
ಕಲಬುರಗಿ: ಕಮಲಾಪುರ ತಾಲ್ಲೂಕಿನ ಆರ್.ವಿ. ಗೋಣಿ ಲೇಔಟ್ನಲ್ಲಿ ಫೆ.2ರಂದು ಬೆಳಿಗ್ಗೆ 11ಕ್ಕೆ ಹಿಂದೂ ಏಕತಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಾವೇಶ ಸಮಿತಿ ಅಧ್ಯಕ್ಷ ಶಿವಶೆಟ್ಟಿ ಪಾಟೀಲ ರಾಜನಾಳ ಹೇಳಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಮಾವೇಶದಲ್ಲಿ ವಿವಿಧ ಮಠಾಧೀಶರು, ರಾಜಕೀಯ ಮುಖಂಡರು, ವಿವಿಧ ಸಂಘ–ಸಂಸ್ಥೆಗಳು, ಗಣ್ಯರು ಪಾಲ್ಗೊಳ್ಳಲಿದ್ದಾರೆ. ಹಿಂದು ಸಮಾಜೋತ್ಸವವು ಕೇವಲ ರಾಜಕೀಯ ಉತ್ಸವವಲ್ಲ. ರಾಜಕೀಯ ಉದ್ದೇಶವೂ ಇಲ್ಲ. ಇದೊಂದು ಜನಜಾಗೃತಿ ಸಭೆಯಾಗಿದ್ದು, ಹಿಂದೂಗಳೆಲ್ಲ ಸಹೋದರರೆಂಬ ಭಾವವನ್ನು ಅಭಿವ್ಯಕ್ತಗೊಳಿಸುವ ಮಾರ್ಗವಾಗಿದೆ. ಸುಮಾರು 1500 ಜನರು ಸೇರುವ ನಿರೀಕ್ಷೆಯಿದೆ’ ಎಂದು ಹೇಳಿದರು.
ಮುತ್ಯಾನ ಬಬಲಾದನ ಗುರುಪಾದಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಮುಲ್ಲಾಮಾರಿ ಅಭಿನವ ಶರಣ ಶಂಕರಲಿಂಗ ಮಹಾರಾಜರು, ಉದಯರಾಜೇಂದ್ರ ಸ್ವಾಮೀಜಿ, ಶಾಂತವೀರ ಸ್ವಾಮೀಜಿ, ಶಿವಕುಮಾರ ಶಿವಾಚಾರ್ಯ, ಅಲ್ಲಮ ಪ್ರಭುಲಿಂಗ ಸ್ವಾಮೀಜಿ, ವಿರೂಪಾಕ್ಷ ದೇವರು, ಶಿವಲಿಂಗ ಸ್ವಾಮೀಜಿ, ಪರತಲಿಂಗ ಪರಮೇಶ್ವರ ಮಹಾರಾಜ, ಸವಿತಾ ದೇವಿ ಪಾಲ್ಗೊಳ್ಳಲಿದ್ದಾರೆ ಎಂದರು.
ಶೋಭಾಯಾತ್ರೆ: ಬೆಳಕೋಟಾ ವಿಠ್ಠಲ–ರುಕ್ಮಿಣಿ ದೇವಸ್ಥಾನದಿಂದ ಆರಂಭವಾಗುವ ಶೋಭಾಯಾತ್ರೆಯು, ಬಸವೇಶ್ವರ ವೃತ್ತ, ಲಕ್ಷ್ಮಿ ದೇವಸ್ಥಾನ, ಶಂಕರಲಿಂಗೇಶ್ವರ ದೇವಸ್ಥಾನ ಮಾರ್ಗವಾಗಿ ಆರ್.ವಿ.ಗೋಣಿ ಲೇಔಟ್ ತಲುಪಲಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.