ಚಿಂಚೋಳಿ ತಾಲ್ಲೂಕಿನ ಪೋಲಕಪಳ್ಳಿ ಬಳಿ ಮುಲ್ಲಾಮಾರಿ ನದಿ ತುಂಬಿ ಹರಿಯುತ್ತಿರುವುದು
ಚಿಂಚೋಳಿ: ತಾಲ್ಲೂಕಿನಲ್ಲಿ ಮಂಗಳವಾರ ಭಾರಿ ಮಳೆಯಾಗಿದ್ದು ಜನಜೀವನ ಅಸ್ತವ್ಯಸ್ತಗೊಳಿಸಿದೆ. ಗುಡುಗು ಮಿಂಚಿನೊಂದಿಗೆ ಜೋರಾಗಿ ಸುರಿದ ಮಳೆಯಿಂದ ನದಿ, ತೊರೆಗಳಲ್ಲಿ ಹೊಸ ನೀರು ಹರಿದರೆ, ಹೊಲಗಳಲ್ಲಿ, ತಗ್ಗು ಪ್ರದೇಶದಲ್ಲಿ ಮಳೆ ನೀರು ನಿಂತಿರುವುದು ಗೋಚರಿಸಿತು.
ಮಳೆ ಸುರಿದಿದ್ದು ಮುಂಗಾರು ಬೆಳೆಗಳಿಗೆ ವರದಾನವಾಗಿ ಪರಿಣಮಿಸಿದ್ದು ಅಲ್ಲಲ್ಲಿ ಉದ್ದು, ಹೆಸರು ಬೆಳೆಗೆ ಹೇನುಬಾಧೆ ಕಂಡುಬಂದಿದ್ದು ಜೋರು ಮಳೆಗೆ ಹೇನು ತೊಳೆದುಕೊಂಡು ಹೋಗುವ ಸಾಧ್ಯತೆ ಹೆಚ್ಚಾಗಿದೆ ಎಂಬುದು ರೈತರ ಅನಿಸಿಕೆಯಾಗಿದೆ.
ತಾಲ್ಲೂಕಿನ ಐನಾಪುರ, ಚಿಮ್ಮನಚೋಡ, ನಿಡಗುಂದಾ, ಸುಲೇಪೇಟ, ಕೋಡ್ಲಿ, ಸಾಲೇಬೀರನಹಳ್ಳಿ, ದೇಗಲಮಡಿ, ಐನೊಳ್ಳಿ, ಕಲ್ಲೂರು, ಶಾದಿಪುರ, ಕನಕಪುರ, ಚಿಮ್ಮಾಈದಲಾಯಿ, ಚಿಂಚೋಳಿ ಚಂದಾಪುರ, ಗಡಿಲಿಂಗದಳ್ಳಿ, ಕೊಟಗಾ ಸೇರಿದಂತೆ ಹಲವೆಡೆ ಮಳೆ ಸುರಿದಿದೆ. ಚಂದಾಪುರದ ಕೆಪಿಎಸ್ ಶಾಲೆ, ಆಶ್ರಮ ಶಾಲೆ ಆವರಣದಲ್ಲಿ ಹೆಚ್ಚಿನ ನೀರು ನಿಂತರೆ, ಬಸವ ನಗರದಲ್ಲಿ ಮುಖ್ಯರಸ್ತೆ ಜಲಾವೃತವಾಗಿತ್ತು. ಚರಂಡಿಗಳು ತುಂಬಿ ಹರಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.