ADVERTISEMENT

ವಾಯುಭಾರ ಕುಸಿತ: ಕಲಬುರ್ಗಿ ಜಿಲ್ಲೆಯಲ್ಲಿ ಇನ್ನೂ ಎರಡು ದಿನ ಮಳೆ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2021, 6:39 IST
Last Updated 22 ಜುಲೈ 2021, 6:39 IST
ಕಲಬುರ್ಗಿಯಲ್ಲಿ ಗುರುವಾರ ಬೆಳಿಗ್ಗೆ ಜಿಟಿಜಿಟಿ ಮಳೆಯಲ್ಲಿ ಕೊಡೆ ಹಿಡಿದು ನಡೆದ ಯುವತಿಯರು
ಕಲಬುರ್ಗಿಯಲ್ಲಿ ಗುರುವಾರ ಬೆಳಿಗ್ಗೆ ಜಿಟಿಜಿಟಿ ಮಳೆಯಲ್ಲಿ ಕೊಡೆ ಹಿಡಿದು ನಡೆದ ಯುವತಿಯರು   

ಕಲಬುರ್ಗಿ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಕಂಡಿದ್ದರಿಂದ ಕಲಬುರ್ಗಿ, ಬೀದರ್, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಇನ್ನೂ ಎರಡು ದಿನ (ಜುಲೈ 24ರವರೆಗೆ) ಜಿಟಿಜಿಟಿ ಮಳೆ ಮುಂದು ವರಿಯಲಿದೆ ಎಂದು ಬೀದರ್ ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ತಿಳಿಸಿದ್ದಾರೆ.

'ಬಂಗಾಳ ಕೊಲ್ಲಿಯ ಹವಾಮಾನದಲ್ಲಿ ಉಂಟಾಗುವ ವ್ಯತ್ಯಾಸ ಕಲ್ಯಾಣ ಕರ್ನಾಟಕ ಭಾಗದ ಈ ನಾಲ್ಕೂ ಜಿಲ್ಲೆಗಳಿಗೆ ನೇರವಾಗಿ ಪರಿಣಾಮ ಬೀರುತ್ತದೆ. ಕಳೆದ ಮೂರು ದಿನಗಳ ಅವಧಿಯಲ್ಲಿ ಈ ನಾಲ್ಕೂ ಜಿಲ್ಲೆಗಳಲ್ಲಿ ಕನಿಷ್ಠ 24 ಮಿ.ಮಿ.ಯಿಂದ 28 ಮಿ.ಮೀ ಮಳೆ ಬಿದ್ದಿದೆ. ಭಾನುವಾರದ ವೇಳೆಗೆ ಮೋಡಗಳು ಚೆದುರಲಿದ್ದು, ಮಳೆ ನಿಲ್ಲುತ್ತದೆ' ಎಂದು ಕೇಂದ್ರದ ಹವಾಮಾನ ತಜ್ಞ ಬಸವರಾಜ ಬಿರಾದಾರ ತಿಳಿಸಿದ್ದಾರೆ.

ಇನ್ನೊಂದೆಡೆ, ಕಲಬುರ್ಗಿ ನಗರವೂ ಸೇರಿದಂತೆ ಜಿಲ್ಲೆಯ ಬಹುಪಾಲು ಕಡೆ ಗುರುವಾರ ನಸುಕಿನಿಂದಲೇ ನಿರಂತರವಾಗಿ ಜಿಟಿಜಿಟಿ ಮಳೆ ಸುರಿಯುತ್ತಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 26 ಮಿ.ಮೀ ಮಳೆ ಬಿದ್ದಿದೆ ಎಂದು ಕಲಬುರ್ಗಿ ಕೃಷಿ ವಿಜ್ಞಾನ ಕೇಂದ್ರ ಮಾಹಿತಿ ನೀಡಿದೆ.

ADVERTISEMENT

ನಗರ ಹಾಗೂ ತಾಲ್ಲೂಕಿನೆಲ್ಲೆಡೆ ಬುಧವಾರ ಮಧ್ಯಾಹ್ನಕ್ಕೆ ಆರಂಭವಾದ ಮಳೆ ಎಡೆಬಿಡದೇ ಸುರಿಯುತ್ತಿದೆ. ಜಿಲ್ಲೆಯ ಚಿಂಚೋಳಿ, ಚಿತ್ತಾಪುರ, ಜೇವರ್ಗಿ, ಕಾಳಗಿ, ಕಮಲಾಪುರ, ಸೇಡಂ, ಯಡ್ರಾಮಿ, ಅಫಜಲಪುರ ತಾಲ್ಲೂಕಿನ ಬಹುಪಾಲು ಕಡೆ ಮಳೆಯು ಕೃಷಿ ಕಾರ್ಯಕ್ಕೆ ಅಡ್ಡಿ ಮಾಡಿದೆ. ಹಲವು ಹೊಲಗಳಲ್ಲಿ ಹಾಕಿದ ಬೆಳೆ ಈಗಾಗಲೇ ಹಾಳಾಗಿದೆ. ನಿರಂತರ ಮಳೆಯಿಂದ ಹೊಲಗಳಲ್ಲಿ ನೀರು ನಿಂತಿದ್ದು ರೈತರನ್ನು ನಿದ್ದೆಗೆಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.