಧಿಕಾರಿ
ಕೆಕೆಆರ್‌ಡಿಬಿಯಿಂದ ನಗರದಲ್ಲಿ ₹ 5 ಕಾಯಿನ್‌ ಹಾಕಿ ನೀರು ಪಡೆಯುವ 39 ಘಟಕಗಳನ್ನು ಸ್ಥಾಪಿಸಲಾಗಿದೆ. ಧರ್ಮಸ್ಥಳ ಸಂಸ್ಥೆಯವರು 6 ಶಾಸಕ ಅಲ್ಲಮಪ್ರಭು ಪಾಟೀಲರು 10 ಸ್ಥಾಪಿಸಿ ಕೊಡುವುದಾಗಿ ತಿಳಿಸಿದ್ದಾರೆ
ಆರ್‌.ಪಿ.ಜಾಧವ್‌ ಪಾಲಿಕೆ ಉಪ ಆಯುಕ್ತ (ಅಭಿವೃದ್ಧಿ)
ಸುಮಾರು ₹ 62 ಕೋಟಿ ವೆಚ್ಚದಲ್ಲಿ ಭೀಮಾ ಬ್ಯಾರೇಜಿನಿಂದ ಪಟ್ಟಣಕ್ಕೆ ಕುಡಿಯುವ ನೀರಿನ ಯೋಜನೆ ಮುಗಿಯುವ ಹಂತದಲ್ಲಿದೆ. ಈ ಯೋಜನೆ ಪೂರ್ಣಗೊಂಡರೆ ನಿರಂತರವಾಗಿ ಪಟ್ಟಣಕ್ಕೆ ಶುದ್ಧ ನೀರು ದೊರೆಯುತ್ತದೆ
ವಿಜಯ ಮಹಾಂತೇಶ ಹೂಗಾರ ಪುರಸಭೆ ಮುಖ್ಯಾಧಿಕಾರಿ ಅಫಜಲಪುರ
ಭೀಮಾ ನದಿಯಿಂದ ಪೂರೈಕೆ ಆಗುವ ಮಲಿನ ನೀರೇ ನಮಗೆ ಅನಿವಾರ್ಯವಾಗಿದೆ. ಈ ಭಾಗದ ಜನಪ್ರತಿನಿಧಿಗಳು ಹಾಳಾಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ದುರಸ್ತಿ ಮಾಡಬೇಕು
ಲಕ್ಷ್ಮಣ್ ಕಟ್ಟಿಮನಿ ರೈತ ಮುಖಂಡ ಬಂದರವಾಡ
ಪುರಸಭೆ ವ್ಯಾಪ್ತಿಯ ಚಂದಾಪುರ ಪಟೇಲ್ ಕಾಲೊನಿ ಆಶ್ರಯ ಬಡಾವಣೆ ಹಾಗೂ ಚಿಂಚೋಳಿಯ ಕಲ್ಯಾಣ ಗಡ್ಡಿ ಪ್ರದೇಶಕ್ಕೆ 15 ದಿನಗಳಲ್ಲಿ ಸಮರ್ಪಕ ನೀರು ಪೂರೈಕೆಗೆ ವ್ಯವಸ್ಥೆ ಮಾಡಲಾಗುವುದು
ಕಾಶಿನಾಥ ಧನ್ನಿ ಚಿಂಚೋಳಿ ಪುರಸಭೆ ಮುಖ್ಯಾಧಿಕಾರಿ
ಜಲಶುದ್ಧೀಕರಣ ಘಟಕದಲ್ಲಿ ಆಗುವುದೇನು?
ನದಿಯಿಂದ ಜಾಕ್‌ವೆಲ್‌ನಲ್ಲಿ ಜಾಳಿಗೆಗಳ ಮೂಲಕ ನೀರನ್ನು ಸ್ಕ್ರೀನಿಂಗ್‌ ಮಾಡಿ ಸಂಪ್‌ಗೆ ತುಂಬಲಾಗುತ್ತದೆ. ಅಲ್ಲಿಂದ ಪ್ರಿ ಕ್ಲೊರಿನೇಷನ್‌ ಆಗಿ ಜಲ ಶುದ್ಧೀಕರಣ ಘಟಕಕ್ಕೆ ಬರುತ್ತದೆ. ಅಲ್ಲಿ ಫ್ಲ್ಯಾಶ್‌ ಮಿಕ್ಸಿಂಗ್‌ ಮಾಡಲಾಗುತ್ತದೆ. ಫ್ಲ್ಯಾಶ್‌ ಮಿಕ್ಸಿಂಗ್‌ ಎಂದರೆ ಆಲಂ ಬ್ಲೀಚಿಂಗ್‌ ಪಿಎಸಿ ಎಂಬ ರಾಸಾಯನಿಕಗಳ ಸೇರ್ಪಡೆಯಾಗಿದೆ. ಆಲಂ ಮಣ್ಣನ್ನು ತಡೆದರೆ ಬ್ಲೀಚಿಂಗ್‌ ಮತ್ತು ಪಿಎಸಿ ನೀರು ಶುದ್ಧೀಕರಿಸುತ್ತವೆ. ಬಳಿಕ ನೀರು ಫಿಲ್ಟರ್‌ ಗ್ಯಾಲರಿಗೆ ಬರುತ್ತದೆ. ತದನಂತದ ಪೋಸ್ಟ್‌ ಕ್ಲೋರಿನೇಷನ್‌ ಮಾಡಿ ನೀರು ಸಂಗ್ರಹ ಟ್ಯಾಂಕ್‌ಗೆ ತುಂಬಲಾಗುತ್ತದೆ. ನಂತರ ಓವರ್‌ ಹೆಡ್‌ ಟ್ಯಾಂಕ್‌ಗಳಿಗೆ ಪೂರೈಸಿ ನಗರಕ್ಕೆ ಸರಬರಾಜು ಮಾಡಲಾಗುತ್ತದೆ.
ಆರ್‌ಒ ವಾಟರ್‌ ವ್ಯವಹಾರ.. ಮನಬಂದಂತೆ ದರ!
ನಗರಕ್ಕೆ ಪೂರೈಕೆಯಾಗುವ ಜಲಶುದ್ಧೀಕರಣ ಘಟಕದ ನೀರನ್ನು ಬಳಕೆಗೆ ಮಾತ್ರ ಉಪಯೋಗಿಸುವ ಜನತೆ ಕುಡಿಯಲು ಆರ್‌ಒ ವಾಟರ್‌ ಅನ್ನೇ ಅವಲಂಬಿಸಿದ್ದಾರೆ. ಆರ್‌ಒ ಎಂದರೆ ರಿವರ್ಸ್‌ ಅಸ್ಮೋಸಿಸ್‌ (ಪ್ರತಿ ಪರಾಸರಣ). ಇದೊಂದು ಜೀವರಾಸಾಯಿಕ ಕ್ರಿಯೆಯಾಗಿದೆ. ಇಲ್ಲಿ ಅತ್ಯಂತ ತೆಳುವಾದ ಪೊರೆಯ ಮೂಲಕ ನೀರು ಹಾಯಿಸಲಾಗುತ್ತದೆ. ಆ ಪೊರೆ 0.0001 ಮೈಕ್ರಾನ್‌ನಷ್ಟು ಮಾತ್ರ ರಂಧ್ರ ಹೊಂದಿರುತ್ತದೆ. ಇದರಲ್ಲಿ ನೀರಿಗಿಂತ ದೊಡ್ಡ ಗಾತ್ರದ ಅಣುಗಳು ಹಾದುಹೋಗುವುದಿಲ್ಲ. ಹೀಗಾಗಿ ಶುದ್ಧ ನೀರು ದೊರೆಯುತ್ತದೆ. ಆದರೆ ಇದು ನಗರದಲ್ಲಿ ವ್ಯವಹಾರವಾಗಿ ಮಾರ್ಪಟ್ಟಿದೆ. ಕಲಬುರಗಿ ನಗರದಲ್ಲಿ 126 ಆರ್‌ಒ ವಾಟರ್‌ ಪ್ಲಾಂಟ್‌ಗಳಿವೆ. ಇವುಗಳಲ್ಲದೇ ಅನಧಿಕೃತ ಪ್ಲಾಂಟ್‌ಗಳೂ ಇವೆ ಎನ್ನುತ್ತಾರೆ ಪಾಲಿಕೆ ಉಪ ಆಯುಕ್ತ (ಅಭಿವೃದ್ಧಿ) ಆರ್.ಪಿ.ಜಾಧವ. 126 ವಾಟರ್ ಪ್ಲಾಂಟ್‌ಗಳಲ್ಲಿ 51 ಐಎಸ್‌ಐ ಅನುಮತಿ ಪಡೆದಿದ್ದರೆ 75 ವಾಣಿಜ್ಯ ಪರವಾನಗಿ ಪಡೆದು ವ್ಯವಹಾರ ನಡೆಸುತ್ತಿವೆ. 20 ಲೀಟರ್‌ ಕ್ಯಾನ್‌ಗೆ ₹ 10 ದರ ಇದೆ. ಆದರೆ ಪ್ರತಿ ಕ್ಯಾನ್‌ಗೆ ₹ 30ರವರೆಗೂ ದರ ಪಡೆಯುತ್ತಾರೆ.
ದುರಸ್ತಿ ಕಾಣದ ಪೈಪ್‌ಲೈನ್‌
ಆಳಂದ: ಪಟ್ಟಣಕ್ಕೆ ಅಮರ್ಜಾ ಅಣೆಕಟ್ಟೆಯಿಂದ ನೀರು ಸರಬರಾಜಾಗುತ್ತದೆ. ಪುರಸಭೆ ವತಿಯಿಂದ 1995ರಲ್ಲಿ 2.5 ಲಕ್ಷ ಲೀಟರ್‌ ನೀರು ಸಾಮರ್ಥ್ಯದ ಜಲ ಶುದ್ಧೀಕರಣ ಘಟಕವಿದೆ. ಆದರೆ ನಿವಾಸಿಗಳಿಗೆ ಅಶುದ್ಧ ಕುಡಿಯುವ ನೀರಿನ ತಾಪತ್ರಯ ತಪ್ಪುತ್ತಿಲ್ಲ. ಸಮರ್ಪಕ ನಲ್ಲಿ ಪೂರೈಕೆ ವ್ಯವಸ್ಥೆ ಇಲ್ಲದ ಕಾರಣ ಪಟ್ಟಣದ ನಿವಾಸಿಗಳು ಮನೆ ಮುಂದೆ ತಗ್ಗು ತೋಡಿ ನೀರು ಪಡೆಯುತ್ತಾರೆ. ಇದರಿಂದ ಅಶುದ್ಧ ನೀರು ಚರಂಡಿ ನೀರು ಮುಖ್ಯ ಪೈಪ್‌ಲೈನ್‌ಗೆ ಸೇರಿ ಅಶುದ್ಧ ನೀರು ಸರಬರಾಜು ಹೆಚ್ಚುತ್ತಿದೆ. ಹೊಸ ಬಡಾವಣೆಗಳಿಗೆ ಪೈಪ್‌ಲೈನ್‌ ವ್ಯವಸ್ಥೆ ಸಮಸ್ಯೆಯಾಗಿದೆ. ಸಮರ್ಪಕ ರಸ್ತೆಯೂ ಇಲ್ಲದ ಬಡಾವಣೆಗಳಲ್ಲಿ ನೀರು ಪೋಲು ಅಧಿಕವಾಗಿದೆ. ಹೀಗಾಗಿ ವಾರಕೊಮ್ಮೆ ನೀರು ಪೂರೈಕೆ ಅನಿವಾರ್ಯವಾಗಿದೆ. ಪಟ್ಟಣದ ನಿವಾಸಿಗಳು ಕುಡಿಯುವ ನೀರನ್ನು ಹಲವು ದಿನಗಳವರೆಗೆ ಸಂಗ್ರಹಿಸಿಡಬೇಕಾಗಿದೆ.
ಜಾಕ್‌ವೆಲ್‌ನಲ್ಲಿ ದೋಷ
ಚಿಂಚೋಳಿ: ಪಟ್ಟಣದಲ್ಲಿ ನಿಂತು ಬೀಸಿ ಕಲ್ಲು ಹೊಡೆದರೆ ಅದು ಮುಲ್ಲಾಮಾರಿ ನದಿಯಲ್ಲಿ ಬೀಳುವಷ್ಟು ಸಮೀಪದಲ್ಲಿದೆ. ನಾಗರಿಕರಿಗೆ ಶುದ್ಧೀಕರಿಸಿದ ನೀರು ಪೂರೈಸಲಾಗುತ್ತಿದೆ. ಆದರೆ ಇದು ಕೆಲವೊಂದು ಬಡಾವಣೆಗಳಿಗೆ ತಲುಪುತ್ತಿಲ್ಲ. ಚಂದಾಪುರದಲ್ಲಿ ದಿನ ಬಿಟ್ಟು ದಿನ ನೀರು ಪೂರೈಸಲಾಗುತ್ತಿದೆ. ಚಂದಾಪುರಕ್ಕೆ ಶುದ್ಧ ನೀರು ಪೂರೈಸುವ ಜಾಕ್‌ವೆಲ್‌ನಲ್ಲಿ ದೋಷ ಎದುರಾಗಿದ್ದರಿಂದ ಸಮಸ್ಯೆ ಉಂಟಾಗಿದೆ. ಜಾಕ್‌ವೆಲ್‌ನಲ್ಲಿ ಎರಡು ಪಂಪ್‌ಗಳಿದ್ದು ಒಂದೇ ಕಾರ್ಯನಿರ್ವಹಿಸುತ್ತಿದೆ. ಇನ್ನೊಂದು ದುರಸ್ತಿಯಲ್ಲಿದೆ. ಜಾಕ್‌ವೆಲ್‌ನಲ್ಲಿ ಹೂಳು ತುಂಬಿದ್ದರಿಂದ ಪದೇ ಪದೆ ಮೋಟರ್ ಸುಟ್ಟು ಹೋಗುತ್ತಿದೆ. ಹೀಗಾಗಿ ಜನರಿಗೆ ನೀರಿನ ಬವಣೆ ತಪ್ಪುತ್ತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.