ADVERTISEMENT

ಕಲಬುರ್ಗಿ: ಕೊಚ್ಚಿ ಹೋದ ರಸ್ತೆ, ಸಂಪರ್ಕ ಕಡಿತ, ಮನೆಗಳಿಗೆ ನುಗ್ಗಿದ ನೀರು

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2020, 5:59 IST
Last Updated 26 ಸೆಪ್ಟೆಂಬರ್ 2020, 5:59 IST
   

ಕಲಬುರ್ಗಿ: ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ತಾಲ್ಲೂಕಿನ ಉದನೂರು ಹಳ್ಳ ತುಂಬಿ ಹರಿಯುತ್ತಿದೆ. ಇದರಿಂದ ಕಲಬುರ್ಗಿ- ಊದಹನೂರು ಮಧ್ಯದ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಶನಿವಾರ ಬೆಳಿಗ್ಗೆ ಗ್ರಾಮದಿಂದ ಹೊರ ಹೋಗುವವರು, ಕೆಲಸ, ವ್ಯಾಪಾರ, ಮುಂತಾದ ಚಟುವಟಿಕೆಗಳಿಗೆ ನಗರಕ್ಕೆ ಬರಬೇಕಾದವರು ರಸ್ತೆ ದಾಟಲಾಗದೇ ಅಲ್ಲೇ ಉಳಿದರು.

ಅಲ್ಲದೇ, ಗ್ರಾಮದ ತಗ್ಗುಪ್ರದೇಶದಲ್ಲಿನ ಕೆಲವು ಮನೆಗಳಿಗೂ ನೀರು ನುಗ್ಗಿದೆ. ಮೊಣಕಾಲು ಮುಳುಗುವಷ್ಟು ನೀರು ಮನೆ ಹಾಗೂ ರಸ್ತೆಯಲ್ಲಿ ಸಂಗ್ರಹಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ADVERTISEMENT

ಇನ್ನೊಂದೆಡೆ, ಜೇವರ್ಗಿ ಬಳಿಯ ಲೋಕೋಪಯೋಗಿ ಇಲಾಖೆಯ ಕ್ವಾಟರ್ಸಗಳಿಗೆ ಹೋಗುವ ರಸ್ತೆ ಸಂಪೂರ್ಣ ಕಚ್ಚಿಕೊಂಡು ಹೋಗಿದ್ದು, ಸಂಪರ್ಕ ಕಡಿತವಾಗಿದೆ.

ಈಚೆಗಷ್ಟೇ ಸುರಿದ ಮಳೆಗೆ ಈ ರಸ್ತೆ ಸಂಪೂರ್ಣ ಕೊಚ್ಚಿ ಹೋಗಿತ್ತು.ಅಧಿಕಾರಿಗಳು ದುರಸ್ತಿ ಮಾಡಿದ್ದರು. ಶುಕ್ರವಾರ ರಾತ್ರಿ ಸುರಿದ ಬಾರಿಗೆ ಮಳೆಗೆ ಮತ್ತೆ ಕೊಚ್ಚಿ ಹೋಗಿದೂದರಿಂದ ಜನ ಆಕ್ರೋಶ ಹೊರ ಹಾಕಿದ್ದಾರೆ.

ಮುಧೋಳದಲ್ಲಿ ದಾಖಲೆ ನಿರ್ಮಿತ ಮಳೆ

ಸೇಡಂ: ತಾಲ್ಲೂಕಿನ ಮುಧೋಳ ಹೋಬಳಿ ಭಾಗದಲ್ಲಿ ಶುಕ್ರವಾರ ಭಾರಿ ಮಳೆಯಾಗಿದ್ದು ಅನೇಕ ಮನೆಗಳಿಗೆ ನೀರು ನುಗ್ಗಿದೆ.

ಮುಧೋಳ 147 ಮಿ.ಮೀ ದಾಖಲೆ ನಿರ್ಮಿತ ಮಳೆಯಾಗಿದ್ದು, ಇದೇ ಮೊದಲ ಭಾರಿಗೆ ಇಷ್ಟೊಂದು ಮಳೆಯಾಗಿದೆ. ಮಳೆಯಿಂದ ತಾಲ್ಲೂಕಿನ ಹಳ್ಳಕೊಳ್ಳಗಳು, ಉಭಯ ನದಿಗಳಾದ ಕಾಗಿಣಾ ಕಮಲಾವತಿ ಮೈದುಂಬಿ ಹರಿಯುತ್ತಿವೆ. ಅಲ್ಲದೆ ಮುಧೋಳನ ಮನೆಗಳಿಗೆ ನೀರು ನುಗ್ಗಿದ್ದು, ಜನ ನೀರು ಹೊರ ಹಾಕುತ್ತಿದ್ದಾರೆ. ಹೊಲಗದ್ದೆಗಳು, ರಸ್ತೆಗಳು ಜಲಾವೃತ್ತಗೊಂಡಿವೆ.

ಸೇಡಂ 80.0 ಮಿ.ಮೀ, ಆಡಕಿ 73.3 ಮಿ.ಮೀ, ಕೋಡ್ಲಾ 73.0 ಮಿ.ಮೀ, ಕೋಲ್ಕುಂದಾ 76.5 ಮಿ.ಮೀ ಮಳೆಯಾಗಿದೆ.

ಸೇಡಂ ಸೇರಿದಂತೆ ತಾಲ್ಲೂಕಿನಾದ್ಯಂತ ಶುಕ್ರವಾರ ಸಾಯಂಕಾಲದಿಂದ ಸೊಮವಾರ ಬೆಳಗಿನ ಜಾವದವರೆಗೂ ಮಳೆ ನಿರಂತರವಾಗಿ ಸುರಿದಿದೆ.

ಮತ್ತೇ ಮಳಖೇಡ ಬ್ರಿಡ್ಜ್ ಮೇಲೆ ನೀರು

ಇದೇ ತಿಂಗಳಬ18 ರಂದು ಸುರಿದ ಮಳೆಯಿಂದಾಗಿ ಐದು ದಿನಗಳ‌ ಮಳಖೇಡ ಬ್ರಿಡ್ಜ್ ಮೇಲೆ ನೀರು ಬಂದು ರಾಜ್ಯ ಹೆದ್ದಾರಿ 10 ಕೆಲಬುರ್ಗಿ-ಸೇಡಂ ಸಂಪರ್ಕ ಕಡಿತಗೊಂಡಿತ್ತು. ರಾತ್ರಿ ಸುರಿದ ಮಳೆ ಹಾಗೂ ನದಿ‌ನೀರಿನ ಒಳಹರಿವು ಹೆಚ್ಚಿದ್ದರಿಂದ ಬ್ರಿಡ್ಜ್ ನ ಮೇಲೆ ಒಂದು ಅಡಿ ಎತ್ತರದಲ್ಲಿ ನೀರು ಹರಿಯುತ್ತಿದೆ. ಆದರೂ ಸಹ ಪ್ರಯಾಣಿಕರು ಜೀವ ಭಯದಲ್ಲಿಯೇ ತೆರಳುತ್ತಿದ್ದು, ಬ್ರಿಡ್ಜ್ ‌ಮುಳುಗಡೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಪ್ರಯಾಣಿಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.