ಕಲಬುರಗಿ: ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಎದುರು ಸೆಪ್ಟೆಂಬರ್ 6ರಂದು ಪ್ರತಿಭಟನೆ ನಡೆಸಿದ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳು,ವಿಶ್ವವಿದ್ಯಾಲಯಗಳ ಹಿತರಕ್ಷಣಾ ಸಮಿತಿ ಮತ್ತು ರಿಪಬ್ಲಿಕನ್ ಯೂತ್ ಫೆಡರೇಶನ್ ಕಾರ್ಯಕರ್ತರು ಸೇರಿ 22 ಜನರ ವಿರುದ್ಧ ಕುಲಸಚಿವ ಪ್ರೊ. ಬಸವರಾಜ ಡೋಣೂರ ವಿರುದ್ಧ ದೂರು ನೀಡಿದ್ದು, ಆಳಂದ ತಾಲ್ಲೂಕಿನ ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಲಸಚಿವ ಪ್ರೊ. ಡೋಣೂರ ಅವರು ಹಲವು ಅಕ್ರಮಗಳಲ್ಲಿ ಭಾಗಿಯಾಗಿದ್ದು, ಅವುಗಳ ಬಗ್ಗೆ ತನಿಖೆ ನಡೆಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಸುವಂತೆ ಪ್ರತಿಭಟನಾಕಾರರು ಅಂದು ಬೆಳಿಗ್ಗೆಯಿಂದ ರಾತ್ರಿಯವರೆಗೆ ಪ್ರತಿಭಟನೆ ನಡೆಸಿದ್ದರು.
‘ವಿಶ್ವವಿದ್ಯಾಲಯದ ಮುಖ್ಯ ಗೇಟಿನ ಮುಂದೆ ಗುಂಪು ಕಟ್ಟಿಕೊಂಡು ಪ್ರತಿಭಟನೆ ನಡೆಸಿದ್ದರು. ವಿಶ್ವವಿದ್ಯಾಲಯದ ವಿದ್ಯಾರ್ಥಿ–ವಿದ್ಯಾರ್ಥಿನಿಯರು, ಅಧಿಕಾರಿಗಳು ಹಾಗೂ ಸಿಬ್ಬಂದಿ ಒಳಗೆ, ಹೊರಗೆ ಹೋಗದಂತೆ ದಿಗ್ಬಂಧನ ಹಾಕಿದ್ದರು. ಅಲ್ಲದೇ, ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು’ ಎಂದು ಪ್ರೊ. ಬಸವರಾಜ ಡೋಣೂರ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನು ಆಧರಿಸಿ ನರೋಣಾ ಠಾಣೆಯ ಪೊಲೀಸರು ಸುನೀಲ ಮಾರುತಿ ಮಾನಪಡೆ, ಸಂತೋಷ ಮೇಲ್ಮನಿ, ಅಶ್ವಿನಿ ಮದನಕರ್, ಗೌತಮ ಸಿಂಗೆ, ಧರ್ಮಣ್ಣ ಕೋನಕರ, ಅನಿಲಕುಮಾರ ನಿಂಗಪ್ಪ, ಮಲ್ಲಿಕಾರ್ಜುನ, ನಂದಪ್ಪ, ಚನ್ನಬಸವ, ಹಣಮಂತ ಜಾನೆ, ದತ್ತಪ್ಪ ಗಡಬಳ್ಳಿ, ಪ್ರಮೋದ ಧನ್ನಿ, ರಾಹುಲ್, ಲಕ್ಷ್ಮಿಪುತ್ರ ಘಂಟೆಕರ, ಕಲ್ಯಾಣಿ ಧನ್ನಿ, ಅನಿಲ ಟೆಂಗಳಿ, ಸುದರ್ಶನ ಧನ್ನಿ, ಕರಬಸಪ್ಪ ಧನ್ನಿ, ಆಕಾಶ ತಳಕೇರಿ, ಪ್ರವೀಣ ಮೊದಲೆ, ಹರ್ಷವರ್ಧನ ಪಟ್ಟೇದಾರ ಹಾಗೂ ಇಸ್ಮಾಯಿಲ್ ಕಾಂಬಳೆ ಎಂಬುವರ ವಿರುದ್ಧ ಜೀವ ಬೆದರಿಕೆ ಸೇರಿದಂತೆ ವಿವಿಧ ಗಂಭೀರ ಪ್ರಕರಣಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.