ADVERTISEMENT

‘ಎಲ್ಲರಿಗೂ ಮಾತೃಭಾಷೆ ಅಭಿಮಾನವಿರಲಿ’ ಶಾಸಕ ಗುತ್ತೇದಾರ್

ಆಳಂದ ಶಾಸಕ ಸುಭಾಷ್‌ ಗುತ್ತೇದಾರ ಅಭಿಮತ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2019, 9:16 IST
Last Updated 2 ನವೆಂಬರ್ 2019, 9:16 IST
ಆಳಂದದಲ್ಲಿ ತಾಲ್ಲೂಕು ಆಡಳಿತವು ಹಮ್ಮಿಕೊಂಡ ಕನ್ನಡ ರಾಜ್ಯೋತ್ಸವದಲ್ಲಿ ಶಾಸಕ ಸುಭಾಷ ಗುತ್ತೇದಾರ ಮಾತನಾಡಿದರು
ಆಳಂದದಲ್ಲಿ ತಾಲ್ಲೂಕು ಆಡಳಿತವು ಹಮ್ಮಿಕೊಂಡ ಕನ್ನಡ ರಾಜ್ಯೋತ್ಸವದಲ್ಲಿ ಶಾಸಕ ಸುಭಾಷ ಗುತ್ತೇದಾರ ಮಾತನಾಡಿದರು   

ಆಳಂದ: ಕರ್ನಾಟಕದ ನೈಸರ್ಗಿಕ ಸಂಪತ್ತು ಹಾಗೂ ಕಲೆ, ಸಾಹಿತ್ಯವು ಸಮೃದ್ಧವಾಗಿದೆ. ಇಂತಹ ಹೆಮ್ಮೆಯ ನಾಡಿನ ಪ್ರತಿಯೊಬ್ಬರೂ ಮಾತೃಭಾಷಾ ಅಭಿಮಾನವನ್ನು ಬೆಳೆಸಿಕೊಳ್ಳಬೇಕು ಎಂದು ಶಾಸಕ ಸುಭಾಷ ಗುತ್ತೇದಾರ ನುಡಿದರು.

ಪಟ್ಟಣದ ಗುರುಭವನದಲ್ಲಿ ಶುಕ್ರವಾರ ತಾಲ್ಲೂಕು ಆಡಳಿತವು ಹಮ್ಮಿಕೊಂಡ 64ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.

ಇಂಗ್ಲಿಷ್ ಭಾಷೆಯ ಮೇಲಿನ ವ್ಯಾಮೋಹ ಪಾಲಕರಲ್ಲಿ ಹೆಚ್ಚುತ್ತಿದೆ. ನಮ್ಮ ಕನ್ನಡ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಮಕ್ಕಳಿಗೆಇಂಗ್ಲಿಷ್‌ಗಿಂತಹ ಹೆಚ್ಚು ಕನ್ನಡ ಭಾಷೆ, ಸಂಸ್ಕೃತಿ ಕಲಿಸುವ ಜವಾಬ್ದಾರಿ ಇದೆ ಎಂದರು.

ADVERTISEMENT

ಮಾದನ ಹಿಪ್ಪರಗಾದ ಅಭಿನವ ಶಿವಲಿಂಗ ಸ್ವಾಮೀಜಿ ಮಾತನಾಡಿ ‘ಭಾರತದಲ್ಲಿ ಅತಿಹೆಚ್ಚು ಜ್ಞಾನಪೀಠ ಪ್ರಶಸ್ತಿಯು ಕನ್ನಡಕ್ಕೆ ಸಂದಿದೆ. ಅರ್ಥಪೂರ್ಣವಾದ ಭಾಷೆ ಕನ್ನಡವಾಗಿದ್ದು, ಜಗತ್ತಿಗೆ ಶ್ರೇಷ್ಠ ಚಿಂತನೆಗಳು ನೀಡಿದ ಹೆಗ್ಗಳಿಕೆ ಕನ್ನಡ ಭಾಷೆಯದಾಗಿದೆ ಎಂದರು.

ಉಪನ್ಯಾಸಕ ಸಂಜಯ ಪಾಟೀಲ ಮಾತನಾಡಿ ‘ಕನ್ನಡವು ಒಂದು ವಿಶಿಷ್ಟ ಸಂಸ್ಕೃತಿಯಿಂದ ಕೂಡಿದೆ, 2 ಸಾವಿರ ವರ್ಷದ ಪರಂಪರೆಯುಳ್ಳ ಕನ್ನಡವು ಜ್ಞಾನದ ಭಾಷೆಯಾಗಿ ಬೆಳೆಸಿದಾಗ ಮಾತ್ರ ಉತ್ತಮ ಮೌಲ್ಯಗಳು ಮಕ್ಕಳಲ್ಲಿ ಬೆಳೆಸಲು ಸಾಧ್ಯವಿದೆ ಎಂದರು.

ಉಪ ತಹಶೀಲ್ದಾರ್ ಬಿ.ಜಿ.ಕುದುರಿ, ಕನ್ನಡಪರ ಹೋರಾಟಗಾರ ಗಂಗಾಧರ ಕುಂಬಾರ ಮಾತನಾಡಿದರು. ತಾಪಂ ಉಪಾಧ್ಯಕ್ಷ ಗುರು ಪಾಟೀಲ, ಕಸಾಪ ತಾಲ್ಲೂಕು ಅಧ್ಯಕ್ಷ ವಿಶ್ವನಾಥ ಭಕರೆ, ಮುಖಂಡ ಮಲ್ಲಣ್ಣಾ ನಾಗೂರೆ, ಅಶೋಕ ಗುತ್ತೇದಾರ, ಪುರಸಭೆ ಸದಸ್ಯರಾದ ಶ್ರೀಶೈಲ ಪಾಟೀಲ, ಸಿದ್ದು ಪೂಜಾರಿ, ದಯಾನಂದ ಶೇರಿಕಾರ, ಸಿದ್ದರಾಮ ಪಾಟೀಲ, ವಿಜಯಕುಮಾರ ಪೂಲಾರೆ, ಬಸವರಾಜ ಕೊರಳ್ಳಿ, ಮಹಾಂತೇಶ ಸಣ್ಣಮನಿ, ಕಿರಣ ಗುತ್ತೇದಾರ, ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡರಂಗಪ್ಪ, ಜೆ.ಕೆ.ಅನ್ಸಾರಿ, ಕಲ್ಯಾಣಿ ಮೈಂದರ್ಗಿ ಇದ್ದರು.

ಈ ಮೊದಲು ತಹಶೀಲ್ದಾರ್ ಕಚೇರಿ ಹಾಗೂ ಕನ್ನಡ ಭವನದಲ್ಲಿ ಶಾಸಕ ಸುಭಾಷ ಗುತ್ತೇದಾರ ಅವರು ಧ್ವಜಾರೋಹಣ ನೆರವೇರಿತು. ತಹಶೀಲ್ದಾರ್ ದಯಾನಂದ ಪಾಟೀಲ, ಕಸಾಪ ಅಧ್ಯಕ್ಷ ವಿಶ್ವನಾಥ ಭಕರೆ, ಶರಣಪ್ಪ ಮನಗೂಳಿ, ಕಲ್ಲಪ್ಪ ಮಂಠಾಳೆ ಇದ್ದರು.

ಸಮತಾ ಲೋಕ ಶಿಕ್ಷಣ ಸಮಿತಿ ಆವರಣದಲ್ಲಿ ಡಾ.ಎಸ್.ಆರ್.ಬೇಡಕೆ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಎಲ್.ಎಸ್.ಬೀದಿ, ನಾಗಣ್ಣಾ ಸಲಗರೆ, ಗೋಪಿಚಂದ ಬಾಬರೆ, ಸಂಜಯ ಪಾಟೀಲ, ಶಿವಶರಣಪ್ಪ ಅಲ್ದಿ ಇದ್ದರು. ಸರ್ಕಾರಿ ಕನ್ಯಾ ಪಿಯು ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಶ್ರೀಶೈಲ ಮಾಳಗೆ, ಅಂಬಾದಾಸ ಜಮದಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.