ಚಿಂಚೋಳಿ: ವನ್ಯಜೀವಿ ಬೇಟೆಯಾಡಲು 15 ಎಕರೆ ವಿಶಾಲ ಪ್ರದೇಶದಲ್ಲಿ ಬೈಂಡಿಂಗ್ ಹಾಕಿ ಅದಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದರಿಂದ ಮಾವಿನ ಹಣ್ಣು ತರಲು ಹೊಲಕ್ಕೆ ಹೋಗುತ್ತಿದ್ದ ವ್ಯಕ್ತಿಯೊಬ್ಬ ವಿದ್ಯುತ್ ಪ್ರವಹಿಸುತ್ತಿದ್ದ ತಂತಿ ತುಳಿದು ಸ್ಥಳದಲ್ಲಿಯೇ ಸಾವನ್ನಪ್ಪಿದರೆ, ಇನ್ನೊಬ್ಬ ವ್ಯಕ್ತಿ ಗಾಯಗೊಂಡ ಘಟನೆ ತಾಲ್ಲೂಕಿನ ಜಿಲವರ್ಷಾ ತಾಂಡಾದಲ್ಲಿ ಭಾನುವಾರ ನಡೆದಿದೆ.
ಪಾಂಡು ಧರ್ಮು (31) ಮೃತಪಟ್ಟ ವ್ಯಕ್ತಿ. ರಾಜು ಎಂಬಾತನಿಗೆ ಗಾಯಗಳಾಗಿದ್ದು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಘಟನೆಯ ಹಿನ್ನೆಲೆಯಲ್ಲಿ ಗ್ರಾಮದ ಅರುಣ ಪಾಂಡು, ಅರುಣ ಮಾಣಿಕ ಮತ್ತು ಭೀಮಸಿಂಗ್ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ. ಸಾವನ್ನಪ್ಪಿದ ಪಾಂಡು ಅವರಿಗೆ ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ.
ಡಿವೈಎಸ್ಪಿ ವೀರಭದ್ರಯ್ಯ, ಸರ್ಕಲ್ ಇನಸ್ಪೆಕ್ಟರ್ ಎಚ್.ಎಂ. ಇಂಗಳೇಶ್ವರ್, ಸಬ್ ಇನ್ಸ್ಪೆಕ್ಟರ್ ಉಪೇಂದ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕುಂಚಾವರಂ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಲಾಕಡೌನ್ನಿಂದ ವನ್ಯಜೀವಿ ಧಾಮದ ಸುತ್ತಲೂ ವನ್ಯಜೀವಿಗಳ ಬೇಟೆ ಹೆಚ್ಚಾಗಿದೆ. ಪ್ರತಿದಿನ ಇಲ್ಲಿ ಬೇಟೆಯಾಡುವುದು ಮಾಮೂಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.