ADVERTISEMENT

ಕಲಬುರಗಿಯಲ್ಲಿ ಲಸಿಕಾಕರಣ ತೀವ್ರಗೊಳಿಸಲು ಗುಂಜನ ಕೃಷ್ಣ ತಾಕೀತು

ಕೋವಿಡ್ ಪರಿಸ್ಥಿತಿ, ನೆರೆ ಹಾವಳಿ ಹಾಗೂ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಗುಂಜನ ಕೃಷ್ಣ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2021, 3:14 IST
Last Updated 21 ನವೆಂಬರ್ 2021, 3:14 IST
ಗುಂಜನ ಕೃಷ್ಣ
ಗುಂಜನ ಕೃಷ್ಣ   

ಕಲಬುರಗಿ: ‘ಜಿಲ್ಲೆಯಲ್ಲಿ ಕೋವಿಡ್‌ ಲಸಿಕೆ ಮೊದಲನೇ ಡೋಸ್ ಪಡೆದವರ ಪ್ರಮಾಣ ಶೇ. 75 ಮಾತ್ರ ಇದೆ. ಸೋಂಕು ನಿಯಂತ್ರಣಕ್ಕೆ ಲಸಿಕಾಕರಣ ಕಾರ್ಯ ಮತ್ತಷ್ಟು ಚುರುಕುಗೊಳಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಗುಂಜನ ಕೃಷ್ಣ ಅವರು ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದರು.

ನಗರದಲ್ಲಿ ಶನಿವಾರ ಕೋವಿಡ್ ಪರಿಸ್ಥಿತಿ, ನೆರೆ ಹಾವಳಿ ಸೇರಿದಂತೆ ವಿವಿಧ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ನವೆಂಬರ್ 22ರಿಂದ ಲಸಿಕಾಕರಣ ಹೆಚ್ಚಿಸಬೇಕು. ಪ್ರತಿ ದಿನ ಶೇ. 1ರಂತೆ ಹೆಚ್ಚಳ ಮಾಡುವ ಮೂಲಕ 15 ದಿನಗಳಲ್ಲಿ ಕೋವಿಡ್ ಮೊದಲನೇ ಡೋಸ್ ನೀಡಿದ ಪ್ರಮಾಣವನ್ನು ಶೇ. 90ರಷ್ಟು ಪ್ರಗತಿ ಸಾಧಿಸಬೇಕು’ ಎಂದು ಸೂಚಿಸಿದರು.

‘ಮೊದಲ ಡೋಸ್ ಪಡೆದವರ ಪೈಕಿ ಆರೋಗ್ಯ ಕಾರ್ಯಕರ್ತೆಯರು ಶೇ. 94 ಮಾತ್ರ ಇದ್ದಾರೆ. ಉಳಿದ ಶೇ. 6ರಷ್ಟು ಕಾರ್ಯಕರ್ತೆಯರು ಇನ್ನೂ ಏಕೆ ಲಸಿಕೆ ಪಡೆದಿಲ್ಲ ಎಂದು ಪ್ರಶ್ನಿಸಿದರು. ಇನ್ನೂ 18ರಿಂದ 44 ವಯಸ್ಸಿನವರಲ್ಲಿ ಕೇವಲ 65ರಷ್ಟು ಜನರು ಮಾತ್ರ ಪಡೆದಿದ್ದಾರೆ. ಇದು ತುಂಬ ಕಳಪೆ ಸಾಧನೆ. ಅಧಿಕಾರಿಗಳು ಇನ್ನಷ್ಟು ಕ್ರಿಯಾಶೀಲರಾಗಬೇಕು’ ಎಂದೂ ತಾಕೀತು ಮಾಡಿದರು.

ADVERTISEMENT

‘ಇತ್ತೀಚೆಗೆ ಯೂರೋಪ್ ದೇಶದಲ್ಲಿ ಕೋವಿಡ್‌ ಮತ್ತೆ ಉಲ್ಬಣಗೊಂಡಿದ್ದು, ಇದಕ್ಕೆ ಕಾರಣ ಅಲ್ಲಿನ ಶೇ. 80ರಷ್ಟು ಜನ ಇನ್ನೂ ಲಸಿಕೆ ಪಡೆಯದಿರುವುದು. ಇಂಥ ವಿಷಯಗಳನ್ನು ಅಧಿಕಾರಿಗಳು ಅರಿಯಬೇಕು. ಗ್ರಾಮೀಣ ಭಾಗದಲ್ಲಿ ಲಸಿಕೆ ಪಡೆಯಲು ಅರಿವು ಮೂಡಿಸಲು ಎನ್‌ಜಿಒಗಳ ಸಹಕಾರ ಪಡೆಯಬೇಕು. ಕಾಲೇಜುಗಳಲ್ಲಿ ಲಸಿಕಾಕರಣ ಕ್ಯಾಂಪ್ ಆಯೋಜಿಸಬೇಕು’ ಎಂದೂ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ದಿಲೀಷ್ ಶಶಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶರಣಬಸಪ್ಪ ಗಣಜಲಖೇಡ್, ಆರ್.ಸಿ.ಎಚ್ ಅಧಿಕಾರಿ ಡಾ.ಪ್ರಭುಲಿಂಗ ಮಾನಕರ್, ಪಾಲಿಕೆ ಆಯುಕ್ತ ಸ್ನೇಹಲ್‌ ಸುಧಾಕರ ಲೋಖಂಡೆ, ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರ ವಣಿಕ್ಯಾಳ, ಸಹಾಯಕ ಆಯುಕ್ತೆ ಮೋನಾ ರೋಟ್,ಪಾಲಿಕೆ ಆಯುಕ್ತ ಸ್ನೇಹಲ್‌ ಸುಧಾಕರ ಲೋಖಂಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.