ಯಡ್ರಾಮಿ: ತಾಲ್ಲೂಕಿನ ಇಜೇರಿ ಗ್ರಾಮದಲ್ಲಿರುವ ಮೌಲಾನಾ ಅಜಾದ್ ಅಲ್ಪಸಂಖ್ಯಾತರ ಬಾಲಕರ ವಸತಿ ನಿಲಯದ ಅವ್ಯವಸ್ಥೆ ಹಾಗೂ ಮೂಲಸೌಲಭ್ಯಗಳ ಕೊರತೆ ಕುರಿತು ‘ಮೂಲ ಸೌಕರ್ಯವಿಲ್ಲ ವಿದ್ಯಾರ್ಥಿಗಳ ಕಣ್ಣೀರು’ ಎಂಬ ಶೀರ್ಷಿಕೆಯಲ್ಲಿ ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು.
ವರದಿಯಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ವಸತಿ ನಿಲಯಕ್ಕೆ ಮೂಲಸೌಲಭ್ಯ ಒದಗಿಸಲು ಕ್ರಮಕೈಗೊಂಡಿದ್ದಾರೆ. ಸದ್ಯ ಶಾಲೆಯಲ್ಲಿ ಎಲೆಕ್ಟ್ರಿಕ್ ವ್ಯವಸ್ಥೆಯನ್ನು ಸರಿಪಡಿಸಿದ್ದು, ಕಟ್ಟಡದ ಗೋಡೆಗಳಿಗೆ ಬಣ್ಣ ಬಳಿಯಲಾಗುತ್ತಿದೆ. ಉಳಿದಂತೆ ಎಲ್ಲ ಮೂಲಸೌಲಭ್ಯಗಳನ್ನು ಒದಗಿಸಲು ಅಧಿಕಾರಿಗಳು ಕ್ರಮಕೈಗೊಂಡಿದ್ದಾರೆ.
ಜಿಲ್ಲಾ ಅಧಿಕಾರಿ ಮತ್ತು ತಾಲ್ಲೂಕು ಅಧಿಕಾರಿ(ಟಿಎಂಇಒ) ಅವರು ‘ಪ್ರಜಾವಾಣಿ’ ವರದಿ ಗಮನಿಸಿ, ಮೌಲಾನಾ ಆಜಾದ್ ವಸತಿ ಶಾಲೆ ಪ್ರಭಾರ ವಾರ್ಡನ್ ವಿಶ್ವನಾಥ ರಾಸುಣಗಿ ಅವರಿಗೆ ಶಾಲೆಗೆ ಮೂಲಸೌಕರ್ಯ ಒದಗಿಸುವಂತೆ ನೋಟಿಸ್ ನೀಡಿದ್ದಾರೆ.
ಮೇಲಧಿಕಾರಿಗಳ ಸೂಚನೆಯಂತೆ ವಾರ್ಡನ್ ವಿಶ್ವನಾಥ ಅವರು, ‘ಶಾಲೆಗೆ ಸುಣ್ಣ-ಬಣ್ಣ ಹಚ್ಚಲು ಕ್ರಮಕೈಗೊಂಡಿದ್ದಾರೆ. ಲೈಟಿಂಗ್, ಫ್ಯಾನ್, ಎಲೆಕ್ಟ್ರಿಕ್ ಕೆಲಸ ಮುಗಿದಿದೆ. ಮುರಿದು ಹೋಗಿದ್ದ ಕಿಟಕಿ, ಬಾಗಿಲುಗಳನ್ನು ದುರಸ್ತಿಗೊಳಿಸಲಾಗಿದೆ. ಸುಣ್ಣ-ಬಣ್ಣ ಹಚ್ಚುವ ಕೆಲಸ ಪ್ರಗತಿಯಲ್ಲಿದೆ. ಉಳಿದ ಕೆಲಸಗಳನ್ನು ಶೀಘ್ರ ಪೂರ್ಣಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.