ಚಿಂಚೋಳಿ: ತಾಲ್ಲೂಕಿನ ಮಿರಿಯಾಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಿರಿಯಾಣ, ಕಿಷ್ಟಾಪುರ, ಭೈರಂಪಳ್ಳಿ ಮೊದಲಾದ ಕಡೆಗಳಲ್ಲಿ ಅಕ್ರಮ ಗಣಿಗಾರಿಕೆ ಆರೋಪದ ಮೇರೆಗೆ ಜೆಸ್ಕಾಂ ಜಾಗೃತ ದಳದ ಅಧಿಕಾರಿಗಳು ಗುರುವಾರ ದಾಳಿ ನಡೆಸಿ, 13 ವಿದ್ಯುತ್ ಪರಿವರ್ತಕಗಳು, 2 ಕಲ್ಲು ಕತ್ತರಿಸುವ ಯಂತ್ರ ಹಾಗೂ ವಿದ್ಯುತ್ ತಂತಿ ಜಪ್ತಿ ಮಾಡಿದ್ದಾರೆ.
ದಾಳಿಯಲ್ಲಿ ಇನ್ಸಪೆಕ್ಟರ್ ದಿವ್ಯಾ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಲತಾ, ಜೆಸ್ಕಾಂ ಚಿಂಚೋಳಿ ಉಪ ವಿಭಾಗದ ಎಇಇ ಕಾಮಣ್ಣ ಇಂಜಳ್ಳಿ ಮತ್ತು ಸೇಡಂ ಉಪ ವಿಭಾಗದ ಎಇಇ ಬಾಬ್ರುದ್ದಿನ ಸೇರಿದಂತೆ ಅನೇಕ ಸಿಬ್ಬಂದಿ ದಾಳಿ ನಡೆಸಿದ್ದಾರೆ. ಕಳ್ಳತನದಿಂದ ವಿದ್ಯುತ್ ಪಡೆದು ಸರ್ಕಾರಕ್ಕೆ ನಷ್ಟ ಉಂಟು ಮಾಡುತ್ತಿದ್ದ ಗಣಿ ಧಣಿಗಳಿಗೆ ಶಾಕ್ ನೀಡಿದ್ದಾರೆ.
ಜೆಸ್ಕಾಂ ಅಧಿಕಾರಿಗಳ ನಡೆಗೆ ತಾಲ್ಲೂಕಿನಲ್ಲಿ ವ್ಯಾಪಕ ಪ್ರಸಂಶೆ ವ್ಯಕ್ತವಾಗಿದೆ. ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ ಗಣಿ ಧಣಿಗಳು ನೆರೆ ರಾಜ್ಯದಿಂದ ಖಾಸಗಿಯಾಗಿ ವಿದ್ಯುತ್ ಪರಿವರ್ತಕ ಖರೀದಿಸಿ ತಂದು ಕೊಂಡಿ ಹಾಕಿ ವಿದ್ಯುತ್ ಕಳ್ಳತನ ಮಾಡುತ್ತ ಗಣಿಗಾರಿಕೆಯಲ್ಲಿ ತೊಡಗಿದ್ದರು ಹೀಗಾಗಿ ಜೆಸ್ಕಾಂ ದಾಳಿ ಮಾಡಿದಾಗ ವಿದ್ಯುತ್ ಪರಿವರ್ತಕಗಳು ಜಪ್ತಿಯಾಗುತ್ತಿವೆ.
ಗಣಿಯ ತ್ಯಾಜ್ಯ ಸುರಿದು ರಸ್ತೆ ಬಂದ್: ಜೆಸ್ಕಾಂ ದಾಳಿಯ ಸುಳಿವು ಸಿಗುತ್ತಿದ್ದ ಗಣಿ ಧಣಿಗಳು ತಮ್ಮ ಟಿಪ್ಪರ್, ಟ್ರಾಕ್ಟರ್ ಮೂಲಕ ರಸ್ತೆಗೆ ಗಣಿಯ ತ್ಯಾಜ್ಯ ಸುರಿದು ರಸ್ತೆ ಬಂದ್ ಮಾಡಿ ದಾಳಿಗೆ ಅಡ್ಡಿಪಡಿಸಿದ ಘಟನೆ ನಡೆಯಿತು.
ಇದಕ್ಕೆ ಜಗ್ಗದ ಜೆಸ್ಕಾಂ ಜಾಗೃತ ದಳದವರು ಗಣಿತ್ಯಾಜ್ಯ ಜೆಸಿಬಿ ಯಂತ್ರಗಳಿಂದ ತೆರವುಗೊಳಿಸಿ ದಾಳಿ ಮುಂದುವರೆಸಿ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದವರಿಗೆ ಬಿಸಿ ಮುಟ್ಟಿಸಿದ್ದಾರೆ.
ಜೆಸ್ಕಾಂ ಅಧಿಕಾರಿಗಳು ದಾಳಿ ನಡೆಸುತ್ತಿದ್ದಂತೆ ಗಣಿ ಮಾಲಿಕರು ಕಾಲ್ಕಿತ್ತಿದರೇ, ಕಾರ್ಮಿಕರು ಮನೆಗಳಿಗೆ ದೌಡಾಯಿಸಿದ್ದು ಗೋಚರಿಸಿತು.
4 ತಿಂಗಳಲ್ಲಿ 2ನೇ ಬಾರಿ ದಾಳಿ: ಮಿರಿಯಾಣ ಸುತ್ತಲಿನ ಕಲ್ಲುಗಣಿಗಳ ಮೇಲೆ 4 ತಿಂಗಳಲ್ಲಿ 2ನೇ ಬಾರಿಗೆ ಜೆಸ್ಕಾಂ ದಾಳಿ ನಡೆಸಿದೆ. ಮಾರ್ಚ್ ಮೊದಲ ವಾರದಲ್ಲಿ ದಾಳಿ ನಡೆಸಿ 16 ಟಿಸಿ, ಕಲ್ಲು ಕತ್ತರಿಸುವ ಯಂತ್ರಗಳು ಮತ್ತು ವಿದ್ಯುತ್ ತಂತಿ ಜಪ್ತಿ ಮಾಡಿದ್ದರು. ಅಕ್ರಮ ಗಣಿಗಾರಿಕೆ ರೂವಾರಿ ಸಹಿತ 6 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಉಪ ವಿಭಾಗಾಧಿಕಾರಿ ಪ್ರಭುರೆಡ್ಡಿ ಅಧ್ಯಕ್ಷತೆಯಲ್ಲಿ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಲು ತಾಲ್ಲೂಕು ಆಡಳಿತ ಸೌಧದಲ್ಲಿ ಹಲವು ಬಾರಿ ಕಾರ್ಯಪಡೆ ನಡೆಸಲಾಗಿತ್ತು. ಸಭೆಯಲ್ಲಿ 24 ಅಕ್ರಮ ಗಣಿಗಳ ಪಟ್ಟಿಯನ್ನು ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳು ನೀಡಿದ್ದರು. ಸಭೆಯಲ್ಲಿ ದಾಳಿ ನಡೆಸಲು ಜೆಸ್ಕಾಂಗೆ ಸೂಚಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.