ಕಲಬುರಗಿ: ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಸೊನ್ನ ಭೀಮಾ ಬ್ಯಾರೇಜಿನಿಂದ 1.30 ಲಕ್ಷ ಕ್ಯುಸೆಕ್ ನೀರು ಹರಿಸುವ ಪ್ರಮಾಣವನ್ನು ಭಾನುವಾರ ಸಂಜೆಯಿಂದ 60 ಸಾವಿರ ಕ್ಯುಸೆಕ್ ಗೆ ಇಳಿಸಿದ್ದರಿಂದ ಕೆಲವೆಡೆ ಪ್ರವಾಹದ ಅಬ್ಬರ ತುಸು ತಗ್ಗಿದೆ.
ಆದರೆ, ಅಮರ್ಜಾ ನದಿಯ ಉಪನದಿಯಾದ ಬೋರಿಹಳ್ಳ ಸೇರಿದಂತೆ ಸಣ್ಣಪುಟ್ಟ ಹಳ್ಳಗಳು ಭರ್ತಿಯಾಗಿ ಹರಿಯುತ್ತಿರುವುದರಿಂದ ಅಫಜಲಪುರ ತಾಲ್ಲೂಕಿನ ಗೌರ್ (ಬಿ), ದಿಕ್ಸಂಗಿ ಗ್ರಾಮಗಳನ್ನು ಸಂಪರ್ಕಿಸುವ ರಸ್ತೆಗಳ ಸಂಪರ್ಕ ಬಂದ್ ಆಗಿದೆ.
ದೇವಲಗಾಣಗಾಪುರ ಬಳಿಯ ತೆಲ್ಲೂರು-ಕೆರಕನಹಳ್ಳಿ ಗ್ರಾಮಗಳ ಮಧ್ಯದ ಸಂಪರ್ಕ ಸ್ಥಗಿತಗೊಂಡಿದೆ.
'ಪ್ರಜಾವಾಣಿ' ಭೇಟಿ ನೀಡಿದ ತೆಲ್ಲೂರು, ಆನೂರ, ಆತನೂರ ಗ್ರಾಮಗಳಲ್ಲಿ ಮಳೆ ಹಾಗೂ ಪ್ರವಾಹದ ನೀರಿನಿಂದಾಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.
ಅಫಜಲಪುರದ ಗಾಣಗಾಪುರದಿಂದ ಜೇವರ್ಗಿ ತಾಲ್ಲೂಕಿನ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆಯ ಮೇಲೆ ಹರಿಯುತ್ತಿದ್ದ ಭೀಮಾ ನದಿ ಪ್ರವಾಹ ಇಳಿದು ಸಂಪರ್ಕ ಪುನರಾರಂಭಗೊಂಡಿದೆ. ಆದರೆ, ಅಬ್ಬರ ಇನ್ನೂ ಕಡಿಮೆಯಾಗಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.