ADVERTISEMENT

ಕಲಬುರಗಿ: ಜಿಲ್ಲೆಯಾದ್ಯಂತ ವೈಭವದ ಹನುಮ ಜಯಂತಿ

ಬಾಲ ಹನುಮಾನ ತೊಟ್ಟಿಲು ಸೇವೆ: ಎಲ್ಲೆಡೆ ಅನ್ನ ಸಂತರ್ಪಣೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2025, 4:00 IST
Last Updated 13 ಏಪ್ರಿಲ್ 2025, 4:00 IST
ಕಲಬುರಗಿಯ ಪ್ರಶಾಂತ ನಗರದ ಹನುಮಾನ ಮಂದಿರದಲ್ಲಿ ಶನಿವಾರ ನಡೆದ ಹೋಮದಲ್ಲಿ ಪಾಲ್ಗೊಂಡಿದ್ದ ಭಕ್ತರು
ಕಲಬುರಗಿಯ ಪ್ರಶಾಂತ ನಗರದ ಹನುಮಾನ ಮಂದಿರದಲ್ಲಿ ಶನಿವಾರ ನಡೆದ ಹೋಮದಲ್ಲಿ ಪಾಲ್ಗೊಂಡಿದ್ದ ಭಕ್ತರು   

ಕಲಬುರಗಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಶನಿವಾರ ಪವಮಾನ ಸುತ ಹುನುಮಂತನ ಜಯಂತಿಯನ್ನು ಸಂಭ್ರಮ, ಸಡಗರ, ಶ್ರದ್ಧಾ– ಭಕ್ತಿಯಿಂದ ಆಚರಿಸಲಾಯಿತು. 

ಜಯಂತಿ ಹಿಂದಿನ ದಿನವೇ ಆಂಜನೇಯ ದೇವಸ್ಥಾನಗಳನ್ನು ತಳಿರು– ತೋರಣಗಳಿಂದ ಸಿಂಗರಿಸಲಾಗಿತ್ತು. ದೇವಸ್ಥಾನಗಳಿಗೆ ಬೆಳಿಗ್ಗೆಯಿಂದಲೇ ಭಕ್ತರು ಬಂದು ವಿಶೇಷ ಪೂಜೆ ಸಲ್ಲಿಸಿ, ವಿವಿಧ ಕಾಣಿಕೆಗಳನ್ನು ಅರ್ಪಿಸಿದರು.

‌ನಗರದ ಕೋರಂಟಿ ಹನುಮಾನ ದೇಗುಲ, ಕರುಣೇಶ್ವರ ನಗರದ ಜೈ ವೀರ ಹನುಮಾನ ದೇಗುಲ, ಗೋದುತಾಯಿ ನಗರದ ಆಂಜನೇಯ ದೇಗುಲ, ಖಾದ್ರಿ ಚೌಕ್‌ನ ಶಕ್ತಿ ಹನುಮಾನ ಮಂದಿರ, ಶಹಾಬಜಾರ್ ನಾಕಾದ ಹನುಮಾನ ಮಂದಿರ, ಲಾಲ್ ಹನುಮಾನ ದೇವಸ್ಥಾನ, ವೆಂಕಟೇಶನಗರದ ಗಾರ್ಡನ್‌ನಲ್ಲಿರುವ ಹನುಮಾನ ಮಂದಿರ, ಹಳೇ ಜೇವರ್ಗಿ ರಸ್ತೆಯ ಮುದ್ದೆ ಹನುಮಾನ ಮಂದಿರ, ಸೇಡಂ ರಸ್ತೆಯ ಸ್ಮಶಾನ ಹನುಮಾನ ದೇವಸ್ಥಾನ, ಪ್ರಶಾಂತ ನಗರದ ಹನುಮಾನ ಮಂದಿರ, ಜೆ.ಆರ್‌. ನಗರದ ಹನುಮಾನ ದೇವಸ್ಥಾನ, ಜಗತ್ ಬಡಾವಣೆಯ ಸ್ವಯಂಭೂ ಹನುಮಾನ ಸೇರಿದಂತೆ ಹಲವೆಡೆ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.

ADVERTISEMENT

ಹನುಮಾನ ಮೂರ್ತಿಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ನಸುಕಿನ ಜಾವ ಪ್ರಾತಃ ಸುಪ್ರಭಾತ, ಪಂಚಾಮೃತ ಅಭಿಷೇಕ, ಮಹಾಪೂಜೆ, ಬಾಲ ಹನುಮಂತ ದೇವರ ಮೂರ್ತಿಗಳ ತೊಟ್ಟಿಲು ಸೇವೆ, ಪವಮಾನ ಹೋಮ, ಸತ್ಯನಾರಾಯಣ ಪೂಜೆ, ಪಾರಾಯಣ, ಪಲ್ಲಕ್ಕಿ ಸೇವೆ, ಪ್ರವಚನ, ಭಜನೆ, ಹನುಮಾನ ಚಾಲೀಸಾ ಪಠಣ, ರಾಮಾಯಣ ಹರಿಕತೆಗಳು ಸೇರಿದಂತೆ ನಾನಾ ಬಗೆಯ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ನೆತ್ತಿ ಸುಡವ ಬಿಸಿಲನ್ನು ಲೆಕ್ಕಿಸದೆ ಕುಟುಂಬ ಸಮೇತರಾಗಿ ಬಂದ ನೂರಾರು ಭಕ್ತರು ದೇವಸ್ಥಾನಗಳ ಮುಂಭಾಗದಲ್ಲಿ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಬಿಸಿಲಿನ ಝಳದಿಂದ ಬಳಲಿದ ಭಕ್ತರಿಗೆ ಎಲ್ಲ ದೇವಸ್ಥಾನಗಳಲ್ಲೂ ಮಜ್ಜಿಗೆ, ಪಾನಕ ವ್ಯವಸ್ಥೆ ಮಾಡಲಾಗಿತ್ತು. ಕೆಲವು ದೇವಸ್ಥಾನಗಳಲ್ಲಿ ಅನ್ನ ದಾಸೋಹದ ವ್ಯವಸ್ಥೆ ಇತ್ತು. ಹರಕೆ ಹೊತ್ತ ಭಕ್ತರೂ ಕೇಸರಿ ಬಾತ್, ಬಾಳೆ ಹಣ್ಣು, ರೈಸ್ ಬಾತ್‌ನ ಪ್ರಸಾದ ವ್ಯವಸ್ಥೆ ಮಾಡಿದ್ದರು.

ವಿಶಿಷ್ಟ ಹೆಸರಿನಿಂದ ಕರೆಯುವ ಬ್ರಹ್ಮಪುರದ ‘ರೋಕಡಾ ಹನುಮಾನ್’ ದೇವಸ್ಥಾನ, ಎಂಎಸ್‌ಕೆ ಮಿಲ್ ಪ್ರದೇಶದಲ್ಲಿ ವ್ಯಾಸರಾಜತೀರ್ಥರು ಪ್ರತಿಷ್ಠಾಪಿಸಿದ ಗಂಟೆ ಹನುಮಂತ, ಸಿದ್ಧಿ ಅಂಜನೇಯ ದೇವಸ್ಥಾನದಲ್ಲಿಯೂ ಭಕ್ತರ ದಟ್ಟಣೆ ಕಂಡುಬಂತು.

ಕಲಬುರಗಿ ನಗರದ ಗುಬ್ಬಿ ಕಾಲೊನಿಯ ಸ್ಮಶಾನ ಹನುಮಾನ ದೇವಸ್ಥಾನ ಆವರಣದಲ್ಲಿ ಶನಿವಾರ ದೇವಸ್ಥಾನ ಸಮಿತಿ ಅಧ್ಯಕ್ಷರೂ ಆಗಿರುವ ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ ಅವರು ಭಕ್ತರಿಗೆ ಅನ್ನಸಂತರ್ಪಣೆ ಮಾಡಿದರು
ಕಲಬುರಗಿಯಲ್ಲಿ ಶನಿವಾರ ಹನುಮಾನ ಜಯಂತಿ ಅಂಗವಾಗಿ ಕೋರಂಟಿ ಹನುಮಾನ ಮೂರ್ತಿಗೆ ಪೂಜೆ ಸಲ್ಲಿಸಿದ ಅರ್ಚಕರು
ಕಲಬುರಗಿಯ ಕೋರಂಟಿ ಹನುಮಾನ ದೇವಸ್ಥಾನದ ಆವರಣದಲ್ಲಿ ಶನಿವಾರ ನಡೆದ ರಥೋತ್ಸವ ಪ್ರಜಾವಾಣಿ ಚಿತ್ರ
ಕೋರಂಟಿಯಲ್ಲಿ ಜಾತ್ರೆ ವಾತಾವರಣ
ಕೋರಂಟಿ ಹನುಮಾನ ದೇಗುಲದಲ್ಲಿ ಇಡೀ ದಿನ ಜಾತ್ರೆಯ ಸಂಭ್ರಮದ ವಾತಾವರಣ ಕಂಡುಬಂತು. ಬೆಳಿಗ್ಗೆಯಿಂದಲೇ ತಂಡೋಪತಂಡವಾಗಿ ಬಂದ ಭಕ್ತರು ಪ್ರವೇಶ ದ್ವಾರದಿಂದ ರಥದ ಮನೆಯರೆಗೆ ಎರಡು ಸರತಿ ಸಾಲಿನಲ್ಲಿ ನಿಂತಿದ್ದರು. ಹೂ ಹಣ್ಣು ಕಾಯಿ ಕರ್ಪೂರ ಹಿಡಿದು ಗಂಟೆಗಟ್ಟಲೇ ಕಾದು ದೇವರ ದರ್ಶನ ಪಡೆದರು. ಪ್ರಖರ ಬಿಸಿಲಿನಲ್ಲಿಯೂ ಬೃಹತ್ ಮೂರ್ತಿಯ ಪ್ರದಕ್ಷಿಣೆ ಹಾಕಿ ಮೂರ್ತಿಯ ಮುಂದೆ ನಿಂತು ಫೋಟೊ ತೆಗೆದುಕೊಂಡರು. ದೇವಸ್ಥಾನ ಆವರಣವೂ ಇಡೀ ದಿನ ಜನದಟ್ಟಣೆಯಿಂದ ಕೂಡಿತ್ತು. ಸಂಜೆ ಸಾವಿರಾರು ಜನರ ಸಮ್ಮುಖದಲ್ಲಿ ರಥೋತ್ಸವ ಜರುಗಿತು.
ಕುಂಭಮೇಳ ಕಳಸ ಪ್ರತಿಷ್ಠಾಪನೆ
ಬೃಂದಾವನ ಲೇಔಟ್‌ನಲ್ಲಿ ಹನುಮಾನ ಮಂದಿರದಲ್ಲಿ ಮಹಿಳೆಯರು ಕುಂಬಮೇಳ ನಡೆಸಿಕೊಟ್ಟರು. ಆಲಮೇಲದ ಮೂರುಜಾವ ಮಠದ ರಾಮಚಂದ್ರ ಸ್ವಾಮೀಜಿ ಪಾಲ್ಗೊಂಡಿದ್ದರು. ಮುಖಂಡರಾದ ಮನೋಹರ ಪೊದ್ದಾರ ಮಹಾದೇವಪ್ಪ ಅಂಗಡಿ ಗುರಣ್ಣ ಕೋಳಕೂರ್ ಶಾಂತಪ್ಪ ಗೂಳಿ ಸಿದ್ದಣ್ಣ ಹೂಗಾರ ರಘುವೀರ ಕುಲಕರ್ಣಿ ಬಸವರಾಜ್ ದೇವತಕಲ್ ಬಸನಗೌಡ ಶಿವಕುಮಾರ ಮಠಪತಿ ಕವಿರಾಜ್ ಬಿರಾದಾರ ಹೊನ್ನಪ್ಪ ಸೇರಿ ಹಲವರು ಪಾಲ್ಗೊಂಡಿದ್ದರು. ಎನ್‌ಜಿಒ ಕಾಲೊನಿಯಲ್ಲಿ ಜೈ ಉಗ್ರ ಹನುಮಾನ ಸೇವಾ ಸಮಿತಿ ವತಿಯಿಂದ ತೊಟ್ಟಿಲು ಸೇವೆ ಭವ್ಯ ಮರೆವಣಿಗೆಯೊಂದಿಗೆ ಹನುಮಾನ ದೇವಸ್ಥಾನದ ಕಳಸ ಪ್ರತಿಷ್ಠಾಪನೆ ಮಾಡಲಾಯಿತು. ಪುರವಂತರ ಪೂಜೆಯ ಬಳಿಕ ರಥೋತ್ಸವ ಜರುಗಿತು. ಸಮಿತಿಯ ಅಧ್ಯಕ್ಷ ರುದ್ರಗೌಡ ಮಾಲಿಪಾಟೀಲ ಉಪಾಧ್ಯಕ್ಷ ಹಣಮಂತರಾಯ ಕೋಬಾಳ ಕಾರ್ಯದರ್ಶಿ ಬಸವರಾಜ ಕೆ ಬಿರಾದಾರ ಸಕ್ರಪ್ಪಗೌಡ ವಿಜಯಕುಮಾರ ಬಂಗಾರಶೆಟ್ಟಿ ನೀಲಕಂಠ ಅವಂತಿ ಸಂತೋಷ ಹರವಾಳ ಸತೀಶ ಹರವಾಳ ಬಿ.ಎಸ್. ಪಾಟೀಲ ರಾಜು ದೇವದುರ್ಗ ಮಹೇಶ ಹರವಾಳ ನಾಗೇಶ ವಾರದ್ ಸೇರಿ ಹಲವರು ಪಾಲ್ಗೊಂಡಿದ್ದರು. ಪ್ರಶಾಂತ ನಗರದ ಹನುಮಾನ ಮಂದಿರದಲ್ಲಿ ಅರ್ಚಕ ಗುಂಡಾಚಾರ್ಯ ನರಿಬೋಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು. ವೆಂಕಣ್ಣಚಾರ್ಯ ಮಳಖೇಡ ಅವರು ಸುಂದರಕಾಂಡ ಪ್ರವಚನ ನಡೆಸಿಕೊಟ್ಟರು. ಪ್ರಮುಖರಾದ ಡಿ.ವಿ. ಕುಲಕರ್ಣಿ ವೀರಣ್ಣ ಹೊನ್ನಳ್ಳಿ ಭೀಮಸೇನರಾವ ದೇವಡಿ ಗೋಪಾಲರಾವ ಕುಲಕರ್ಣಿ ಶಾಮರಾವ್ ಕುಲಕರ್ಣಿ ಶ್ರೀನಿವಾಸ ನೆಲೋಗಿ ಭೀಮಾಚಾರ್ಯ ಜೋಶಿ ಪ್ರಮೋದ ಪಂತ ಸೇರಿ ಹಲವರು ಭಾಗವಹಿಸಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.