ADVERTISEMENT

ಜ 3ರಿಂದ ರಂಭಾಪುರಿ ಶ್ರೀಗಳಿಂದ ಇಷ್ಟಲಿಂಗ ಮಹಾಪೂಜೆ

ರೇಣುಕಾಚಾರ್ಯರು ಅವತರಿಸಿದ ತೆಲಂಗಾಣದ ಕೊಲನುಪಾಕ ಆಯೋಜನೆ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2019, 11:57 IST
Last Updated 30 ಡಿಸೆಂಬರ್ 2019, 11:57 IST
ದಾವಣಗೆರೆಯ ಹೈಸ್ಕೂಲ್‌ ಮೈದಾನದಲ್ಲಿ ಆಯೋಜಿಸಿರುವ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ ರಂಭಾಪುರಿ ಶ್ರೀ ಜಗದ್ಗುರು ಡಾ ವೀರ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರು ಗಣಿ ಸಚಿವ ಸಿ.ಸಿ ಪಾಟೀಲ್ ಅವರನ್ನು ಸನ್ಮಾನಿಸಿದರು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್ರಂಭಾಪುರಿ ಸ್ವಾಮೀಜಿ
ದಾವಣಗೆರೆಯ ಹೈಸ್ಕೂಲ್‌ ಮೈದಾನದಲ್ಲಿ ಆಯೋಜಿಸಿರುವ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ ರಂಭಾಪುರಿ ಶ್ರೀ ಜಗದ್ಗುರು ಡಾ ವೀರ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರು ಗಣಿ ಸಚಿವ ಸಿ.ಸಿ ಪಾಟೀಲ್ ಅವರನ್ನು ಸನ್ಮಾನಿಸಿದರು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್ರಂಭಾಪುರಿ ಸ್ವಾಮೀಜಿ   

ಕಲಬುರ್ಗಿ:ತೆಲಂಗಾಣ ರಾಜ್ಯದ ಕೊಲನುಪಾಕದ ಸೋಮೇಶ್ವರ ಕ್ಷೇತ್ರದಲ್ಲಿ ರಂಭಾಪುರಿ ಪೀಠದ ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ಶಿವಾಚಾರ್ಯರ ಇಷ್ಟಲಿಂಗ ಮಹಾಪೂಜೆ ಹಾಗೂ 64ನೇ ಜನ್ಮದಿನೋತ್ಸವ ಜನವರಿ 3ರಿಂದ 7ರವರೆಗೆ ನಡೆಯಲಿದೆ.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ರಂಭಾಪುರಿ ಸ್ವಾಮೀಜಿ ಅವರು, ‘ನಾಲ್ಕು ದಿನಗಳವರೆಗೆ ನಿತ್ಯ ಮಹಾಪೂಜೆ ಹಾಗೂ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದ್ದು, ಜ 7ರಂದು ಜನ್ಮ ದಿನೋತ್ಸವ ಹಾಗೂ ಧರ್ಮ ಜಾಗೃತಿ ಸಮಾರಂಭ ನಡೆಯಲಿದೆ. ರೇಣುಕಾಚಾರ್ಯರು ಅವತರಿಸಿದ ಸೋಮೇಶ್ವರ ಕ್ಷೇತ್ರವನ್ನು ಅಭಿವೃದ್ಧಿಪಡಿಸಲುಟ್ರಸ್ಟ್‌ ರಚಿಸಲಾಗಿದೆ. ತೆಲಂಗಾಣ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಕ್ಷೇತ್ರದಲ್ಲಿ ಭಕ್ತರ ವಾಸ್ತವ್ಯಕ್ಕಾಗಿ ಹೆಚ್ಚುವರಿ ಕೊಠಡಿಗಳನ್ನು ಕಟ್ಟಿಸಲು ಹಾಗೂ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ₹ 50 ಲಕ್ಷ ನೀಡುವಂತೆ ಟ್ರಸ್ಟ್‌ ಪ್ರಸ್ತಾವ ಸಲ್ಲಿಸಿತ್ತು. ಅನುದಾನ ದೊರೆತರೆ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಲಿವೆ. ರಂಭಾಪುರಿ ಪೀಠದಿಂದಲೂ ಅಲ್ಲಿ ಶಾಲೆಯೊಂದನ್ನು ಆರಂಭಿಸುವ ಚಿಂತನೆ ನಡೆದಿದೆ’ ಎಂದರು.

‘ನಾಲ್ಕು ದಿನಗಳವರೆಗೂ ಕಲಬುರ್ಗಿಯ ರೇಣುಕಾಚಾರ್ಯ ಮಂದಿರದ ಗಿರಿಯಪ್ಪ ಮುತ್ತ್ಯಾ ಅವರಿಂದ ಅನ್ನದಾಸೋಹ ಸೇವೆ ನಡೆಯಲಿದೆ. 7ರಂದು ಬೆಳಿಗ್ಗೆ 11.30ಕ್ಕೆ ಧರ್ಮ ಜಾಗೃತಿ ಸಮಾರಂಭ ನಡೆಯಲಿದ್ದು, ವಿವಿಧ ಮಠಗಳ ಸ್ವಾಮಿಗಳಾದ ವಿಮಲ ರೇಣುಕ ಮುಕ್ತಿಮುನಿ ಶಿವಚಾರ್ಯರು, ಸೋಮಲಿಂಗ ಶಿವಾಚಾರ್ಯರು, ಸೊಲ್ಲಾಪುರ ಕ್ಷೇತ್ರದ ಸಂಸದ ಡಾ.ಜಯಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಹಲವು ಸ್ವಾಮೀಜಿಗಳು ಭಾಗವಹಿಸುವರು’ ಎಂದು ಹೇಳಿದರು.

ADVERTISEMENT

ತೆಲಂಗಾಣದ ಇಂಧನ ಸಚಿವ ಜಿ.ಜಗದೀಶ ರೆಡ್ಡಿ ರಂಭಾಪುರ ಬೆಳಗು ಕೃತಿಯನ್ನು ಬಿಡುಗಡೆ ಮಾಡಲಿದ್ದಾರೆ. ಬೀದರ್‌ ಸಂಸದ ಭಗವಂತ ಖೂಬಾ, ಗುಲಬರ್ಗಾ ಡಾ.ಉಮೇಶ ಜಾಧವ್, ಜಹಿರಾಬಾದ್‌ ಸಂಸದ ಬಿ.ಬಿ.ಪಾಟೀಲ, ಆಲೇರು ಕ್ಷೇತ್ರದ ಶಾಸಕಿ ಜಿ.ಸುನಿತಾ, ಸಿಕಂದರಾಬಾದ್‌ನ ವೀರಶೈವ ಸಮಾಜದ ಧುರೀಣ ಎಂ. ವೀರಮಲ್ಲೇಶ್, ಅಣ್ಣಾರಾವ್ ಬಿರಾದಾರ, ಗುರುದಾರುಕ ಶಾಸ್ತ್ರಿಗಳು ಭಾಗವಹಿಸಲಿದ್ದಾರೆ ಎಂದರು.

ಶಿವಶರಣಪ್ಪ ಸೀರಿ, ಸಿದ್ದರಾಮಪ್ಪ ಅಲಗೂಡಕರ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.