ADVERTISEMENT

ಶಿಕ್ಷಣ ಪಡೆದು, ಮುಂದೆ ಬನ್ನಿ: ಶಾಸಕ ಮತ್ತಿಮಡು

ಹರಳಯ್ಯ ಸಮಾಜದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಶಾಸಕ ಮತ್ತಿಮಡು

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2022, 4:28 IST
Last Updated 19 ಸೆಪ್ಟೆಂಬರ್ 2022, 4:28 IST
ಶರಣ ಹರಳಯ್ಯ ಸಮಾಜದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಾರ್ತಾ ಇಲಾಖೆಯ ರವಿ ಎ. ಮಿರಸ್ಕರ್, ಹೆಬ್ಬಾಳ ಗ್ರಾ.ಪಂ. ಅಧ್ಯಕ್ಷ ನಾಗರಾಜ ಬಿ. ದಿವಂಟಗಿ ಅವರನ್ನು ಸನ್ಮಾನಿಸಲಾಯಿತು. ಕಾಶಿರಾಯ ನಂದೂರಕರ, ಬಸವರಾಜ ಮತ್ತಿಮಡು ಇತರರು ಇದ್ದರು
ಶರಣ ಹರಳಯ್ಯ ಸಮಾಜದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಾರ್ತಾ ಇಲಾಖೆಯ ರವಿ ಎ. ಮಿರಸ್ಕರ್, ಹೆಬ್ಬಾಳ ಗ್ರಾ.ಪಂ. ಅಧ್ಯಕ್ಷ ನಾಗರಾಜ ಬಿ. ದಿವಂಟಗಿ ಅವರನ್ನು ಸನ್ಮಾನಿಸಲಾಯಿತು. ಕಾಶಿರಾಯ ನಂದೂರಕರ, ಬಸವರಾಜ ಮತ್ತಿಮಡು ಇತರರು ಇದ್ದರು   

ಕಲಬುರಗಿ: ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆರೋಗ್ಯ ಮತು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿವೆ. ಶಾಲಾ–ಕಾಲೇಜು ಮಕ್ಕಳು, ಯುವಕರು ಸೌಲಭ್ಯ ಪಡೆದು ಉನ್ನತ ಶಿಕ್ಷಣ ಪಡೆದು ಪ್ರಗತಿ ಸಾಧಿಸಬೇಕು’ ಎಂದು ಶಾಸಕ ಬಸವರಾಜ ಮತ್ತಿಮಡು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಶಿವಶರಣ ಹರಳಯ್ಯ ಸಮಗಾರ (ಮಚಗಾರ) ಸಮಾಜದ ಜಿಲ್ಲಾ ಘಟಕದಿಂದ ಭಾನುವಾರ ನಗರದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಸಮಾಜದ ಸಮುದಾಯ ಭವನದ ಉಳಿದ ಕಾಮಗಾರಿಗೆ ₹ 2.5 ಕೋಟಿ ನೀಡಲು ಈಗಾಗಲೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ವಿಧಾನಮಂಡಲದ ಅಧಿವೇಶನ ಮುಗಿದ ಕೂಡಲೆ ಮುಖ್ಯಮಂತ್ರಿ ಬಳಿಗೆ ಜಿಲ್ಲಾ ಸಮಾಜದ ನಿಯೋಗವನ್ನು ಕರೆದುಕೊಂಡು ಹೋಗಿ, ಅನುದಾನ ಬಿಡುಗಡೆ ಮಾಡಿಸಲಾಗುವುದು’ ಎಂದು ಭರವಸೆ ನೀಡಿದರು.

ADVERTISEMENT

ಡಿಆರ್‌ಡಿಓ ಹಿರಿಯ ವಿಜ್ಞಾನಿ ಡಿ.ಜಿ. ರಾವ್ ಮಾತನಾಡಿ, ‘ನಮ್ಮ ಸಮಾಜ ಅತ್ಯಂತ ಸಣ್ಣ ಮತ್ತು ಹಿಂದುಳಿದ ಸಮಾಜವಾಗಿದೆ. ಇದರ ನಡೆವೆಯೂ ಮಕ್ಕಳಿಗೆ ಪ್ರತಿ ವರ್ಷ ಪ್ರತಿಭಾ ಪುರಸ್ಕಾರ ಆಯೋಜಿಸುತ್ತಿರುವುದು ಸಂತಸ ತಂದಿದೆ. ಪ್ರಗತಿಗೆ ಶಿಕ್ಷಣವೇ ಮಾರ್ಗ. ಆ ನಿಟ್ಟಿನಲ್ಲಿ ನಾವು ಸಾಗಬೇಕು’ ಎಂದರು.

ಪ್ರತಿಭಾ ಪುರಸ್ಕಾರ: 2021–22ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆದ ಕ್ರಮವಾಗಿ 58 ಮತ್ತು 20 ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ, ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.

ವಿಶೇಷ ಸನ್ಮಾನ: ತುಮಕೂರು ರವೀಂದ್ರ ಕಲಾನಿಕೇತನದ ಪ್ರಾಚಾರ್ಯ ಪ್ರಭು ಹರಸೂರ, ಜಿಲ್ಲಾ ಮಟ್ಟದ ಸರ್ವೋತ್ತಮ ನಾಗರಿಕ ಸೇವಾ ಪ್ರಶಸ್ತಿ ಪುರಸ್ಕೃತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ರವಿ ಎ. ಮಿರಸ್ಕರ್ ಹಾಗೂ ಹೆಬ್ಬಾಳ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜ ಬಿ. ದಿವಂಟಗಿ ಅವರನ್ನು ಗಣ್ಯರು ವಿಶೇಷವಾಗಿ ಸ್ಮರಣಿಕೆ ನೀಡಿ ಸನ್ಮಾನಿಸಿದರು.

ಹರಳಯ್ಯ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಕಾಶಿರಾಯ ನಂದೂರಕರ್ ಅಧ್ಯಕ್ಷತೆ ವಹಿಸಿದ್ದರು. ಮಹಾನಗರ ಪಾಲಿಕೆ ಸದಸ್ಯೆ ಅರ್ಚನಾ ಬಸವರಾಜ ಬಿರಾಳ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಮಲ್ಲಿಕಾರ್ಜುನ ಜೇರಟಗಿ, ಬಾಲು ಶೇಟ್, ಜಗದೀಶ ಪಾಟೀಲ, ಮಣಿಕಂಠ ರಾಠೋಡ, ಶಿವಕುಮಾರ ಪಾಟೀಲ ಜಂಬಗಾ, ಜಿಲ್ಲಾ ಘಟಕದ ಪದಾಧಿಕಾರಿಗಳಾದ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಜ್ಞ ಡಾ.ಅಂಬಾರಾಯ ರುದ್ರವಾಡಿ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ರಾಮಚಂದ್ರ ಎಚ್.ಗೋಳಾ, ಶಿವಶರಣಪ್ಪ ಜಿ. ದೊಡ್ಮನಿ, ಶಿವರಾಯ ಎಸ್. ಕಟ್ಟಿಮನಿ, ಬಸವರಾಜ ಶೆಳ್ಳಗಿ, ಪುಂಡಲೀಕ್ ಎಸ್. ಟೆಂಗಳಿ, ಕಾಶಿನಾಥ ದಿವಟಗಿ, ಉಮಾಕಾಂತ ಎ. ಕೂಡಿ, ಮಹಾದೇವ ಆರ್.ಮುದ್ದಡಗಿ, ಗೋಪಾಲ ಬಿ. ತೆಗನೂರ, ಹಣಮಂತ ಭಾವಿಮನಿ, ಮಹೇಶ ಗುತ್ತೇದಾರ ಇದ್ದರು. ಸಿದ್ಧಣ್ಣ ಭಾವಿಮನಿ ಪ್ರಸ್ತಾವಿಕವಾಗಿ ಮಾತನಾಡಿದರು. ಸಂಘಟನಾ ಕಾರ್ಯದರ್ಶಿ ಜಟ್ಟಿಂಗರಾಯ ಶಾಖಾಪೂರೆ ಸ್ವಾಗತಿಸಿದರೆ, ಸಹ ಕಾರ್ಯದರ್ಶಿ ಶ್ರೀಮಂತ ಜೇವರ್ಗಿ ವಂದಿಸಿದರು. ಪ್ರಧಾನ ಕಾರ್ಯದರ್ಶಿ ವೀರಭದ್ರಪ್ಪ ಹೆಬ್ಬಾಳ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.