ಕಲಬುರ್ಗಿ: ಕೊರೊನಾ ವೈರಾಣು ಹರಡುತ್ತಿರುವ ಕಾರಣ, ಜಿಲ್ಲೆಯ ಎಲ್ಲ ಅಂಗನವಾಡಿ ಕೇಂದ್ರಗಳನ್ನೂ ಮಾರ್ಚ್ 14ರಿಂದಲೇ ಬಂದ್ ಮಾಡಲಾಗಿದೆ. ಈ ಕೇಂದ್ರಗಳ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ನೀಡುವ ವಿವಿಧ ಪರಿಹಾರಗಳನ್ನು ಸ್ವತಃ ಕಾರ್ಯಕರ್ತೆಯರೇ ಫಲಾನುಭವಿಗಳ ಮನೆ ಬಾಗಿಲಿಗೆ ಹೋಗಿ ತಲುಪಿಸಲು ನಿರ್ದೇಶಿಸಲಾಗಿದೆ. ಫಲಾನುಭವಿಗಳು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
ಈಗಾಗಲೇ ಅಂಗನವಾಡಿ ಕಾರ್ಯಕರ್ತೆಯರು ಪ್ರತಿ ತಿಂಗಳು ಫಲಾನುಭವಿಗಳ ಮನೆ ಬಾಗಿಲಿಗೆ ಹೋಗಿ ಆಹಾರ ಸಾಮಗ್ರಿಗಳನ್ನು ವಿತರಿಸುತ್ತಿದ್ದಾರೆ. ಆಹಾರ ಸಾಮಗ್ರಿಗಳ ವಿತರಣೆಯಲ್ಲಿ ಏನಾದರೂ ನ್ಯೂನ್ಯತೆಗಳು ಕಂಡುಬಂದಲ್ಲಿ ಜಿಲ್ಲೆಯ ಗ್ರಾಮಸ್ಥರು, ಸಾರ್ವಜನಿಕರು ಸಂಬಂಧಪಟ್ಟ ಆಯಾ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳನ್ನು ಸಂಪರ್ಕಿಸಬೇಕು ಎಂದೂ ಅವರು ಕೋರಿದ್ದಾರೆ.
ಅಂಗನವಾಡಿ ಫಲಾನುಭವಿಗಳಿಗೆ ವಿತರಿಸಲಾಗುವ ಆಹಾರದ ವಿವರ ಇಂತಿದೆ:
6 ತಿಂಗಳಿಂದ 3 ವರ್ಷದ ಮಕ್ಕಳಿಗೆ: ಪೂರಕ ಪೌಷ್ಟಿಕ ಅಹಾರ ಕಾರ್ಯಕ್ರಮದಡಿ ಪುಷ್ಟಿ ಪೌಷ್ಟಿಕ ಆಹಾರ, ಕೆನೆಸಹಿತ ಹಾಲಿನಪುಡಿ, ಸಕ್ಕರೆ, ಅಪೌಷ್ಟಿಕ ಮಕ್ಕಳಿಗೆ ವಾರದಲ್ಲಿ ಮೂರು ದಿನ ಕೋಳಿಮೊಟ್ಟೆ.
3 ವರ್ಷದಿಂದ 6 ವರ್ಷದ ಮಕ್ಕಳಿಗೆ: ರೋಸ್ಟೆಡ್ ಗೋಧಿ ನುಚ್ಚು, ಬೆಲ್ಲ, ಹೆಸರುಕಾಳು, ಒಣ ಮೆಣಸಿನಕಾಯಿ, ಅಯೋಡಿನ್ ಉಪ್ಪು, ಸಾಸಿವೆ, ಎಣ್ಣೆ, ಅಕ್ಕಿ, ತೊಗರಿಬೇಳೆ, ಸಾಂಬಾರ ಮಸಾಲೆ, ಕಡಲೆಬೇಳೆ, ಶೇಂಗಾ ಬೀಜ, ಕೆನೆಸಹಿತ ಹಾಲಿನಪುಡಿ, ಸಕ್ಕರೆ. ವಾರದಲ್ಲಿ ಎರಡು ದಿನ ಕೋಳಿ ಮೊಟ್ಟೆ, ಅಪೌಷ್ಟಿಕ ಮಕ್ಕಳಿಗೆ ವಾರದಲ್ಲಿ ಮೂರು ದಿನ ಕೋಳಿಮೊಟ್ಟೆ
ಗರ್ಭಿಣಿ ಮತ್ತು ಬಾಣಂತಿಯರಿಗೆ: ಅಕ್ಕಿ, ತೊಗರಿಬೇಳೆ, ಎಣ್ಣೆ, ಸಾಸಿವೆ, ಅಯೋಡಿನ್ ಉಪ್ಪು, ಒಣ ಮೆಣಸಿನಕಾಯಿ, ಸಾಂಬಾರ ಮಸಾಲೆ, ಶೇಂಗಾ ಬೀಜ, ಬೆಲ್ಲ, ಕೋಳಿಮೊಟ್ಟೆ, ಕೆನೆಸಹಿತ ಹಾಲಿನಪುಡಿ, ಸಕ್ಕರೆ ಹಾಗೂ ಕಡಲೇ ಬೇಳೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.