ADVERTISEMENT

ವಾಡಿ: ಮೊಹರಂ ಆಚರಣೆ ವೇಳೆ ಮಾರಾಮಾರಿ; 10 ಜನರಿಗೆ ಗಂಭೀರ ಗಾಯ

​ಪ್ರಜಾವಾಣಿ ವಾರ್ತೆ
Published 30 ಜುಲೈ 2023, 5:28 IST
Last Updated 30 ಜುಲೈ 2023, 5:28 IST
ಮೊಹರಂ ಆಚರಣೆ ವೇಳೆ ಗುಂಪು ಘರ್ಷಣೆ
ಮೊಹರಂ ಆಚರಣೆ ವೇಳೆ ಗುಂಪು ಘರ್ಷಣೆ   

ವಾಡಿ (ಕಲಬುರಗಿ ಜಿಲ್ಲೆ): ಮೊಹರಂ ಆಚರಣೆ ವೇಳೆ ಕ್ಷುಲ್ಲಕ ವಿಷಯಕ್ಕೆ ಇಬ್ಬರ ನಡುವೆ ಆರಂಭವಾದ ಜಗಳ ಕ್ಷಣ ಮಾತ್ರದಲ್ಲಿ ಗುಂಪು ಘರ್ಷಣೆಗೆ ತಿರುಗಿ 10 ಜನ ಗಾಯಗೊಂಡಿರುವ ಪ್ರಕರಣ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಇಂಗಳಗಿ ಗ್ರಾಮದಲ್ಲಿ ಶನಿವಾರ ಸಂಜೆ ನಡೆದಿದೆ.

ಸಂಜೆ ಮೊಹರಂ ಕುಣಿತ ದರ್ಗಾ ಆವರಣದಲ್ಲಿ ಜರುಗಿದ್ದು ಸಾವಿರಾರು ಜನರು ಉತ್ಸವದಲ್ಲಿ ಭಾಗವಹಿಸಿದ್ದರು. ಅಲಾಯಿ ಕುಣಿತ ನಡೆಯುತ್ತಿದ್ದಾಗ ಇಬ್ಬರ ನಡುವೆ ಜಗಳ ಆರಂಭವಾಗಿದ್ದು, ಕ್ಷಣ ಮಾತ್ರದಲ್ಲಿ ಗುಂಪು ಘರ್ಷಣೆಗೆ ತಿರುಗಿದೆ. ಮೊಹರಂ ಸಂಭ್ರಮದಲ್ಲಿ ಜನರು ಮಿಂದೇಳುತ್ತಿದ್ದಾಗ ಆರಂಭಗೊಂಡ ಕಲಹ ರಕ್ತದೋಕುಳಿ ಹರಿಸಿದೆ.

ಗ್ರಾಮದ ಹೊನಗುಂಟಿ ಹಾಗೂ ಗೊಳೆದ ಮನೆತನಗಳ ಕುಟುಂಬ ಸದಸ್ಯರ ಮಧ್ಯೆ ದೊಡ್ಡ ಮಾರಾಮಾರಿ ನಡೆದಿದೆ. ಪರಸ್ಪರ ಕಲ್ಲುತೂರಾಟ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಜಗಳ ಬಿಡಿಸಲು ಹೋದವರಿಗೂ ಗಾಯಗಳಾಗಿವೆ. ಮನೆಗಳ ಮೇಲಿನ ಚಾವಣಿ ಕಿತ್ತು ಜಗಳವಾಡುತ್ತಿದ್ದುದ್ದು ಕಂಡು ಬಂದಿದೆ. ಎರಡು ಮನೆತನಗಳ ನಡುವೆ ಹಲವು ವರ್ಷಗಳಿಂದ ಇದ್ದ ಹಳೆಯ ವೈಷಮ್ಯ ಈಗ ಮುನ್ನೆಲೆಗೆ ಬಂದಿದ್ದು, ಜಗಳಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.

ADVERTISEMENT

ಗುಂಪು ಘರ್ಷಣೆಯಲ್ಲಿ 10 ಜನರಿಗೆ ಗಾಯಗಳಾಗಿದ್ದು ಕಲಬುರಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಶರಣಪ್ಪ, ಭಾಗೀರಥಿ ಹಾಗೂ ಮಲ್ಲಮ್ಮ ಎನ್ನುವವರ ಸ್ಥಿತಿ ಗಂಭೀರವಾಗಿದೆ.

ಅಲಾಯಿ ಉತ್ಸವಕ್ಕೆ ಒಬ್ಬ ಪೊಲೀಸ್ ಕಾನ್‌ಸ್ಟೆಬಲ್ ನಿಯೋಜನೆ ಮಾಡಲಾಗಿತ್ತು. ನೋಡ ನೋಡುತ್ತಿದ್ದಂತೆಯೇ ಗುಂಪು ಕಲಹ ಆರಂಭವಾದಾಗ ಅವರು ಅಸಹಾಯಕರಾದರು.

ಪ್ರಕರಣಕ್ಕೆ ಸಂಬಂಧಪಟ್ಟಂತೆ ವಾಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ಗ್ರಾಮದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.