ಕಲಬುರ್ಗಿ: ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಸಾಹಿತ್ಯ ಮತ್ತು ಸಂಶೋಧನಾ ಸಂಘದ ಆಶ್ರಯದಲ್ಲಿ ಡಿ.26 ಮತ್ತು 27ರಂದು ‘ಹಳಗನ್ನಡ ಕಾವ್ಯ ಶಿಬಿರ’ವನ್ನು ಹಮ್ಮಿಕೊಳ್ಳಲಾಗಿದೆ.
ನಾಡಿನ ಹಿರಿಯ ಹಾಗೂ ಪರಿಣತ ವಿದ್ವಾಂಸರು ಹಳಗನ್ನಡ ಸಾಹಿತ್ಯಕ್ಕೆ ಸಂಬಂಧಿಸಿದ ವ್ಯಾಕರಣ, ಅಲಂಕಾರ, ಛಂದಸ್ಸು, ನಿಘಂಟು ಮತ್ತು ಪ್ರಮುಖ ಎಲ್ಲಾ ಚಂಪೂ ಕಾವ್ಯಗಳ ಆಯ್ದ ಪಠ್ಯ ಭಾಗಗಳ ಓದು ಮತ್ತು ವ್ಯಾಖ್ಯಾನ ನೀಡುವರು. ಎರಡೂ ದಿನವೂ ‘ಕಾವ್ಯವಾಚನ’ ಜರುಗಲಿದೆ.
ಶಿಬಿರವು ಬೆಳಿಗ್ಗೆ 10 ರಿಂದ ಸಂಜೆ 5.30ರ ವರೆಗೆ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ ಪ್ರಧಾನ ಸಂಚಾಲಕತ್ವದಲ್ಲಿ ನಡೆಯಲಿದೆ. ಹಳಗನ್ನಡದ ಹಿರಿಯ ವಿದ್ವಾಂಸರಾದ ಪ್ರೊ.ತಾಳ್ತಜೆ ವಸಂತಕುಮಾರ, ಪ್ರೊ.ಎನ್.ಎಸ್.ತಾರಾನಾಥ, ಡಾ. ಎಸ್.ಕಾರ್ತಿಕ್, ಪ್ರೊ.ಶಾಂತಿನಾಥ ದಿಬ್ಬದ, ಡಾ. ಪಾದೇಕಲ್ಲು ವಿಷ್ಣುಭಟ್ಟ, ಡಾ. ಎಂ.ಆರ್.ಸತ್ಯನಾರಾಯಣ, ಪ್ರೊ.ವಿ.ಜಿ.ಪೂಜಾರ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.
ಶಿಬಿರಾರ್ಥಿಗಳಿಗೆ ಉಪಾಹಾರ, ಕಾಫಿ/ಟೀ ಮತ್ತು ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಶಿಬಿರದಲ್ಲಿ ಭಾಗವಹಿಸುವ ಕಾಲೇಜಿನ ಉಪನ್ಯಾಸಕರಿಗೆ ₹500 ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ₹250 ನೋಂದಣಿ ಶುಲ್ಕ ನಿಗದಿಪಡಿಸಲಾಗಿದೆ. ಆಸಕ್ತರು ಡಿ.25 ರೊಳಗೆ ಹೆಸರು ನೋಂದಣಿ ಮಾಡಿಕೊಳ್ಳಬಹುದು ಎಂದು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಡಾ. ಎಚ್.ಟಿ.ಪೋತೆ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.