ಅಫಜಲಪುರ: ಭೀಮಾ ಏತ ನೀರಾವರಿ ಯೋಜನೆಯು ಸುಮಾರು 60 ಸಾವಿರ ಏಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುವ ಮಹತ್ವಕಾಂಕ್ಷಿ ಯೋಜನೆಯಾಗಿದೆ. ಈ ಕಾಮಗಾರಿ ಆರಂಭದಲ್ಲಿ ಕೂಲಿಗಾಗಿ ಕಾಳು ಯೋಜನೆ ಅಡಿಯಲ್ಲಿ ಪ್ರಾರಂಭಗೊಂಡು, ಸುಮಾರು ₹ 80 ಕೋಟಿ ವೆಚ್ಚದಲ್ಲಿ ಕಾಮಗಾರಿ ಮುಗಿಸಲು ಯೋಜನೆಯನ್ನು ರೂಪಿಸಲಾಗಿತ್ತು. ಇಲ್ಲಿಯವರೆಗೆ ಸುಮಾರು ₹ 900 ಕೋಟಿ ಖರ್ಚು ಮಾಡಿದರೂ ರೈತರ ಜಮೀನುಗಳಿಗೆ ನೀರು ಹರಿಸಲು ಸಾಧ್ಯವಾಗಿಲ್ಲ ಎಂದು ಶಾಸಕ ಎಂ.ವೈ.ಪಾಟೀಲ ತಿಳಿಸಿದರು.
ಭೀಮಾ ಏತ ನೀರಾವರಿ ಯೋಜನೆಯ ಅಳ್ಳಗಿ(ಬಿ) ಮುಖ್ಯ ಕಾಲುವೆಗೆ ಸೋಮವಾರ ಭೇಟಿ ನೀಡಿ ಮಾತನಾಡಿದ ಅವರು, ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಕರ್ನಾಟಕದ ನೀರಾವರಿ ಯೋಜನೆಗಳು ಕುಂಠಿತಗೊಂಡಿವೆ. ಭೀಮಾ ಏತ ನೀರಾವರಿ ಯೋಜನೆಗೆ ಸರಿಯಾದ ಸಮಯಕ್ಕೆ ಅನುದಾನ ದೊರೆಯದೇ ಇರುವುದರಿಂದ ಯೋಜನೆಯ ನಿರೀಕ್ಷಿತ ಗುರಿ ತಲುಪಲು ಸಾಧ್ಯವಾಗಿಲ್ಲ. ಮುಖ್ಯ ಕಾಲುವೆಗಳಲ್ಲಿ ಹೂಳು ತುಂಬಿರುವುದರಿಂದ ಉಪ ಕಾಲುವೆಗಳಿಗೆ ನೀರು ಹರಿಯುತ್ತಿಲ್ಲ. ನಿಗಮದಿಂದ ಕಾಲುವೆಗಳ ನಿರ್ವಹಣೆಗೆ ಸರ್ಕಾರ ಸಮರ್ಪಕ ಅನುದಾನ ಒದಗಿಸಿ ರೈತರಿಗೆ ಅನಕೂಲ ಕಲ್ಪಿಸಿಕೊಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಅವರು ಒತ್ತಾಯಿಸಿದರು.
ಭೀಮಾ ಏತ ನೀರಾವರಿ ಯೋಜನೆ ಕಾರ್ಯಪಾಲಕ ಎಂಜಿನಿಯರ್ ಮಲ್ಲಿಕಾರ್ಜುನ ಜಾಕಾ, ಮುಖಂಡರಾದ ನಾನಾಗೌಡ ಪಾಟೀಲ, ಬಸುಗೌಡ ಪಾಟೀಲ, ಶಿವಾನಂದ ಗಾಡಿಸಾಹುಕಾರ, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಶರಣು ಕುಂಬಾರ, ತಾಲ್ಲೂಕು ಕಾಂಗ್ರೆಸ್ ಯುವ ಸಮಿತಿ ಅಧ್ಯಕ್ಷ ಅಂಬರೀಶ ಬುರಲಿ, ಮುಖಂಡರಾದ ರಮೇಶ ಪೂಜಾರಿ, ನಾಗು ಮಾಡಿಯಾಳ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.