ಪ್ರಜಾವಾಣಿ ವಾರ್ತೆ
ಚಿಂಚೋಳಿ: ‘ಕೋವಿಡ್-3ನೇ ಅಲೆ ನಿಯಂತ್ರಣಕ್ಕೆ ತಾಲ್ಲೂಕು ಆಡಳಿತ ಸರ್ವ ಸನ್ನದ್ಧವಾಗಿರಬೇಕು. ನೆರೆ ರಾಜ್ಯಗಳಿಂದ ತಾಲ್ಲೂಕಿಗೆ ಬರುವ ಜನರ ಮೇಲೆ ನಿಗಾ ಇಡಲು ಗಡಿಯಲ್ಲಿ ಮುಂಜಾಗ್ರತೆ ಕೈಗೊಳ್ಳಬೇಕು’ ಎಂದು ಎಂದು ಶಾಸಕ ಡಾ. ಅವಿನಾಶ ಜಾಧವ, ತಹಶೀಲ್ದಾರ್ ಅಂಜುಮ ತಬಸ್ಸುಮ್ ಅವರಿಗೆ ಸೂಚಿಸಿದರು.
ಇಲ್ಲಿನ ತಾಲ್ಲೂಕು ಆಡಳಿತ ಭವನದ ಸಭಾಂಗಣದಲ್ಲಿ ಶುಕ್ರವಾರ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಅವರು, ಗಡಿಯಲ್ಲಿ ಥರ್ಮಲ್ ಸ್ಕ್ರೀನಿಂಗ್ ಸಮಯದಲ್ಲಿ ಕೋವಿಡ್ ಲಕ್ಷಣ ಕಂಡುಬಂದರೆ ಆರ್ಟಿಪಿಸಿಆರ್ ಪರೀಕ್ಷೆ ನಡೆಸುವಂತೆ ತಿಳಿಸಿದರು.
ತಾಲ್ಲೂಕಿನ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ತಾಲ್ಲೂಕು ಆಸ್ಪತ್ರೆಯ ಸ್ಥಿತಿಗತಿ, ಹಾಸಿಗೆಗಳ ಲಭ್ಯತೆ, ಸಿಬ್ಬಂದಿ ಹಾಗೂ ಆಕ್ಸಿಜನ್ ಸೌಲಭ್ಯವನ್ನು ತಾಲ್ಲೂಕು ಆಸ್ಪತ್ರೆಯ ಆಡಳಿತ ಮುಖ್ಯವೈದ್ಯಾಧಿಕಾರಿ ಡಾ. ಸಂತೋಷ ಪಾಟೀಲ ವಿವರಿಸಿದರು.
ತಹಶೀಲ್ದಾರ್ ಅಂಜುಮ ತಬಸ್ಸುಮ ಮಾತನಾಡಿ, ತಾಲ್ಲೂಕಿನ ಸುಲೇಪೇಟ ಮತ್ತು ಕುಂಚಾವರಂ ಗ್ರಾಮದಲ್ಲಿ ಕೋವಿಡ್ ಆರೈಕೆ ಕೇಂದ್ರ ತೆರೆಯಲು ಕಲ್ಯಾಣ ಮಂಟಪ ಗುರುತಿಸಲಾಗಿದೆ. ಜತೆಗೆ ಜನರಲ್ಲಿ ಮಾಸ್ಕ್ ಬಗ್ಗೆ ಅರಿವು ಮೂಡಿಸಲು ಬುಧವಾರ ಜಾಥಾ ನಡೆಸುವುದಾಗಿ ತಿಳಿಸಿದರು. ಸಾಧ್ಯವಾದರೆ ತಾವು ಜಾಥಾದಲ್ಲಿ ಭಾಗವಹಿಸುವುದಾಗಿ ಶಾಸಕರು ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಅನಿಲ ರಾಠೋಡ್ ಮಾತನಾಡಿದರು.
ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.