ಕಲಬುರಗಿ: ‘ನನ್ನನ್ನು ಸೋಲಿಸಿದ್ದೀರಿ, ಕಾಂಗ್ರೆಸ್ನ ವಿಧಾನ ಪರಿಷತ್ ಅಭ್ಯರ್ಥಿಯನ್ನಾದರೂ ಗೆಲ್ಲಿಸಿ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ. ಜಿಲ್ಲೆಯ ಜನ ಸೋಲಿಸಿಬಿಟ್ಟರು ಎಂಬ ಸಂಗತಿ ಅವರ ಮನಸ್ಸಿನಲ್ಲಿ ಕುಳಿತುಬಿಟ್ಟಿದೆ. ಅದರ ಬದಲು; ಸೋಲಿಗೆ ಏನು ಕಾರಣ ಎಂದು ಅರ್ಥ ಮಾಡಿಕೊಳ್ಳಬೇಕಿತ್ತು’ ಎಂದು ಸಂಸದ ಡಾ.ಉಮೇಶ ಜಾಧವ ಪ್ರತಿಕ್ರಿಯಿಸಿದರು.
‘ನಾನು ಸಂಸದನಾದ ಮೇಲೆ ಅಭಿವೃದ್ಧಿ ನಿಂತಿದೆ ಎಂದು ಖರ್ಗೆ ಅವರು ಆರೋಪಿಸಿದ್ದಾರೆ. ಹಾಗಾದರೆ, ಅವರು 50 ವರ್ಷ ಅಧಿಕಾರದಲ್ಲಿದ್ದರು; ದೇಶದಲ್ಲಿ ಜಿಲ್ಲೆಯನ್ನು ನಂಬರ್ ಒನ್ ಮಾಡುವ ಅವಕಾಶವನ್ನು ಜನ ಅವರಿಗೆ ನೀಡಿದ್ದರು. ಮತ್ತೇಕೆ ಮಾಡಲಿಲ್ಲ?’ ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.
‘ನಾನು ಸಂಸದನಾದ ಆರೇ ತಿಂಗಳಿಗೆ ಕೊರೊನಾ ಉಪಟಳ ಆರಂಭವಾಯಿತು. ಅಭಿವೃದ್ಧಿಗಿಂತ ಹೆಚ್ಚಾಗಿ ನಾನು ಜನರ ಪ್ರಾಣ ರಕ್ಷಣೆಗೆ ಒತ್ತುಕೊಟ್ಟೆ. ಆಕ್ಸಿಜನ್, ಬೆಡ್, ರೆಮ್ಡಿಸಿವಿರ್ ಸೇರಿದಂತೆ ಹಲವುಬಾರಿ ನಾನೇ ಖುದ್ದಾಗಿ ಔಷಧಿಗಳನ್ನು ತಂದೆ. ಕಠಿಣ ಪರಿಸ್ಥಿತಿಯಲ್ಲೂ ಜನರೊಂದಿಗೆ ಇದ್ದೆ. ಸಂಸತ್ನ ಪ್ರತಿ ಅಧಿವೇಶನದಲ್ಲೂ ನಾನು ಜಿಲ್ಲೆಯ ಸಮಸ್ಯೆಗಳನ್ನು ಎತ್ತಿ ಹೇಳಿದ್ದೇನೆ’ ಎಂದರು.
‘ಕೇಂದ್ರ ಸರ್ಕಾರವನ್ನು ಮಹಾಭ್ರಷ್ಟ ಎಂದು ಖರ್ಗೆ ಅವರು ಹೇಳುತ್ತಿದ್ದಾರೆ. ಇಷ್ಟು ವರ್ಷಗಳಲ್ಲಿ ಒಂದಾದರೂ ಪ್ರಕರಣ ನಿಖರವಾಗಿ ಹೇಳಲಿ. ಕಾಂಗ್ರೆಸ್ ಸರ್ಕಾರವಿದ್ದಾಗ ದಿನಕ್ಕೊಂದು ಹಗರಣ ಬೆಳಕಿಗೆ ಬಂದಿದ್ದನ್ನು ಅವರು ಮರೆತಂತಿದೆ’ ಎಂದು ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ದೂರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.