ಚಿತ್ತಾಪುರ: ತಾಲ್ಲೂಕಿನಾದ್ಯಂತ ಸೋಮವಾರ ರಾತ್ರಿ ಧಾರಾಕಾರವಾಗಿ ಮಳೆ ಸುರಿದಿದ್ದು, ಮುಡಬೂಳ ಗ್ರಾಮದ ಕೆಲವು ಮನೆಗಳು ಜಲಾವೃತಗೊಂಡು ಜನರು ಪರದಾಡುವಂತಾಯಿತು.
ಭಾಗೋಡಿ ಮುಖ್ಯ ರಸ್ತೆಯ ಪಕ್ಕದಲ್ಲಿರುವ ಮನೆಗಳಿಗೆ ಮಳೆ ನೀರು ನುಗ್ಗಿದೆ. ಶ್ರೀಮಂತ ಇವಣಿ, ಮಲ್ಲಿಕಾರ್ಜುನ ಕೆಳಗೇರಿ, ಮಲ್ಲೇಶಿ ಮ್ಯಾಗೇರಿ, ಸಂತೋಷ ಮ್ಯಾಗೇರಿ, ಶಾಂತಪ್ಪ ಮ್ಯಾಗೇರಿ, ಭಾಗಣ್ಣ ದಂಡಗುಂಡ, ಬಸವರಾಜ ರಟಗಲ್, ಸಿದ್ದಮ್ಮ ಹೂಡಾ, ಸಾವಿತ್ರಿ ದಿಗ್ಗಾಂವ ಅವರ ಮನೆಗಳು ಮಳೆ ನೀರಲ್ಲಿ ನಿಂತಿವೆ. ಇದರಿಂದಾಗಿ ಜನರು ಮನೆಯಿಂದ ಹೊರಬಾರದಂಥ ಪರಿಸ್ಥಿತಿ ನಿರ್ಮಾಣವಾಗಿದೆ.
ಮನೆ ಇರುವ ಸ್ಥಳದಿಂದ ಮಳೆ ನೀರು ನಾಗಾವಿ ಹಳ್ಳಕ್ಕೆ ಹರಿದು ಹೋಗಲೆಂದು ಚರಂಡಿ ನಿರ್ಮಾಣ ಮಾಡಲಾಗಿದೆ. ಚರಂಡಿಯನ್ನು ಜಮೀನಿಗಿಂತ ಎತ್ತರದಲ್ಲಿ ನಿರ್ಮಿಸಿದ್ದರಿಂದ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಮನೆಗಳ ಸುತ್ತಲೂ ಜಮಾವಣೆಯಾಗುತ್ತಿವೆ ಎಂದು ಗ್ರಾಮದ ಶರಣು ಸಿದ್ರಾಮಗೋಳ ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರತಿ ವರ್ಷ ಮಳೆಗಾಲದಲ್ಲಿ ಈ ಸಮಸ್ಯೆ ಉಂಟಾಗುತ್ತಿದೆ. ಅಡವಿಯಿಂದ ಮನೆಗಳಿಗೆ ನುಗ್ಗುವ ಮಳೆ ನೀರಿನಿಂದ ಜನರು ಅನುಭವಿಸುವ ಕಷ್ಟವನ್ನು ಗಮನಿಸಿ ಅಧಿಕಾರಿಗಳು ಶಾಶ್ವತ ಪರಿಹಾರ ಕ್ರಮಕ್ಕೆ ಮುಂದಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.