ಕಲಬುರಗಿ: ಇಲ್ಲಿನ ನೆಹರೂ ಗಂಜ್ ಪ್ರದೇಶದ ಹುಮನಾಬಾದ್ ರಸ್ತೆಯಲ್ಲಿ ಶುಕ್ರವಾರ ರಾತ್ರಿ ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು, ಕಾರು ಸುಟ್ಟುಹೋಗಿದೆ.
ನಗರದ ಕೆಎಂಎಫ್ ಡೇರಿ ಮುಂಭಾಗದಲ್ಲಿ ಕಾರ್ ಚಲಿಸುತ್ತಿದ್ದಾಗ ‘ಸ್ಪಾರ್ಕ್’ ಆಗಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಕಂಡು ಅಕ್ಕಪಕ್ಕದ ಸವಾರರು ಕಾರ್ ಚಾಲಕನಿಗೆ ಸೂಚನೆ ನೀಡಿ ವಾಹನ ನಿಲ್ಲಿಸಿದರು. ಚಾಲಕ ಕಾರಿನಿಂದ ಕೆಳಗೆ ಇಳಿಯುತ್ತಿದ್ದಂತೆಯೇ ಬೆಂಕಿ ಇಡೀ ಕಾರಿನ ತುಂಬ ಆವರಿಸಿಕೊಂಡಿತು. ರಸ್ತೆ ಪಕ್ಕದಲ್ಲಿ ಕಾರು ಏಕಾಏಕಿ ಧಗಧಗ ಉರಿಯುವುದನ್ನು ಕಂಡು ಜನ ಹೌಹಾರಿದರು. ಎಲ್ಲೆಂದರಲ್ಲಿ ಬೈಕ್, ಕಾರ್, ಬಸ್, ಲಾರಿಗಳನ್ನು ನಿಲ್ಲಿಸಿದರು. ಇದರಿಂದ ಕೆಲಕಾಲ ಸಂಚಾರ ದಟ್ಟಣೆ ಉಂಟಾಯಿತು.
ಅಕ್ಕಪಕ್ಕದ ಅಂಗಡಿಗಳಲ್ಲಿ ಇದ್ದ ಜನ ಕೊಡ, ಬಕೀಟ್ಗಳಲ್ಲಿ ನೀರು ತಂದು ಎರಚಿದರೂ ಬೆಂಕಿ ನಂದಿಸಲು ಆಗಲಿಲ್ಲ. ನಂತರ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು. ಅಷ್ಟರೊಳಗೆ ಕಾರ್ ಸಂಪೂರ್ಣ ಸುಟ್ಟಿತ್ತು. ಚೌಕ್ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಸಂಚಾರ ಸುಗಮಗೊಳಿಸಿದರು.
ಮಟಕಾ ಬುಕಿ ಬಂಧನ: ನಗರದ ಪ್ರಗತಿ ಕಾಲೊನಿಯಲ್ಲಿ ಮಟಕಾ ಆಡಲು ನಂಬರ್ ಬರೆದುಕೊಡುತ್ತಿದ್ದ ಬುಕಿಯನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ರಾಜಕುಮಾರ ನಾಟೀಕಾರ ಬಂಧಿತ ವ್ಯಕ್ತಿ. ಮಹಾತ್ಮ ಬರವೇಶ್ವರ ನಗರ ಠಾಣೆಯ ಇನ್ಸ್ಪೆಕ್ಟರ್ ಚಂದ್ರಶೇಖರ ತಿಗಡಿ ಹಾಗೂ ಸಿಬ್ಬಂದಿ ದಾಳಿ ನಡೆಸಿದರು. ಆರೋಪಿ ಬಳಿ ಇದ್ದ ₹ 15 ಸಾವಿರ ನಗದು ಹಾಗೂ ಮಟಕಾ ಚೀಟಿಗಳನ್ನು
ವಶಪಡಿಸಿಕೊಳ್ಳಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.