ADVERTISEMENT

ಕಲಬುರಗಿಯಲ್ಲಿ ಚುನಾವಣೆ ಬಹಿಷ್ಕಾರದ ಕೂಗು

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2023, 9:25 IST
Last Updated 30 ಮಾರ್ಚ್ 2023, 9:25 IST
   

ಕಲಬುರಗಿ: ಸೇಡಂ ರಸ್ತೆಯ ಪೂಜಾ ಕಾಲೊನಿಯಲ್ಲಿನ ಮೂಲಸೌಲಭ್ಯ ಕೊರತೆಯನ್ನು ಖಂಡಿಸಿ ಇಲ್ಲಿನ ನಿವಾಸಿಗಳು ಸಾಮೂಹಿಕವಾಗಿ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದಾರೆ.

‌2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಪೂಜಾ ಕಾಲೊನಿಯ ನಿವಾಸಿಗಳಿಂದ ಚುನಾವಣೆ ಬಹಿಷ್ಕಾರ. ಯಾವ ರಾಜಕೀಯ ಪಕ್ಷದವರಿಗೆ ಕಾಲೊನಿಯ ಒಳಗೆ ಪ್ರವೇಶ ಇರುವುದಿಲ್ಲ ಎಂದು ಬ್ಯಾನರ್‌ನಲ್ಲಿ ಬರೆದಿದ್ದಾರೆ.


‘ಮೂರು–ನಾಲ್ಕು ವರ್ಷಗಳಿಂದ ಕಾಲೊನಿಗೆ ರಸ್ತೆ, ಒಳ ಚರಂಡಿ ಸ್ವಚ್ಛತೆ, ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಸೇರಿದಂತೆ ಇತರೆ ಸಮಸ್ಯೆಗಳ ನಿವಾರಣೆಗೆ ಮನವಿ ಸಲ್ಲಿಸಿದ್ದರೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಹೀಗಾಗಿ, ಚುನಾವಣೆಯಲ್ಲಿ ಮತದಾನದಿಂದ ದೂರ ಉಳಿಯುವ ತೀರ್ಮಾನಕ್ಕೆ ಬಂದಿದ್ದೇವೆ’ ಎಂದು ಕಾಲೊನಿ ನಿವಾಸಿ ಎ.ಎಲ್‌.ಉಪಳಾಂವಕರ್ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‌‘ರಸ್ತೆಯ ತುಂಬೆಲ್ಲ ಗುಂಡಿಗಳು ಬಿದ್ದಿವೆ. ರಸ್ತೆ ಬದಿಯಲ್ಲಿ ಸಾಗಿದರೆ ಮೈಯಲ್ಲ ಧೂಳು ಆವರಿಸಿಕೊಳ್ಳುತ್ತದೆ. ಬಡಾವಣೆಯಲ್ಲಿ ಸರಿಯಾದ ತ್ಯಾಜ್ಯ ಸಂಗ್ರಹ ಘಕಗಳು ಇಲ್ಲದೆ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿದೆ. ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ಕೆಲವೆಡೆ ನೀರಿನ ಘಟಕ ಇದ್ದರೂ ಪ್ರಯೋಜನಕ್ಕೆ ಬಾರದಂತೆ ಆಗಿವೆ. ಇಂತಹ ಸಮಸ್ಯೆಗಳ ನಡುವೆ ನಿತ್ಯ ಜೀವನ ಸಾಗಿಸುತ್ತಿದ್ದೇವೆ’ ಎಂದು ಅವರು ಅಲವತ್ತುಕೊಂಡರು.

‘ಕಾಲೊನಿಯ ನಿವಾಸಿಗಳು ತೀರ್ಮಾನಿಸಿ ಚುನಾವಣೆಯಲ್ಲಿ ಮತದಾನ ಬಹಿಷ್ಕಾರದ ತೀರ್ಮಾನ ಮಾಡಿ ನಾಲ್ಕು ಕಡೆ ಬ್ಯಾನರ್ ಅಂಟಿಸಲಾಗಿತ್ತು. ಚುನಾವಣೆ ನೀತಿ ಸಂಹಿತೆಯ ಕಾರಣ ಪೊಲೀಸರು ಬಂದು ಬ್ಯಾನರ್‌ಗಳನ್ನು ತೆರವುಗೊಳಿಸಿದ್ದಾರೆ. ಜಿಲ್ಲಾಧಿಕಾರಿಗಳಿಗೆ ಕಾಲೊನಿಯ ಸಮಸ್ಯೆಗಳ ಕುರಿತು ಮನವಿ ಪತ್ರ ಸಲ್ಲಿಸಲಾಗುವುದು’ ಎಂದರು.

‘ಅಧಿಕಾರಿಗಳನ್ನು ಕಳುಹಿಸಿ ಪೂಜಾ ಕಾಲೊನಿ ನಿವಾಸಿಗಳ ಸಮಸ್ಯೆಗಳನ್ನು ಆಲಿಸಲಾಗುವುದು. ಇಂತಹ ಘಟನೆಗಳು ಕಂಡುಬಂದ ತಕ್ಷಣವೇ ತಹಶೀಲ್ದಾರ್, ಸ್ಥಳೀಯ ಚುನಾವಣೆ ಅಧಿಕಾರಿಗಳನ್ನು ಕಳುಹಿಸುತ್ತೇವೆ’ ಎಂದು ಜಿಲ್ಲಾಧಿಕಾರಿ ಯಶವಂತ ಗುರುಕರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.