ADVERTISEMENT

ಕಲಬುರ್ಗಿ: ಬೀದಿ ಬದಿ ವ್ಯಾಪಾರಿಗಳ ಲೈಸೆನ್ಸ್ ನವೀಕರಣಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 6 ಜನವರಿ 2021, 4:39 IST
Last Updated 6 ಜನವರಿ 2021, 4:39 IST
ಬೀದಿ ಬದಿ ವ್ಯಾಪಾರಿಗಳ ಸಂಘದ ಸದಸ್ಯರು ಕಲಬುರ್ಗಿ ಪಾಲಿಕೆ ಆಯುಕ್ತ ಸ್ನೇಹಲ್ ಲೋಖಂಡೆ ಅವರಿಗೆ ಮನವಿ ಸಲ್ಲಿಸಿದರು
ಬೀದಿ ಬದಿ ವ್ಯಾಪಾರಿಗಳ ಸಂಘದ ಸದಸ್ಯರು ಕಲಬುರ್ಗಿ ಪಾಲಿಕೆ ಆಯುಕ್ತ ಸ್ನೇಹಲ್ ಲೋಖಂಡೆ ಅವರಿಗೆ ಮನವಿ ಸಲ್ಲಿಸಿದರು   

ಕಲಬುರ್ಗಿ: ಮಹಾನಗರ ಪಾಲಿಕೆಯು ಬೀದಿ ಬದಿ ವ್ಯಾಪಾರಿಗಳ ಲೈಸೆನ್ಸ್ ನವೀಕರಿಸದೇ ಇರುವುದರಿಂದ ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿದ ವ್ಯಾಪಾರಿಗಳಿಗೆ ಸರ್ಕಾರದ ಯೋಜನೆಗಳು ಸಿಗುತ್ತಿಲ್ಲ. ಕೂಡಲೇ ಲೈಸೆನ್ಸ್ ನವೀಕರಿಸಬೇಕು. ಅನಗತ್ಯವಾಗಿ ಬೀದಿ ವ್ಯಾಪಾರಿಗಳ ಪಟ್ಟಿಯಲ್ಲಿಸೇರ್ಪಡೆಯಾದವರನ್ನು ಹೆಸರುಗಳನ್ನು ರದ್ದುಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಬೀದಿ ವ್ಯಾಪಾರಿಗಳ ಸಂಘದ ಸದಸ್ಯರು ಪಾಲಿಕೆ ಆಯುಕ್ತ ಸ್ನೇಹಲ್ ಲೋಖಂಡೆ ಅವರಿಗೆ ಮನವಿ ಸಲ್ಲಿಸಿದರು.

ನಗರದ ಸೂಪರ್ ಚೌಪಾಟಿ ಬಜಾರದಲ್ಲಿರುವ ಬೀದಿ ವ್ಯಾಪಾರಿಗಳನ್ನು ಹೈಕೋರ್ಟ್‌ ಸೂಚನೆ ಮೇರೆಗೆ ಸ್ಥಳಾಂತರಿಸಲಾಗಿದ್ದು, ಅಲ್ಲಿ ಖುಲ್ಲಾ ಜಾಗವನ್ನು ಗುರುತಿಸಿ ವಿದ್ಯುತ್ ದೀಪ ಕಲ್ಪಿಸಲಾಗಿದೆ. ಆದರೆ, ವ್ಯವಹಾರ ನಡೆಸಲು ಪಾಲಿಕೆ ನೀಡಿರುವ ಲೈಸೆನ್ಸ್ ಇನ್ನೂ ನವೀಕರಿಸಿಲ್ಲ. ಇದರಿಂದ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಬೀದಿ ವ್ಯಾಪಾರಿಗಳ ಅನುಕೂಲಕ್ಕಾಗಿ ₹ 50 ಲಕ್ಷ ಬಿಡುಗಡೆಗೊಳಿಸಿದೆ. ಆ ಹಣವನ್ನು ಇಲ್ಲಿಯವರೆಗೂ ಬಿಡುಗಡೆ ಮಾಡಿಲ್ಲ. ರಾಜ್ಯ ಸರ್ಕಾರವು ಬೀದಿ ಬದಿ ವ್ಯಾಪಾರಿಗಳ ಅಧಿನಿಯಮವನ್ನು ಹೊರಡಿಸಿದ್ದು, ಅದನ್ನೂ ಪಾಲಿಕೆಯಿಂದ ಜಾರಿಗೊಳಿಸಿಲ್ಲ ಎಂದು ಆರೋಪಿಸಿದ್ದಾರೆ.

ADVERTISEMENT

ಸೂಪರ್ ಮಾರ್ಕೆಟ್ ಚೌಪಟ್ಟ ಹಳೆ ಜೈಲು ಆವರಣದಲ್ಲಿರುವ ಬೀದಿ ಬದಿ ವ್ಯಾಪಾರಿಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ ವಿದ್ಯುತ್ ದೀಪವನ್ನು ಒದಗಿಸದ ಕಾರಣ ಅನೇಕ ಬೀದಿ ವ್ಯಾಪಾರಿಗಳು ಜನತಾ ಬಜಾರ್, ಹಳೆ ಮಾರ್ಕೆಟ್, ಚಪ್ಪಲ್ ಬಜಾರ್‌ನಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಅವರಿಗೆ ಒದಗಿಸಿದ ಜಾಗದಲ್ಲಿ ಮೂಲಸೌಕರ್ಯ ಒದಗಿಸಿದರೆ ಅಲ್ಲಿ ವ್ಯಾಪಾರ ಮುಂದುವರಿಸುತ್ತಾರೆ ಎಂದರು.

ಬೀದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜಗನ್ನಾಥ ಸೂರ್ಯವಂಶಿ, ದತ್ತು ಭಾಸಗಿ, ಶಿವಾನಂದ ಹೊಸಮನಿ, ತಿರುಪತಿ ಪಿಸೆ, ಬಾಬು, ರಾಜು ಕಮಿತಕರ್, ವಿಷ್ಣುಕಾಂತ ಹಂಚಾಟೆ, ನಾಗಾನಂದ ಹಂಚಾಟೆ, ಗೋವಿಂದ ತಾಂದಳೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.