ಕಲಬುರ್ಗಿ: ಇಲ್ಲಿನ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ವತಿಯಿಂದ ಭಾನುವಾರ ಮೈಸೂರಿನ ಸ್ವಗೃಹದಲ್ಲಿ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.
ಡಾಕ್ಟರೇಟ್ ಪದವಿ ಸ್ವೀಕರಿಸಿ ಮಾತನಾಡಿದ ಭೈರಪ್ಪ ಅವರು, ‘ನನ್ನ ಕಾದಂಬರಿ ಬರಹಕ್ಕೆ ರಾಮಾಯಣ ಮತ್ತು ಮಹಾಭಾರತ ಮಾದರಿಯಾದವೇ ಹೊರತು ಪಾಶ್ಚಾತ್ಯ ಕಾದಂಬರಿಗಳು ಅಲ್ಲ. ನನ್ನ ಸಾಹಿತ್ಯದ ಬೇರುಗಳು ಭಾರತ ಸಂಸ್ಕೃತಿಯಲ್ಲಿವೆ’ ಎಂದರು.
‘ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಇತ್ತೀಚೆಗೆ ಮಾಡಿದ ಸಾಧನೆ ಅಮೋಘವಾದದ್ದು’ ಎಂದು ಶ್ಲಾಘಿಸಿದರು.
ಅಳಿವಿನಂಚಿನಲ್ಲಿನ ಭಾಷೆಗಳ ಅಧ್ಯಯನ ಕೇಂದ್ರದ ಬೆಳರಿ, ಬೆಟ್ಟಕುರುಬ, ಸಂಕೇತಿ, ಎರವ, ಅರೆಭಾಷೆ, ಪಟ್ಟೆಗಾರ ಕೃತಿಗಳನ್ನು, ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರವು ಪ್ರಕಟಿಸಿರುವ ಚಿಂತಕ ಬಿ.ಎ.ವಿವೇಕ ರೈ ಅವರ ಕನ್ನಡ ಛಂದಸ್ಸು ಕೃತಿ ಮತ್ತು ಭಾಷಾ ತಜ್ಞೆ ಡಾ. ರಾಜೇಶ್ವರಿ ಮಹೇಶ್ವರಯ್ಯ ಅವರ ‘ಕರ್ನಾಟಕ ಕಾಲೇಜಿನ ಪ್ರಾಚಾರ್ಯರಾಗಿ’ ಕೃತಿಯನ್ನು ಬಿಡುಗಡೆ ಮಾಡಲಾಯಿತು.
ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಚ್.ಎಂ.ಮಹೇಶ್ವರಯ್ಯ ಅವರು ವಿಶ್ವವಿದ್ಯಾಲಯ ಶೈಕ್ಷಣಿಕ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಸಾಧನೆಯನ್ನು ವಿವರಿಸಿದರು.
ವಿಶ್ವವಿದ್ಯಾಲಯದ ಮಾನವಿಕ ಮತ್ತು ಭಾಷಾ ನಿಕಾಯದ ಡೀನ್ ಪ್ರೊ. ಬಸವರಾಜ ಡೋಣೂರ, ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ವಿಕ್ರಮ ವಿಸಾಜಿ, ಶಾಸ್ತ್ರೀಯ ಕನ್ನಡ ವಿಭಾಗದ ನಿರ್ದೇಶಕ ಪ್ರೊ. ಬಿ.ಬಿ.ಪೂಜಾರಿ, ಸಹಾಯಕ ಕುಲಸಚಿವ ಅಜೀಂ ಪಾಶಾ, ಪ್ರಧಾನ್ ಗುರುದತ್ತ, ಆರ್.ವಿ.ಎಸ್. ಸುಂದರಂ ಇದ್ದರು.
ಸೆಪ್ಟೆಂಬರ್ 23ರಂದು ನಡೆದ ಘಟಿಕೋತ್ಸವದಲ್ಲಿ ಭೈರಪ್ಪ ಅವರು ಗೌರವ ಡಾಕ್ಟರೇಟ್ ಸ್ವೀಕರಿಸಬೇಕಿತ್ತು. ಆದರೆ, ಕೊರೊನಾ ವೈರಾಣು ಹರಡುತ್ತಿರುವುದರಿಂದ ಕಲಬುರ್ಗಿಗೆ ಬಂದಿರಲಿಲ್ಲ. ಹೀಗಾಗಿ, ವಿ.ವಿ. ಕುಲಪತಿಗಳು ಭೈರಪ್ಪ ಅವರ ಮನೆಗೆ ತೆರಳಿ ಪದವಿ ಪ್ರದಾನ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.