ADVERTISEMENT

ಪ್ರತಿಭಟನಕಾರರ ಬಳಿ ಬಾರದ ಸಿಎಂ: ಮುತ್ತಿಗೆ ಹಾಕಲು ಹೊರಟ ರೈತರು ಪೊಲೀಸ್‌ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2025, 5:10 IST
Last Updated 18 ಸೆಪ್ಟೆಂಬರ್ 2025, 5:10 IST
   

ಕಲಬುರಗಿ: ರೈತರ ಬಾಕಿ ಇರುವ ವಿಮೆ ಮತ್ತು ವಿಮಾ ರಹಿತ ರೈತರ ಪರಿಹಾರ ಬಿಡುಗಡೆ ಮಾಡುವಂತೆ ಹಾಗೂ ಅತಿವೃಷ್ಟಿಯಿಂದ ಹಾನಿಯಾಗಿರುವ ಬೆಳೆಗಳಿಗೆ ಎಕರೆಗೆ ₹25 ಸಾವಿರ ಪರಿಹಾರ ನೀಡಬೇಕು. ಕಲಬುರಗಿ ಅತಿವೃಷ್ಟಿ ಜಿಲ್ಲೆ ಎಂದು ಘೋಷಿಸುವಂತೆ ಆಗ್ರಹಿಸಿ ಜಿಲ್ಲಾ ರೈತ ಹೋರಾಟ ಸಮಿತಿ ನಡೆಸುತ್ತಿದ್ದ ಹೋರಾಟ ಬುಧವಾರ ಯಶಕಾಣಲಿಲ್ಲ.

ಮುಖ್ಯಮಂತ್ರಿ ಆಗಮನದ ಹಿನ್ನೆಲೆಯಲ್ಲಿ ಭೇಟಿಗಾಗಿ ‘ಕಲಬುರಗಿ ಚಲೋ’ಗೆ ಕರೆ ನೀಡಿದ್ದ ರೈತರು ಬೆಳಿಗ್ಗೆ 9 ಗಂಟೆಯಿಂದಲೇ ಸಾರ್ವಜನಿಕ ಉದ್ಯಾನವನದ ಯಾತ್ರಿನಿವಾಸದ ಬಳಿ ಜಮಾಯಿಸಿದ್ದರು. ಹೊತ್ತು ಏರುತ್ತಿದ್ದಂತೆ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ ರೈತರು ಸಹಸ್ರ ಸಂಖ್ಯೆಯಲ್ಲಿ ಸೇರಿದ್ದರು. ಮಧ್ಯಾಹ್ನ 1 ಗಂಟೆಯಾದರೂ ಮುಖ್ಯಮಂತ್ರಿ ತಮ್ಮತ್ತ ಸುಳಿಯದಿದ್ದಾಗ ಆಕ್ರೋಶಗೊಂಡ ರೈತರು ಧಿಕ್ಕಾರ ಕೂಗತೊಡಗಿದರು. ಮುಖ್ಯಮಂತ್ರಿಗೆ ಮುತ್ತಿಗೆಗೆ ಹಾಕಲು ಹೊರಟರು.

ಪರಿಸ್ಥಿತಿಯನ್ನು ಮೊದಲೇ ಅರಿತಿದ್ದ ಪೊಲೀಸರು ಬಿಗಿಬಂದೋಬಸ್ತ್‌ ಕೈಗೊಂಡಿದ್ದರು. ಅಲ್ಲದೇ ರ್‍ಯಾಪಿಡ್‌ ಆ್ಯಕ್ಷನ್‌ ಫೋರ್ಸ್‌ ಪಡೆಯನ್ನೂ ಕರೆಯಿಸಿದ್ದರು. ‘ಮುಖ್ಯಮಂತ್ರಿ ಇಲ್ಲಿಗೆ ಬರಬೇಕು. ಇಲ್ಲದಿದ್ದರೆ ನಾವು ಅಲ್ಲಿಗೆ ಹೋಗಬೇಕು’ ಎಂದು ರೈತರು ಪಟ್ಟು ಹಿಡಿದರು.

ADVERTISEMENT

ರೈತರು ಧರಣಿ ಸ್ಥಳದಿಂದ ಎದ್ದು ಹೊರಡುತ್ತಿದ್ದಂತೆ ಪೊಲೀಸರು ತಡೆಯೊಡ್ಡಿದರು. ಈ ವೇಳೆ ತಳ್ಳಾಟ, ನೂಕಾಟವೂ ನಡೆಯಿತು. ಈ ಜಟಾಪಟಿ ಸುಮಾರು 1 ಗಂಟೆಗೂ ಅಧಿಕ ಕಾಲ ನಡೆಯಿತು. ಸಂಘರ್ಷ ತೀವ್ರಗೊಳ್ಳುತ್ತಿದ್ದಂತೆ ಪೊಲೀಸರು ರೈತ ಮುಖಂಡರನ್ನು ವಶಕ್ಕೆ ಪಡೆದು ಅಶೋಕನಗರ ಪೊಲೀಸ್‌ ಠಾಣೆಗೆ ಕರೆದೊಯ್ದರು. ಮುಖ್ಯಮಂತ್ರಿ ಕಲಬುರಗಿಯಿಂದ ತೆರಳುವವರೆಗೂ ಠಾಣೆಯಲ್ಲಿರಿಸಿಕೊಂಡು ನಂತರ ಬಿಡುಗಡೆ ಮಾಡಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ದಯಾನಂದ ಪಾಟೀಲ, ಅವ್ವಣ್ಣ ಮ್ಯಾಕೇರಿ, ಪ್ರತಾಪ್‌ಸಿಂಗ್‌ ತಿವಾರಿ, ಬಸವರಾಜ ಇಂಗಿನ, ಚಂದ್ರಶೇಖರ ಹಿರೇಮಠ, ಮಲ್ಲಿನಾಥ ಪಾಟೀಲ ಎಲಗೋಡ, ಮಲ್ಲಿಕಾರ್ಜುನ ಪಾಟೀಲ ಹುಳಗೇರಾ, ಮಲ್ಲಣ್ಣ ಕುಲಕರ್ಣಿ, ಮಹೇಶ ಪಾಟೀಲ ಹಡಗಿಲ, ಶಿವಕುಮಾರ ಪಾಟೀಲ, ಮಲ್ಲಣ್ಣ ಮೇಳಕುಂದಿ, ಬಸವರಾಜ ಪಾಟೀಲ, ಮಲ್ಲಿನಾಥ ಪಾಟೀಲ ಕಾಳಗಿ, ಶಿವಾನಂದ ಮಠ, ಭೀಮಶೆಟ್ಟಿ ಮುಕ್ಕಾ, ಗಿರೀಶ ಪಾಟೀಲ, ಶರಣಗೌಡ ಪಾಟೀಲ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.  

ದಯಾನಂದ ಪಾಟೀಲ

‘ಯಾರೊಬ್ಬರಿಗೂ ರೈತರ ಕಾಳಜಿ ಇಲ್ಲ’ ಜಿಲ್ಲೆಯ ಹಿರಿಯ ಶಾಸಕರಾದ ಬಿ.ಆರ್.ಪಾಟೀಲ ಎಂ.ವೈ.ಪಾಟೀಲ ಮತ್ತು ಮಾಜಿ ಮುಖ್ಯಮಂತ್ರಿಯ ಪುತ್ರ ಅಜಯ್‌ಸಿಂಗ್‌ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಸೇರಿದಂತೆ ಜಿಲ್ಲೆಯ ಯಾವೊಬ್ಬ ಜನಪ್ರತಿನಿಧಿಗೂ ರೈತರ ಬಗ್ಗೆ ಕಾಳಜಿ ಇಲ್ಲ ಎಂದು ರೈತ ಮುಖಂಡ ದಯಾನಂದ ಪಾಟೀಲ ಆಕ್ರೋಶ ಹೊರ ಹಾಕಿದ್ದಾರೆ. ಅತಿವೃಷ್ಟಿಯಿಂದ ರೈತ ಸಂಕಷ್ಟದಲ್ಲಿದ್ದಾನೆ. ಮುಖ್ಯಮಂತ್ರಿ ನಮ್ಮೂರಿಗೆ ಬಂದಿದ್ದಾಗ ನಮ್ಮ ಕಷ್ಟವನ್ನು ಹೇಳಿಕೊಳ್ಳುತ್ತಿದ್ದೆವು. ಪರಿಹಾರಕ್ಕಾಗಿ ಬೇಡಿಕೆ ಇಡುತ್ತಿದ್ದೆವು. ಅವರು ನಮ್ಮಲ್ಲಿಗೆ ಬರದಿದ್ದರೂ ನಾವೇ ಅವರಲ್ಲಿಗೆ ಹೋಗುತ್ತಿದ್ದೆವು. ರೈತ ಮುಖಂಡರ ಭೇಟಿಗೂ ಅವಕಾಶ ನೀಡಲಿಲ್ಲ. ಇದಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತೇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.