
ಕಲಬುರಗಿ: ಶಿಕ್ಷಣ ಇಲಾಖೆಯಲ್ಲಿನ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ಜಿ.ಎಂ.ವಿಜಯಕುಮಾರ ಅವರ ಅಭಿನಂದನಾ ಸಮಾರಂಭ ಮತ್ತು ‘ವಿಜಯೀಭವ’ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭವು ‘ಗುರು–ಶಿಷ್ಯರ’ ನಂಟು ಅನಾವರಣಕ್ಕೆ ವೇದಿಕೆಯಾಯಿತು.
ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಚಾಣಕ್ಯ ಕರಿಯರ್ ಅಕಾಡೆಮಿ ವಿಜಯಪುರ, ವಿಕಾಸ ಅಕಾಡೆಮಿ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಅಕ್ಷರದ ಅನ್ನ ನೀಡಿದ ಜಿ.ಎಂ.ವಿಜಯಕುಮಾರ ಅವರಿಗೆ ಹಳೇ ವಿದ್ಯಾರ್ಥಿಗಳು, ವಿವಿಧ ಇಲಾಖೆಯಲ್ಲಿನ ಸ್ನೇಹಿತರು, ಅಭಿಮಾನಿಗಳು ಸಾಲಾಗಿ ವೇದಿಕೆಗೆ ಬಂದು ವಿಶೇಷವಾಗಿ ಅಭಿನಂದನೆ ಸಲ್ಲಿಸಿದರು. ಅವರ ಕುರಿತು ಅಂಚೆ ಚೀಟಿ ಬಿಡುಗಡೆಗೊಂಡಿತು. ಅಭಿಮಾನಿಗಳ ಪ್ರೀತಿ ಕಂಡು ಜಿ.ಎಂ.ವಿಜಯಕುಮಾರ ಭಾವುಕರಾದರು.
ಶಾಲಾ ಶಿಕ್ಷಣ ಇಲಾಖೆಯ ವಿಶ್ರಾಂತ ಹೆಚ್ಚುವರಿ ಆಯುಕ್ತ ಎಸ್.ಜಿ.ವಾಲಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
‘ಜಿ.ಎಂ.ವಿಜಯಕುಮಾರ ಅಪ್ಪಟ ಪುಸ್ತಕ ಪ್ರೇಮಿ. ಓದುಗರು ಕಂಡರೆ ತಮ್ಮ ಸ್ವಂತ ಖರ್ಚಿನಿಂದ ಪುಸ್ತಕ ಖರೀದಿಸಿ ಅವರಿಗೆ ನೀಡುತ್ತಿದ್ದರು. ಈಗಾಗಲೇ ಸಮಾರು ₹3 ಲಕ್ಷಕ್ಕೂ ಅಧಿಕ ಮೌಲ್ಯದ ಪುಸ್ತಕಗಳನ್ನು ಹಂಚಿದ್ದಾರೆ. ಸಾವಿರಾರು ವಿದ್ಯಾರ್ಥಿಗಳ ಬಾಳಿನ ಬೆಳಕಾಗಿದ್ದಾರೆ. ಕಲ್ಯಾಣ ಕರ್ನಾಟದಲ್ಲಿ ಅವರ ಕೊಡುಗೆ ಅಪಾರವಾಗಿದೆ’
ಎಂದು ಕೊಂಡಾಡಿದರು.
ಜಿ.ಎಂ.ವಿಜಯಕುಮಾರ ಅಭಿನಂದನಾ ಸಮಿತಿ ಕಾರ್ಯಾಧ್ಯಕ್ಷ ಚನ್ನಬಸಪ್ಪ ಎಸ್.ಮುಧೋಳ ಮಾತನಾಡಿ, ‘ವಿಜಯಕುಮಾರ ಅವರು ಶಿಕ್ಷಣ ಇಲಾಖೆಯಲ್ಲಿ ಪುಸ್ತಕದ ಸಂತ. ಅವರು ಮಕ್ಕಳಿಗೆ ಕಲಿಸುವುದರ ಜತೆಗೆ ತಾವೂ ಕಲಿಯುತ್ತಿದ್ದರು. ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿದ್ದವರು’ ಎಂದರು.
ಶಿಕ್ಷಣ ತಜ್ಞ ಎಚ್.ವಿ.ವಾಮದೇವಪ್ಪ ಅಭಿನಂದನಾ ಗ್ರಂಥ ಬಿಡುಗಡೆಗೊಳಿಸಿ ಮಾತನಾಡಿದರು. ಕಾರಟಗಿಯ ಕೇಂಬ್ರಿಡ್ಜ್ ಪಬ್ಲಿಕ್ ಶಾಲೆಯ ಅಧ್ಯಕ್ಷ ಲೀಲಾ ಕಾರಟಗಿ ಮಾತನಾಡಿದರು. ಅಭಿನಂದನಾ ಗ್ರಂಥದ ಪ್ರಧಾನ ಸಂಪಾದಕ ಎಸ್.ಎಸ್.ಹಿರೇಮಠ, ಎನ್.ಎಂ.ಬಿರಾದಾರ, ಡಿ.ಎನ್.ಪಾಟೀಲ, ಜಯಶ್ರೀ ವಿಜಯಕುಮಾರ, ಸಕ್ರೆಪ್ಪಗೌಡ ಬಿರಾದಾರ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಜಿ.ಎಂ.ವಿಜಯಕುಮಾರ ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರಂತೆಯೇ ಅವರ ವಿದ್ಯಾರ್ಥಿಗಳೂ ಬೆಳೆದು ಮಾದರಿಯಾಗಲಿಬಸವರಾಜ ಪಾಟೀಲ್ ಸೇಡಂ ವಿಕಾಸ ಅಕಾಡೆಮಿ ಮುಖ್ಯಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.