ಕಲಬುರಗಿ: 2021–22ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆಗಳ ಸ್ಥಳೀಯ ನೈಸರ್ಗಿಕ ವಿಕೋಪದಡಿ ಜಿಲ್ಲೆಯ 9911 ರೈತ ದೂರುದಾರರಿಗೆ ಬಾಕಿ ಹಣ ಸೇರಿದಂತೆ ₹ 8.49 ಕೋಟಿ ಹಣವನ್ನು ಶೀಘ್ರದಲ್ಲಿಯೆ ಪಾವತಿಸಲಾಗುವುದು ಎಂದು ಯೂನಿವರ್ಸಲ್ ಸೊಂಪೊ ಜನರಲ್ ಇನ್ಸುರೆನ್ಸ್ ಕಂಪನಿಯ ಬೆಂಗಳೂರಿನ ಪ್ರತಿನಿಧಿಗಳು ಒಪ್ಪಿಕೊಂಡಿದ್ದಾರೆ.
ಬುಧವಾರ ನಡೆದ ಕರ್ನಾಟಕ ರೈತ ಸುರಕ್ಷಾ–ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಜಿಲ್ಲಾ ಮಟ್ಟದ ಕುಂದುಕೊರತೆ ಸಭೆಯಲ್ಲಿ ವಿಮೆ ಯೋಜನೆಯಡಿ ಜಿಲ್ಲೆಯಲ್ಲಿ ಬಾಕಿ ಉಳಿದ ರೈತರಿಗೆ ಬರಬೇಕಾದ ವಿಮಾ ಹಣ ಕೂಡಲೇ ಪಾವತಿಸುವಂತೆಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ವಿಮಾ ಕಂಪನಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ 2021–22ನೇ ಸಾಲಿಗೆ ಸ್ಥಳೀಯ ನೈಸರ್ಗಿಕ ವಿಕೋಪ ಪರಿಹಾರದಡಿ ಜಿಲ್ಲೆಯಲ್ಲಿ 33,109 ದೂರುಗಳು ರೈತರಿಂದ ದಾಖಲಾಗಿವೆ. ಇದರಲ್ಲಿ 21,521 ರೈತರಿಗೆ ₹ 22 ಕೋಟಿ ಹಣ ಈಗಾಗಲೇ ಪಾವತಿಸಲಾಗಿದೆ. ಉಳಿದಂತೆ 3,480 ದೂರುದಾರ ರೈತರಿಗೆ ಭಾಗಶಃ ಹಣ ಪಾವತಿಸಿದ್ದು, ಬಾಕಿ ಹಣ ₹ 2.506 ಕೋಟಿಯನ್ನು ಏಪ್ರಿಲ್ 10ರೊಳಗೆ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುವುದಾಗಿ ವಿಮಾ ಕಂಪನಿಯ ಪ್ರತಿನಿಧಿಗಳು ತಿಳಿಸಿದರು.
ಇದಲ್ಲದೇ ತಡವಾಗಿ ಬೆಳೆ ಹಾನಿ ದೂರನ್ನು ದಾಖಲಿಸಿದ 6,431 ರೈತರಿಗೂ ₹ 5.9 ಕೋಟಿ ಹಣವನ್ನು ಇದೇ ಏಪ್ರಿಲ್ 20ರೊಳಗಾಗಿ ಪಾವತಿಸಲಾಗುವುದೆಂದು ವಿಮಾ ಸಂಸ್ಥೆಯ ಪ್ರತಿನಿಧಿಗಳು ಒಪ್ಪಿಕೊಂಡರು.
ಇದರಿಂದ ಜಿಲ್ಲೆಯಲ್ಲಿ 2021–22ರ ಮುಂಗಾರು ಹಂಗಾಮಿಗೆ ಸಂಬಂಧಿಸಿದಂತೆ ಸ್ಥಳೀಯ ನೈಸರ್ಗಿಕ ವಿಕೋಪ ಘಟಕದಡಿ ಒಟ್ಟಾರೆ ದೂರು ಸಲ್ಲಿಸಿದ ಎಲ್ಲಾ ರೈತರಿಗೆ ಅರ್ಹ ವಿಮೆ ಪರಿಹಾರ ದೊರಕುವಂತಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಇಂತೆಜಾರ್ ಹುಸೇನ್, ಜಂಟಿ ಕೃಷಿ ನಿರ್ದೇಶಕ ಮತ್ತು ಸಮಿತಿ ಸದಸ್ಯ ಕಾರ್ಯದರ್ಶಿ ಡಾ. ರತೇಂದ್ರನಾಥ ಸೂಗೂರ, ವಿಮಾ ಸಂಸ್ಥೆಯ ಕಲಬುರಗಿ ಜಿಲ್ಲಾ ವ್ಯವಸ್ಥಾಪಕ ಮನಸೂರ್ ಖಾನ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.