ಕಲಬುರಗಿ: ಜೆಸ್ಕಾಂನ ವಿದ್ಯುತ್ ಮೀಟರ್ಗಳನ್ನು ಮಾರಾಟ ಮಾಡಿದ್ದರಿಂದ ಸಂಗ್ರಹವಾದ ₹ 38.78 ಲಕ್ಷ ಹಣವನ್ನು ನಿಗಮಕ್ಕೆ ಪಾವತಿಸದೇ ಸ್ವಂತಕ್ಕೆ ಬಳಕೆ ಮಾಡಿದ ನಗರದ ಪ್ರಸನ್ನ ಟೆಕ್ನಾಲಜಿಸ್ಟ್ ಪ್ರೈ.ಲಿ. ಸಂಸ್ಥೆಯ ಪಂಡಿತ ಕರ್ನಾಯಕ ಎಂಬಾತನಿಗೆ ಇಲ್ಲಿನ ಪ್ರಧಾನ ಜೆಎಂಎಫ್ಸಿ ನ್ಯಾಯಾಲಯವು ವಿವಿಧ ಕಲಂಗಳಡಿ ಎರಡು ವರ್ಷ ಜೈಲು ಶಿಕ್ಷೆ ಹಾಗೂ ₹ 10 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ.
ಅಪರಾಧಿ ಪಂಡಿತ ಕರ್ನಾಯಕ ಜೆಸ್ಕಾಂನ ಮಾರಾಟ ಪ್ರತಿನಿಧಿಯಾಗಿ ನೇಮಕವಾಗಿದ್ದ. ಈ ಸಂದರ್ಭದಲ್ಲಿ 3485 ಮೀಟರ್ಗಳನ್ನು ಗ್ರಾಹಕರಿಗೆ ಮಾರಾಟ ಮಾಡಿದ ಹಣವನ್ನು ನಿಗಮಕ್ಕೆ ಪಾವತಿ ಮಾಡಿರಲಿಲ್ಲ. ಈ ಕುರಿತು ಅಧಿಕಾರಿಗಳು ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡಿದ್ದ ಸ್ಟೇಶನ್ ಬಜಾರ್ ಠಾಣೆಯ ಪಿಎಸ್ಐ ಎಸ್.ಎಸ್. ದೊಡ್ಡಮನಿ ಅವರು ತನಿಖೆ ನಡೆಸಿ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಪ್ರಧಾನ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಶ್ರೀವಾಸ್ತವ್ ಅವರು ನಂಬಿಕೆ ದ್ರೋಹ ಎಸಗಿದ್ದಕ್ಕಾಗಿ 1 ವರ್ಷ ಜೈಲು ಹಾಗೂ ₹ 5 ಸಾವಿರ ದಂಡ ಹಾಗೂ ವಂಚನೆ ಮಾಡಿದ ಅಪರಾಧಕ್ಕೆ 1 ವರ್ಷ ಜೈಲು ಹಾಗೂ ₹ 5 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದರು.
ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ವೀಣಾ ರೆಡ್ಡಿ ವಾದ ಮಂಡಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.