ಕಲಬುರ್ಗಿ: ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿ ಇಲ್ಲಿನ ರೈಲು ನಿಲ್ದಾಣದಲ್ಲಿ ರೈಲು ತಡೆ ಚಳವಳಿಗೆ ಮುಂದಾದಸಂಯುಕ್ತ ಹೋರಾಟ ಕರ್ನಾಟಕ ಸಮಿತಿಯ 50ಕ್ಕೂ ಹೆಚ್ಚು ಮುಖಂಡರನ್ನು ಪೊಲೀಸರು ಬಂಧಿಸಿ, ನಂತರ ಬಿಡುಗಡೆ ಮಾಡಿದರು.
ಕೇಂದ್ರ ಸರ್ಕಾರ ತನ್ನ ರೈತ ವಿರೋಧಿ ಧೋರಣೆಗಳನ್ನು ಬದಲಿಸಿಕೊಳ್ಳಬೇಕು. ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿ, ಮುಖಂಡರು ನಾಲ್ಕು ತಾಸಿಗೂ ಹೆಚ್ಚು ಸಮಯ ರೈಲು ನಿಲ್ದಾಣದ ಮುಂದೆ ಧರಣಿ ನಡೆಸಿದರು. ಸಂಜೆ 4ರ ಸುಮಾರಿಗೆ ರೈಲು ಬರುವುದನನ್ನು ಖಚಿತಪಡಿಸಿಕೊಂಡ ನಂತರ ನಿಲ್ದಾಣದ ಒಳಗೆ ನುಗ್ಗಲು ಯತ್ನಿಸಿದರು. ಈ ವೇಳೆ ಕಾಂಗ್ರೆಸ್ ಮುಖಂಡ ಬಿ.ಆರ್. ಪಾಟೀಲ ಸೇರಿದಂತೆ ಎಲ್ಲ ಪ್ರತಿಭಟನಾಕಾರರನ್ನು ತಡೆದ ಪೊಲೀಸರು ಅವರುನ್ನು ಪೊಲೀಸ್ ವಾಹನಗಳಲ್ಲಿ ಹತ್ತಿಸಿ ಬೇರೆಡೆ ಕರೆದೊಯ್ದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ, ಕಾರ್ಪೊರೇಟ್ ಕಂಪನಿಗಳ ಪರವಾದ ಕಾಯ್ದೆ ಜಾರಿ ಮಾಡುತ್ತಿವೆ. ಎಪಿಎಂಸಿ ತಿದ್ದುಪಡಿ ಕಾಯ್ದೆ, ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ, ವಿದ್ಯುತ್ ಕಾಯ್ದೆ ಹಾಗೂ ಗುತ್ತಿಗೆ ಕೃಷಿ ಕಾಯ್ದೆ ಮತ್ತು ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ರದ್ದುಗೊಳಿಸಬೇಕು. ದೇಶದ ಕೃಷಿ ಭೂಮಿ, ಕೃಷಿ ಉತ್ಪಾದನೆ ಹಾಗೂ ಕೃಷಿ ಮಾರುಕಟ್ಟೆ, ಚಿಲ್ಲರೆ ವ್ಯಾಪಾರ ಮತ್ತು ವಿದ್ಯುತ್ ಕ್ಷೇತ್ರಗಳನ್ನು ರಕ್ಷಿಸಬೇಕು ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು.
ಸಂಘಟನೆಯ ಜಿಲ್ಲಾ ಘಟಕದ ಕಾರ್ಯದರ್ಶಿ ಎಚ್.ದಿವಾಕರ, ಪ್ರಮುಖರಾದ ಶೌಕತ್ಅಲಿ ಆಲೂರ, ಮೌಲಾ ಮುಲ್ಲಾ, ಶರಣಬಸಪ್ಪ ಮಮಶೆಟ್ಟಿ, ವಿ.ಜಿ. ದೇಸಾಯಿ, ಗಣಪತರಾವ್ ಮಾನೆ, ಎ.ಬಿ. ಹೊಸಮನಿ, ಅರ್ಜುನ್ ಭದ್ರೆ, ಶ್ಯಾಮ್ ನಾಟೀಕಾರ, ಬಸುಗೌಡ ಬಿರಾದಾರ, ಉಮಾಪತಿ, ಮಹೇಶ ಎಸ್.ಬಿ, ಕೆ. ನೀಲಾ, ಎಸ್.ಎಂ. ಶರ್ಮಾ, ಎಂ.ಬಿ. ಸಜ್ಜನ್, ಅಶೋಕ ಮ್ಯಾಗೇರಿ, ಭೀಮಾಶಂಕರ ಮಾಡ್ಯಾಳ, ಮಲ್ಲನಗೌಡ, ಅಶೋಕ ಘೂಳಿ ಮುಂತಾದವರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.