
ಪ್ರಜಾವಾಣಿ ವಾರ್ತೆ
ಅಫಜಲಪುರ: ಪಟ್ಟಣವೂ ಸೇರಿದಂತೆ ತಾಲ್ಲೂಕಿನ ಎಲ್ಲೆಡೆ ಶುಕ್ರವಾರ ಎಳ್ಳ ಅಮಾವಾಸ್ಯೆಯನ್ನು ಸಡಗರದಿಂದ ಆಚರಿಸಲಾಯಿತು.
ಪಟ್ಟಣದ ಜನರು ಉದ್ಯಾನ, ಕಲ್ಯಾಣ ಮಂಟಪ, ದೇವಸ್ಥಾನಗಳಿಗೆ ಹೋಗಿ ಸಂಭ್ರಮಿಸಿದರೆ, ಹಳ್ಳಿಯ ಜನ ಹೊಲಗಳಿಗೆ ಹೋಗಿ ಜೋಳದ ಹೊಲದಲ್ಲಿ ಚರಗ ಚೆಲ್ಲಿ ಊಟ ಮಾಡುವ ಮೂಲಕ ಹಬ್ಬದ ಸಡಗರ ಅನುಭವಿಸಿದರು.
ಹೊಸ ಬಟ್ಟೆ ತೊಟ್ಟು, ಬಿದಿರಿನ ಬುಟ್ಟಿಗಳಲ್ಲಿ ತಹರೇವಾರಿ ಭಕ್ಷ್ಯ ಭೋಜನಗಳನ್ನು ತುಂಬಿಕೊಂಡು ಎತ್ತಿನ ಗಾಡಿ, ಟ್ಯ್ರಾಕ್ಟರ್ ಮತ್ತು ಜೀಪ್, ಬೈಕ್ಗಳಲ್ಲಿ ಮತ್ತು ಮಹಿಳೆಯರು ತಲೆಯ ಮೇಲೆ ಬುಟ್ಟಿಗಳನ್ನು ಹೊತ್ತು ಹೊಲದ ಕಡೆಗೆ ಹೋಗುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.
ಪಟ್ಟಣದ ಹೊರವಲಯದ ಬಸಯ್ಯ ಮಲ್ಲಯ್ಯ ನಂದಿಕೋಲ್ ಅವರ ತೋಟದಲ್ಲಿ ಗೆಳೆಯರ ಬಳಗದವರು ಹಬ್ಬ ಆಚರಿಸಿದರು. ಕಾರ್ಯಕ್ರಮದಲ್ಲಿ ವಿಶ್ವರಾಧ್ಯಮಳೇಂದ್ರ ಶಿವಾಚಾರ್ಯರು ಭಾಗವಹಿಸಿ ಎಳ್ಳ ಅಮವಾಸ್ಯೆಯ ಮಹತ್ವ ತಿಳಿಸಿದರು. ಕೆಕೆಆರ್ಟಿಸಿ ಅಧ್ಯಕ್ಷ ಅರುಣ್ ಕುಮಾರ್ ಪಾಟೀಲ್ ಮಾತನಾಡಿದರು. ಭೋಜನಕೂಟದಲ್ಲಿ ರೈತ ಮುಖಂಡರಾದ ಚನ್ನಬಸಯ್ಯ ಹಿರೇಮಠ, ಸಂಜು ಕುಮಾರ್ ನಿಂಬಾಳ, ಶಿವಾನಂದ ಗಾಡಿ ಸಾಹುಕಾರ, ಸೈಪನ್ ಸಾಬ್ ಚಿಕ್ಕಳಗಿ, ಕಾಂತು ಮ್ಯಾಳೆಸಿ, ಶರಣು ಕುಂಬಾರ, ಬಸವರಾಜ್ ಮ್ಯಾಳೆಸಿ, ವಿಶ್ವನಾಥ್ ಮಲಗಣ, ಪ್ರೇಮಕುಮಾರ ರಾಠೋಡ್ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.