ಕಲಬುರ್ಗಿ: ‘ಕನ್ನಡ ಭಾಷೆಯ ಬಗ್ಗೆ ಎಲ್ಲರೂ ಅಭಿಮಾನ ಬೆಳೆಸಿಕೊಳ್ಳಬೇಕು. ಪೋಷಕರು ಮಕ್ಕಳಿಗೆ ಮಾತೃಭಾಷೆಯಲ್ಲಿ ಶಿಕ್ಷಣ ಕೊಡಿಸಬೇಕು’ ಎಂದು ಜೆಡಿಎಸ್ ಮುಖಂಡ ವೈ.ಎಸ್.ವಿ.ದತ್ತಾ ಹೇಳಿದರು.
ಲಿಂ.ಶಾಂತಪ್ಪ ಪಾಟೀಲ ನರಿಬೋಳ ಸ್ಮರಣಾರ್ಥ ಶಾಂತಪ್ಪ ಪಾಟೀಲ ನರಿಬೋಳ ಪ್ರತಿಷ್ಠಾನದ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ‘ಶಾಂತಶ್ರೀ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಕನ್ನಡ ಭಾಷೆ ಭವ್ಯ ಇತಿಹಾಸವನ್ನು ಹೊಂದಿದೆ. ಇದನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ’ ಎಂದರು.
‘ಲಿಂ.ಶಾಂತಪ್ಪ ಪಾಟೀಲ ನರಿಬೋಳ ಅವರು ತಮ್ಮ ಮನೆಯಲ್ಲಿ ನಾಡಿದ ಪ್ರಸಿದ್ಧ ಲೇಖಕರ ಸಾವಿರಾರು ಪುಸ್ತಕಗಳನ್ನು ಸಂಗ್ರಹಿಸಿ, ಜ್ಞಾನ ದಾಸೋಹದಲ್ಲಿ ತೊಡಗಿಸಿಕೊಂಡಿದ್ದರು. ಆ ಮೂಲಕ ಕನ್ನಡಾಭಿಮಾನಿಗಳಿಗೆ ಮಾದರಿಯಾಗಿದ್ದರು’ ಎಂದು ಹೇಳಿದರು.
ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ಯುವ ಸಮೂಹ ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಕಳೆದುಹೋಗದೆ ಒಂದು ನಿರ್ದಿಷ್ಟ ಗುರಿ ಇಟ್ಟುಕೊಂಡು ಅದನ್ನು ಸಾಧಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಸದಭಿರುಚಿಯ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ಪ್ರತಿಷ್ಠಾನ ಸಂಸ್ಥಾಪಕ ಎಂ.ಎಸ್.ಪಾಟೀಲ ನರಿಬೋಳ ಪ್ರಾಸ್ತಾವಿಕವಾಗಿ ಮಾತನಾಡಿದರು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಡಾ.ಸುರೇಶ ಸಜ್ಜನ್ ಹಾಗೂ ಎಚ್ಕೆಸಿಸಿಐ ಮಾಜಿ ಅಧ್ಯಕ್ಷ ಅಮರನಾಥ ಸಿ.ಪಾಟೀಲ ಅವರಿಗೆ `ಶಾಂತಶ್ರೀ' ಪ್ರಶಸ್ತಿ ಪ್ರದಾನ ಮಾಡಲಾಯಿತು.
ಜಿಲ್ಲಾ ವೀರಶೈವ ಮಹಾಸಭಾದ ಕಾರ್ಯದರ್ಶಿ ಡಾ.ಶರಣ್ ಬಿ.ಪಾಟೀಲ, ಚರ್ಮರೋಗ ತಜ್ಞ ಡಾ.ಅಂಬರೀಶ ಬಿರಾದಾರ, ಜೆಡಿಎಸ್ ಮುಖಂಡೆ ಮಹೇಶ್ವರಿ ವಾಲಿ, ಭುವನೇಶ್ವರಿ ಹಳ್ಳಿಖೇಡ ಮಾತನಾಡಿದರು.
ಶ್ರೀನಿವಾಸ ಸರಡಗಿಯ ಶಕ್ತಿ ಪೀಠಾಧ್ಯಕ್ಷ ಅಪ್ಪಾರಾವ ದೇವಿ ಮುತ್ಯಾ ಸಾನ್ನಿಧ್ಯ ವಹಿಸಿದ್ದರು. ಶ್ರೀಕಾಂತ ಪಾಟೀಲ ತಿಳಗೂಳ, ಶಿವಾನಂದ ಮಠಪತಿ, ವಿಜಯಲಕ್ಷ್ಮೀ ಹಿರೇಮಠ, ಜ್ಯೋತಿ ಕೋಟನೂರ, ಮಲ್ಲಿಕಾರ್ಜುನ ಮಡಿವಾಳ, ಮಂಜುನಾಥ ಅಂಕಲಗಿ, ಎಂ.ಬಿ.ನಿಂಗಪ್ಪ, ಭೀಮಾಶಂಕರ ಪಾಟೀಲ, ಡಾ.ರಾಜಶೇಖರ ಬಂಡೆ, ಲಕ್ಷ್ಮೀಕಾಂತ ಸ್ವಾದಿ, ಮಾಲಾ ದಣ್ಣೂರ, ಮಾಲಾ ಕಣ್ಣಿ, ಜಗದೀಶ ಅವರಾದಕರ್, ವೈಶಾಲಿ ನಾಟೀಕರ್, ದೇವಿಂದ್ರ ಜವಳಿ, ಮಹಾಂತೇಶ ಪಾಟೀಲ, ಪೂರ್ಣಿಮಾ ಎಸ್.ಎಚ್., ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.