ADVERTISEMENT

ಫೋನ್‌ ಮೂಲಕ ಆಯುರ್ವೇದ ಚಿಕಿತ್ಸೆಯ ಉಚಿತ ಸಲಹೆ

ಹಿಂಗುಲಾಂಬಿಕಾ ಆಯುರ್ವೇದ ಮೆಡಿಕಲ್‌ ಕಾಲೇಜಿನ ತಜ್ಞ ವೈದ್ಯರಿಂದ ಸಹಾಯ ವಾಣಿ

​ಪ್ರಜಾವಾಣಿ ವಾರ್ತೆ
Published 7 ಮೇ 2021, 4:28 IST
Last Updated 7 ಮೇ 2021, 4:28 IST

ಕಲಬುರ್ಗಿ: ಕೊರೊನಾ ಸಂಕಷ್ಟದಲ್ಲಿ ಜನರ ನೆರವಾಗಲು ಇಲ್ಲಿನ ಶ್ರೀ ಹಿಂಗುಲಾಂಬಿಕಾ ಆಯುರ್ವೇದ ಮೆಡಿಕಲ್‌ ಕಾಲೇಜಿನ ತಜ್ಞ ವೈದ್ಯರು ಸಹಾಯ ವಾಣಿ ಆರಂಭಿಸಿದ್ದಾರೆ. ಈ ವೈದ್ಯಕೀಯ ಮಹಾವಿದ್ಯಾಲಯದ ಎಂಟು ವೈದ್ಯರು ವಿವಿಧ ಕಾಯಿಲೆಗಳಿಗೆ ಫೋನ್‌ ಮೂಲಕವೇ ಪರಿಹಾರ ಹಾಗೂ ಉಪಚಾರದ ಮಾಹಿತಿ ನೀಡಲಿದ್ದಾರೆ.

ಸ್ವದೇಶಿ ಜಾಗರಣ ಮಂಚ್– ಕರ್ನಾಟಕ ಉತ್ತರ ಪ್ರಾಂತದ ಸಹಕಾರದೊಂದಿಗೆ ಈ ಆಯುರ್ವೇದ ಆರೋಗ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಲಹೆ, ಚಿಕಿತ್ಸೆ ಅಗತ್ಯವಿದ್ದವರು ಪ್ರತಿ ದಿನ ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೆ ಕರೆ ಮಾಡಬಹುದು. ನಿಮ್ಮ ಆರೋಗ್ಯದ ಸ್ಥಿತಿ, ಉಂಟಾದ ತೊಂದರೆ ಮುಂತಾದವುಗಳನ್ನು ತಿಳಿದುಕೊಂಡ ತಕ್ಷಣಕ್ಕೇ ವೈದ್ಯರು ನಿಮಗೆ ಆಯುರ್ವೇದದಲ್ಲಿ ಅದಕ್ಕೆ ಇರುವ ಪರಿಹಾರ ಕೂಡ ಸೂಚಿಸುತ್ತಾರೆ.

‘ಕೊರೊನಾ ವೈರಾಣು ಉಪಟಳ ಹೆಚ್ಚಾದ ಈ ಸಂದರ್ಭದಲ್ಲಿ ಸಾಮಾನ್ಯವಾಗಿ ಶಾರೀರಿಕ ಆಯಸ್ಸು, ಭಯ, ನೆಗಡಿ, ಕೆಮ್ಮು, ಜ್ವರ, ಉಸಿರಾಟದ ತೊಂದರೆ ಇತ್ಯಾದ ಅನಾರೋಗ್ಯ ಸಾಮಾನ್ಯವಾಗಿವೆ. ಇಂಥ ರೋಗಿಗಳು ಕಾಣಿಸಿಕೊಂಡಾ ಅವುಗಳಿಗೆ ಆಯುರ್ವೇದದಲ್ಲಿ ಇರುವ ಔಷಧೋಪಚಾವೇನು ಅಥವಾ ಮನೆಯಲ್ಲೇ ಇರಬಹುದಾದ ಪದಾರ್ಥಗಳ ಮೂಲಕ ಹೇಗೆ ಕಡಿಮೆ ಮಾಡಿಕೊಳ್ಳಬಹುದು ಎಂಬ ಬಗ್ಗೆ ತಿಳಿಸಿಕೊಡಲಾಗುತ್ತದೆ’ ಎಂದು ಈ ವೈದ್ಯರು ತಿಳಿಸಿದ್ದಾರೆ.

ADVERTISEMENT

‘ಉತ್ತಮ ಆಹಾರ, ವಿಹಾರ, ಚಿಂತನೆ, ಯೋಗ, ಪ್ರಾಣಾಯಾಮ, ಧ್ಯಾನಗಳನ್ನು ಮಾಡುವ ಬಗೆಯ ಬಗ್ಗೆ ಮಾಹಿತಿ ಪಡೆಯಬಹುದು. ಮನೆಯಲ್ಲಿಯೇ ಲಭ್ಯವಿರುವ ಅಡುಗೆ ಮನೆ ಸಾಮಾನು ಬಳಸುವುದು, ಅವಶ್ಯವಿದ್ದಲ್ಲಿ ರೋಗ ಲಕ್ಷಣ ತಿಳಿದುಕೊಂಡು ಆಯುರ್ವೇದ ಔಷಧಿಗಳಿಂದ ಚಿಕಿತ್ಸೆ, ಮುಂತಾದ ಬಹು ಆಯಾಮ ಚಿಕಿತ್ಸೆ ನೀಡಿ ರೋಗ ನಿವಾರಣೆ ಮಾಡುವುದು. ರೋಗಿಗಳಲ್ಲಿ ರೋಗ ನಿರೋಧಕ ಶಕ್ತಿ ವರ್ಧನೆ, ಮಾನಸಿಕ ಸಂಕಲ್ಪ, ಶಕ್ತಿ ವೃದ್ಧಿಸುವುದು ಈ ಚಿಕಿತ್ಸೆಯ ಭಾಗವಾಗಿವೆ’ ಎಂದು ಡಾ.ನಿರ್ಮಲಾ ಕೆಳಮನಿ ತಿಳಿಸಿದ್ದಾರೆ.

‘ಯಾವುದೇ ರೀತಿಯ ಚಿಕ್ಕ ಶಾರೀರಿಕ ಅನಾರೋಗ್ಯ ಕಾಣಿಸಿಕೊಂಡರೂ ಅಲಕ್ಷ್ಯ ಮಾಡಬಾರದು. ಭಯವೇ ಅನಾರೋಗ್ಯಕ್ಕೆ ಈಡು ಮಾಡುತ್ತದೆ. ಹಾಗಾಗಿ, ಯಾವುದೇ ತರದ ಅನಾರೋಗ್ಯ ಲಕ್ಷಣಗಳು ಕಂಡುಬಂದರೆ ಯಾರೂ ಆತಂಕಕ್ಕೆ ಒಳಗಾಗದೇ ವೈದ್ಯರ ಸಲಹ ಪಡೆಯಬೇಕು’ ಎಂದು ಅವರು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.