ಚಿಂಚೋಳಿ: ತಾಲ್ಲೂಕಿನ ಐನಾಪುರ ಗ್ರಾಮ ಪಂಚಾಯಿತಿಗೆ ಲಭಿಸಿದ ಗಾಂಧಿ ಗ್ರಾಮ ಪುರಸ್ಕಾರವನ್ನು ಬೆಂಗಳೂರಿನಲ್ಲಿ ಬುಧವಾರ ಮುಖ್ಯಮಂತ್ರಿ ಬಿಎಸ್ಯಡಿಯೂರಪ್ಪ ಹಾಗೂ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ ರಾಜ್ ಸಚಿವ ಕೆ.ಎಸ್ ಈಶ್ವರಪ್ಪ ಅವರಿಂದ ಪಂಚಾಯಿತಿ ಅಧ್ಯಕ್ಷೆ ಮಧು ರಮೇಶ ಪಡಶೆಟ್ಟಿ ಸ್ವೀಕರಿಸಿದರು.
‘ನಮ್ಮ ಸೇವೆಯನ್ನು ರಾಜ್ಯ ಸರ್ಕಾರ ಗುರುತಿಸಿರುವುದು ಸಂತಸದ ಸಂಗತಿ. ಪಂಚಾಯಿತಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಲಭಿಸಿದ ಈ ಪ್ರಶಸ್ತಿಯಿಂದ ನಮ್ಮ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ’ ಎಂದು ಅಧ್ಯಕ್ಷೆ ಮಧು ರಮೇಶ ಪಡಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ನಾಲ್ಕು ಗ್ರಾಮಗಳು ಹಾಗೂ 7 ತಾಂಡಾಗಳು ಒಳಗೊಂಡ ಬೃಹತ್ ಪಂಚಾಯಿತಿ ಇದಾಗಿದೆ. ತಾಲ್ಲೂಕು ಕೇಂದ್ರದಿಂದ 40 ಕಿ.ಮೀ ಅಂತರದಲ್ಲಿದೆ. ವಾರ್ಡ್ ಸಭೆ, ಗ್ರಾಮ ಸಭೆ ಹಾಗೂ ಸಾಮಾನ್ಯ ಸಭೆ ಜತೆಗೆ ಈಚೆಗೆ ಜಾರಿಯಾದ ಕೆಡಿಪಿ ಸಭೆಯನ್ನು ನಿಯಮಿತವಾಗಿ ನಡೆಸುತ್ತ ಬಂದಿರುವ ಪಂಚಾಯಿತಿಯು ಕರ ವಸೂಲಿಯಲ್ಲಿಯೂ ಉತ್ತಮ ಸಾಧನೆ ಮಾಡಿದೆ’ ಎಂದರು.
‘ವರ್ಷದಲ್ಲಿ ನಾಲ್ಕು ಬಾರಿ ಚರಂಡಿ ಹೂಳು ತೆರವು, ಗ್ರಾಮದಲ್ಲಿ ವಿದ್ಯುತ್ ದೀಪಗಳ ನಿರ್ವಹಣೆ ನಮ್ಮ ಪಂಚಾಯಿತಿಯ ಹೆಗ್ಗಳಿಕೆ. ಜನರು ಕೂಡ ಪಂಚಾಯಿತಿಯ ಮೇಲೆ ಹೆಚ್ಚಿನ ವಿಶ್ವಾಸ ಹೊಂದಿದ್ದಾರೆ. ಇದನ್ನು ಉಳಿಸಿಕೊಂಡು ಹೋಗುವುದರ ಜತೆಗೆ ಮುಂದಿನ ವರ್ಷವೂ ಪ್ರಶಸ್ತಿ ದೊರೆಯುವಂತೆ ಮಾಡುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಾ.ಪಂ. ಸದಸ್ಯ ಪ್ರೇಮಸಿಂಗ್ ಜಾಧವ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೋವಿಂದರೆಡ್ಡಿ ಮುದ್ನಾಳೆ, ಉಪಾಧ್ಯಕ್ಷ ಸಂಜೀವಕುಮಾರ ಡೊಂಗರಗಿ, ಸದಸ್ಯ ರಾಜು ಗುತ್ತೇದಾರ, ಗ್ರಾಮದ ಮುಖಂಡರಾದ ರೇವಪ್ಪ ಉಪ್ಪಿನ್, ವೀರಶೆಟ್ಟಿ ಹಳ್ಳಿ, ಎಪಿಎಂಸಿ ಸದಸ್ಯ ಅಶೋಕ ಪಡಶೆಟ್ಟಿ, ರವೀಂದ್ರ ಪಡಶೆಟ್ಟಿ, ಸಿದ್ದಪ್ಪ ಗಾರಂಪಳ್ಳಿ, ಚಂದು ಗಾರಂಪಳ್ಳಿ, ದಿಲೀಪ ಪಾಟೀಲ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.