ADVERTISEMENT

ಕಲಬುರಗಿ: ‘ವೈದ್ಯಕೀಯ ಕ್ಷೇತ್ರದಲ್ಲಿ ನಿರಂತರ ನಿಗಾ ಅಗತ್ಯ’

ಇಎಸ್ಐಸಿ ವೈದ್ಯಕೀಯ ಕಾಲೇಜಿನಲ್ಲಿ ನಾಲ್ಕನೇ ವರ್ಷದ ಪದವಿ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 16 ಮೇ 2022, 3:00 IST
Last Updated 16 ಮೇ 2022, 3:00 IST
ಇಎಸ್‌ಐ ವೈದ್ಯಕೀಯ ಕಾಲೇಜಿನಲ್ಲಿ ಭಾನುವಾರ ಕಲಬುರಗಿ ಪೊಲೀಸ್ ಕಮಿಷನರ್ ಡಾ. ವೈ.ಎಸ್. ರವಿಕುಮಾರ್ ವಿದ್ಯಾರ್ಥಿನಿಯೊಬ್ಬರಿಗೆ ಪದವಿ ಪ್ರಮಾಣಪತ್ರ ಪ್ರದಾನ ಮಾಡಿದರು. ಕಾಲೇಜಿನ ಡೀನ್ ಡಾ. ಇವಾನ್ ಲೋಬೊ ಇತರರು ಇದ್ದರು
ಇಎಸ್‌ಐ ವೈದ್ಯಕೀಯ ಕಾಲೇಜಿನಲ್ಲಿ ಭಾನುವಾರ ಕಲಬುರಗಿ ಪೊಲೀಸ್ ಕಮಿಷನರ್ ಡಾ. ವೈ.ಎಸ್. ರವಿಕುಮಾರ್ ವಿದ್ಯಾರ್ಥಿನಿಯೊಬ್ಬರಿಗೆ ಪದವಿ ಪ್ರಮಾಣಪತ್ರ ಪ್ರದಾನ ಮಾಡಿದರು. ಕಾಲೇಜಿನ ಡೀನ್ ಡಾ. ಇವಾನ್ ಲೋಬೊ ಇತರರು ಇದ್ದರು   

ಕಲಬುರಗಿ: ವೈದ್ಯಕೀಯ ಕ್ಷೇತ್ರವು ತುರ್ತು ಸೇವಾ ಕಾರ್ಯವಾಗಿದ್ದು, ಅಗತ್ಯ ಸಂದರ್ಭದಲ್ಲಿ ಮುಂದೆ ಬಂದು ಸಾರ್ವಜನಿಕ ಸೇವೆ ಮಾಡಬೇಕು. ನಿರಂತರ ನಿಗಾ ವಹಿಸಬೇಕಾದ ಕ್ಷೇತ್ರವಾಗಿದೆ. ಪೊಲೀಸ್ ಇಲಾಖೆಯಂತೆ ಹಗಲು, ರಾತ್ರಿ ಎನ್ನದೇ ನಿರಂತರ ಸೇವೆ ಸಲ್ಲಿಸಬೇಕಾಗುತ್ತದೆ ಎಂದು ಕಲಬುರಗಿ ಪೊಲೀಸ್ ಕಮಿಷನರ್ ಡಾ. ವೈ.ಎಸ್. ರವಿಕುಮಾರ್ ಅಭಿಪ್ರಾಯಪಟ್ಟರು.

ನಗರದ ಇಎಸ್ಐಸಿ ವೈದ್ಯಕೀಯ ಮಹಾವಿದ್ಯಾಲಯದ ನಾಲ್ಕನೇ ವರ್ಷದ ಪದವಿ ದಿನಾಚರಣೆಗೆ ಭಾನುವಾರ ಚಾಲನೆ ನೀಡಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು.

‘ನಾನು ಐಪಿಎಸ್ ಅಧಿಕಾರಿಯಾಗಿ ಏನಾದರೂ ಸಾಧಿಸಿದ್ದರೆ ಅದಕ್ಕೆ ಮುಖ್ಯ ಕಾರಣ ವೈದ್ಯಕೀಯ ಶಿಕ್ಷಣವಾಗಿದೆ. ವೈದ್ಯಕೀಯ ವಿದ್ಯಾರ್ಥಿಗಳು ವೈದ್ಯಕೀಯ ತರಬೇತಿ ಜತೆ, ವಿವಿಧ ಕ್ಷೇತ್ರದಲ್ಲಿನ ವಿಷಯಗಳ ಕುರಿತು ಕಲಿಯುವುದು ಮುಖ್ಯವಾಗಿದೆ. ವೈದ್ಯಕೀಯ ಕ್ಷೇತ್ರದ ನೈತಿಕ ಅಂಶಗಳನ್ನು ತಮ್ಮ ವೈದ್ಯಕೀಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದರು.

ADVERTISEMENT

‘ವೈದ್ಯರು ಚಿಕಿತ್ಸೆ ನೀಡುವ ಸಮಯದಲ್ಲಿ ರೋಗಿಯ ಸಂಬಂಧಿಕರ ಜತೆ ಸಂಪರ್ಕಿಸುವುದು ಅಗತ್ಯ. ಆದರೆ, ಇಂದಿನ ದಿನಗಳಲ್ಲಿ ರೋಗಿಯ ಹಾಗೂ ಅವರ ಸಂಬಧಿಕರ ಜತೆಯಲ್ಲಿ ಸಂವಹನ ನಡೆಸುವುದೇ ಸವಾಲಾಗಿದೆ. ಸೂಕ್ತ ರೋಗಕ್ಕೆ ಸೂಕ್ತ ಚಿಕಿತ್ಸೆ ಮುಖ್ಯ’ ಎಂದರು.

ಪ್ರತಿಜ್ಞಾವಿಧಿ ಬೋಧಿಸಿದ ಇಎಸ್ಐಸಿ ವೈದ್ಯಕೀಯ ಕಾಲೇಜಿನ ಡೀನ್ ಇವಾನ್ ಲೋಬೊ, ‘ವಿದ್ಯಾರ್ಥಿಗಳ ಇಂದಿನ ಸಾಧನೆ ಹಿಂದೆ ಅವರ ತಂದೆ ತಾಯಿಯ ಅಪಾರ ಪ್ರೋತ್ಸಾಹ, ಬೆಂಬಲ ಹಾಗೂ ಪರಿಶ್ರಮ ಇದೆ’ ಎಂದರು.

ವೈದ್ಯ ಶಿಕ್ಷಣ ಪೂರೈಸಿದ ಸೊಹೆತ್, ಪವನ ಬೀದರ್ ತಮ್ಮ ಅನಿಸಿಕೆ ಹಂಚಿಕೊಂಡರು.

ಮಕ್ಕಳ ಚಿಕಿತ್ಸಾ ವಿಭಾಗದ ಹಿರಿಯ ವೈದ್ಯ ಡಾ. ವೀರಭದ್ರಪ್ಪ ಹರಸಣಗಿ, ಇಎಸ್ಐಸಿ ದಂತ ವೈದ್ಯ ವಿಭಾಗದ ಡೀನ್ ಡಾ. ಎಂ. ನಾಗರಾಜ, ಡೀನ್ ಕೆ.ಪಿ. ಪದ್ಮಜಾ, ಅಕಾಡೆಮಿಕ್ ರಿಜಿಸ್ಟ್ರಾರ್ ಡಾ. ಐ. ಅಮೃತಾ ಸ್ವಾತಿ, ಡಾ. ಅನಿಲ್ ದೊಡ್ಡಮನಿ ಇದ್ದರು.

*

ವಿದ್ಯಾರ್ಥಿಗಳು ಯಶಸ್ವಿ ವೈದ್ಯರಾಗಲು ರೋಗಿಯ ಸಮಸ್ಯೆ ಅರಿತು, ವೃತ್ತಿಪರತೆ, ಬದ್ಧತೆಯಿಂದ ರೋಗಿಗೆ ಚಿಕಿತ್ಸೆ ನೀಡಬೇಕು. ರೋಗಿಗೆ ಸೂಕ್ಷ್ಮ ಮಾಹಿತಿ ನೀಡುವ ಮೂಲಕ ಭರವಸೆ ಮೂಡಿಸಬೇಕು.
-ಡಾ. ಪಿ.ಎಸ್. ಶಂಕರ್,ಹಿರಿಯ ವೈದ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.