ADVERTISEMENT

ಕಲಬುರ್ಗಿ: ಕೋವಿಡ್‌ ನಿಯಮ ಮಾಯ- ಮಾರುಕಟ್ಟೆಗಳಲ್ಲಿ ಜನಸಾಗರ

ಸಂಚಾರ ನಿಯಂತ್ರಣಕ್ಕೆ ಪೊಲೀಸರ ಹರಸಾಹಸ

​ಪ್ರಜಾವಾಣಿ ವಾರ್ತೆ
Published 22 ಜೂನ್ 2021, 6:14 IST
Last Updated 22 ಜೂನ್ 2021, 6:14 IST
ಕಲಬುರ್ಗಿಯ ಮಾರ್ಕೆಟ್‌ ರಸ್ತೆಯಲ್ಲಿ ಸೋಮವಾರ ವಾಹನಗಳ ದಟ್ಟಣೆ
ಕಲಬುರ್ಗಿಯ ಮಾರ್ಕೆಟ್‌ ರಸ್ತೆಯಲ್ಲಿ ಸೋಮವಾರ ವಾಹನಗಳ ದಟ್ಟಣೆ   

ಕಲಬುರ್ಗಿ: ಎರಡು ತಿಂಗಳ ಬಳಿಕ ಲಾಕ್‌ಡೌನ್‌ ಭಾಗಶಃ ತೆರವಾಗಿದ್ದು, ಮೊದಲ ದಿನವಾದ ಸೋಮವಾರ ನಗರದ ಮಾರುಕಟ್ಟೆಗಳಲ್ಲಿ ಜನಸಾಗರ ಕಂಡುಬಂತು. ಬಹುಪಾಲು ಕಡೆ ವ್ಯಾಪಾರ– ವಹಿವಾಟು– ಸಂಚಾರ ಎಡೆಬಿಡದೇ ಸಾಗಿತು.

ನಗರವೂ ಸೇರಿದಂತೆ ಜಿಲ್ಲೆಯ ಎಲ್ಲ ಕಡೆ ಎಲ್ಲ ರೀತಿಯ ವಾಣಿಜ್ಯ ಚಟುವಟಿಕೆಳಿಗೆ ಜಿಲ್ಲಾಡಳಿತ ಅನುಮತಿ ನೀಡಿದ್ದರಿಂದಮಾರುಕಟ್ಟೆಗಳಲ್ಲಿ ಚಟುವಟಿಕೆಗಳು ಬಿರುಸುಗೊಂಡವು.

ಇಲ್ಲಿನ ಸೂಪರ್‌ ಮಾರ್ಕೆಟ್‌ ಪ‍್ರದೇಶದ ತರಕಾರಿ ಮಾರುಕಟ್ಟೆಯಲ್ಲಂತೂ ಜನವೋ ಜನ. ಕಿರಿದಾದ ಮಾರ್ಗಗಳುಳ್ಳ ಕಪಡಾ ಬಜಾರ್‌, ಚಪ್ಪಲ್‌ ಬಜಾರ್, ಶಾಹಿ ಬಜಾರ್‌, ಬಾಂಡೆ ಬಜಾರ್‌, ಪುಟಾಣಿ ಗಲ್ಲಿ, ಮಸ್ಜೀದ್‌ ಗಲ್ಲಿ ಸೇರಿದಂತೆ ಬಹುಪಾಲು ಕಡೆಗಳಲ್ಲಿ ಜನ ಕಿಕ್ಕಿರಿದು ಸೇರಿದರು. ಜನ ಅಂತರ ಮರೆತು ವ್ಯಾಪಾರ ನಡೆಸಿದರು.

ADVERTISEMENT

ಅಂಗಡಿಗಳ ಮುಂದೆ, ಒಳಗೆ ಕನಿಷ್ಠ ಅಂತರವನ್ನೂ ಕಾಯ್ದುಕೊಳ್ಳಲಿಲ್ಲ. ಹಲವರು ಫುಟ್‌ಪಾತ್‌ಗಳ ಮೇಲೆಯೇ ವಸ್ತುಗಳನ್ನು ಇಟ್ಟು ವ್ಯಾಪಾರ ಮಾಡಲಾಯಿತು. ಬಹುದಿನಗಳ ನಂತರ ಮಾರುಕಟ್ಟೆ ಲಗ್ಗೆ ಇಟ್ಟ ಜನ ಪೊಲೀಸರ ಸೂಚನೆಗಳಿಗೂ ಬೆಲೆ ಕೊಡದಾದರು.‌

ಕಣ್ಣಿ ಮಾರ್ಕೆಟ್‌, ಶಹಾಬಜಾರ್‌, ಕೋಟೆ ರಸ್ತೆ, ಎಂಎಸ್‌ಕೆ ಮಿಲ್‌ ಮಾರ್ಗ, ರೈಲು ನಿಲ್ದಾಣ ಮಾರ್ಗ, ಕೋರ್ಟ್‌ ರಸ್ತೆ, ಸ್ಟೇಷನ್‌ ರಸ್ತೆ, ಹಳೆ ಜೇವರ್ಗಿ– ಹೊಸ ಜೇವರ್ಗಿ ಮಾರ್ಗಗಳು ತಮ್ಮ ಎಂದಿನ ಲಕ್ಷಣ ಪಡೆದವು.

ಏಕಕಾಲಕ್ಕೆ ನುಗ್ಗಿಬಂದ ಜನ: ಬಹಳಷ್ಟು ದಿನಗಳಿಂದ ಬಟ್ಟೆ, ಗೃಹೋಪಯೋಗಿ ಸಲಕರಣೆ, ಉಪಕರಣಗಳನ್ನು ಖರೀದಿ
ಸಲು ಕಾದು ಕುಳಿತಿದ್ದವರೆಲ್ಲ ಒಮ್ಮೆಲೇ ಮಾರುಕಟ್ಟೆಗೆ ನುಗ್ಗಿ ಬಂದರು. ಇದರಿಂದ ಫುಟ್‌ಪಾತ್‌ಗಳಲ್ಲಿಯೂ ಜನಸಂದಣಿ ಹೆಚ್ಚಿತ್ತು.

ಭರ್ಜರಿ ವ್ಯಾಪಾರ: ಬಟ್ಟೆ ಅಂಗಡಿ, ಪಾತ್ರೆ ಅಂಗಡಿ, ಪ್ಲಾಸ್ಟಿಕ್‌ ಸಾಮಗ್ರಿ, ಎಲೆಕ್ಟ್ರಾನಿಕ್‌ ಉಪಕರಣ, ಮೊಬೈಲ್‌ ಅಂಗಡಿ, ಗೃಹಬಳಕೆ ವಸ್ತುಗಳು, ಪುಸ್ತಕ ಮಳಿಗೆ, ಹಾರ್ಡ್‌ವೇರ್, ಪೇಂಟಿಂಗ್‌, ಅಟೊಮೊಬೈಲ್‌, ಕಂಪ್ಯೂಟರ್‌ ಹಾಗೂ ಕೃಷಿ ಸಾಮಗ್ರಿ ಕೊಳ್ಳುವ ಮಳಿಗೆಗಳ ಮುಂದೆ ಜನ ಗುಂಪಾಗಿ ಸೇರಿದರು. ಅದರಲ್ಲೂ ಬಟ್ಟೆ ಹಾಗೂ ಪಾತ್ರೆ ಅಂಗಡಿಗಳಲ್ಲಿ ದಿನವಿಡೀ ಬಿರುಸಿನ ವಹಿವಾಟು ಕಂಡುಬಂತು.

ಮಿತಿಮೀರಿದ ವಾಹನ ದಟ್ಟಣೆ

ನಗರದ ಎಲ್ಲ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಸಂಚಾರ ದಿಢೀರ್‌ ಏರಿಕೆ ಕಂಡಿತು.ವೃತ್ತ, ಚೌಕಗಳಲ್ಲಿ ಟ್ರಾಫಿಕ್‌ ಜಾಮ್‌ ಆಯಿತು. ರಸ್ತೆಯ ಇಕ್ಕೆಲಗಳಲ್ಲಿ ಬೈಕ್‌, ಕಾರ್‌ಗಳನ್ನು ಒಂದಕ್ಕೊಂದು ಅಂಟಿದಂತೆ ಪಾರ್ಕಿಂಗ್‌ ಮಾಡಲಾಗಿತ್ತು.

ಅಟೊಗಳಲ್ಲಂತೂ ಐದಾರು ಜನರನ್ನು ಏಕಕಾಲಕ್ಕೆ ಹತ್ತಿಸಿಕೊಂಡು ಸಂಚರಿಸಿದರು. ಎಲ್ಲವನ್ನೂ ನೋಡಿಯೂ ಪೊಲೀಸರು ಅಸಹಾಯಕರಾಗಿ ನಿಲ್ಲಬೇಕಾಯಿತು.

ಶಹಾಬಜಾರ್‌ ನಾಕಾ, ಆಳಂದ ನಾಕಾ, ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತ, ರಾಷ್ಟ್ರಪತಿ ಚೌಕ್‌, ಜಗತ್‌ ವೃತ್ತ, ಮುಸ್ಲಿಂ ಚೌಕ್‌, ಎಪಿಎಂಸಿ ಸೇರಿದಂತೆ ಎಲ್ಲ ಕಡೆ ವಾಹನ ದಟ್ಟಣೆ ಹೆಚ್ಚಾಗಿತ್ತು. ಬಹುಪಾಲು ಎಲ್ಲ ವೃತ್ತ– ಚೌಕಗಳಲ್ಲಿಯೂ ಸಿಗ್ನಲ್‌ ದೀಪಗಳು ಮತ್ತೆ ಕಣ್ಣು ತೆರೆದವು.

ಉದ್ಯಾನ, ಮಂದಿರದಲ್ಲೂ ಜನ: ನಗರದ ಮಾಲ್‌ಗಳು, ಮಲ್ಟಿಪ್ಲೆಕ್ಸ್, ಚಲನಚಿತ್ರ ಮಂದಿರ, ಲಾಡ್ಜ್‌, ಗುಟ್ಕಾ– ಸಿಗರೇಟ್ ಮಾರಾಟ, ಈಜುಕೊಳಕ್ಕೆ ಮಾತ್ರ ಇನ್ನೂ ನಿರ್ಬಂಧ ಮುಂದಿವರಿದಿದೆ.

ಆದರೆ, ಬಹುಪಾಲು ಎಲ್ಲ ಉದ್ಯಾನಗಳಲ್ಲೂ ಜನರ ಓಡಾಟ ಹೆಚ್ಚಾಗಿತ್ತು. ದೇವಸ್ಥಾನ, ಮಸೀದಿ, ದರ್ಗಾ ಹಾಗೂ ಸಾರ್ವಜನಿಕ ಸ್ಥಳಗಳಲ್ಲೂ ಜನಸಂದಣಿ ಕಂಡುಬಂತು.

ಎಲ್ಲ ಹೋಟೆಲ್‌, ಖಾನಾವಳಿ, ಬಾರ್‌ ಅಂಡ್‌ ರೆಸ್ಟೊರೆಂಟ್‌ ಹಾಗೂ ಬೇಕರಿಗಳು ಕೂಡ ಬಾಗಿಲು ತೆರೆದು ವ್ಯಾಪಾರ ನಡೆಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.