ಕಲಬುರಗಿ: ಈಶ್ವರಚಂದ್ರ ವಿದ್ಯಾಸಾಗರ ಅವರು ಸಾಮಾಜಿಕ ಅನಿಷ್ಟಗಳ ವಿರುದ್ಧ ಹೋರಾಡಿದರು. ಬ್ರಿಟಿಷರ ಕಾಲದಲ್ಲಿದ್ದ ಊಳಿಗಮಾನ್ಯ ಪದ್ಧತಿಯ ಮೌಢ್ಯಗಳು, ಕಂದಾಚಾರಗಳನ್ನು ಪ್ರಶ್ನಿಸಿದರು. ಜಾತಿ ಪದ್ಧತಿ, ಸತಿ ಸಹಗಮನ, ಬಾಲ್ಯ ವಿವಾಹ, ಧರ್ಮಾಂಧತೆ ವಿರುದ್ಧ ಹೋರಾಡಿದರು ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ. ರಮೇಶ್ ಲಂಡನಕರ್ ಅಭಿಪ್ರಾಯಪಟ್ಟರು.
ಶಿಕ್ಷಣ ಉಳಿಸಿ ಸಮಿತಿಯಿಂದ ನಗರದ ಸರ್ಕಾರಿ ಬಿ.ಇಡಿ. ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ವಿದ್ಯಾಸಾಗರ ಅವರ 202ನೇ ಜನ್ಮ ವಾರ್ಷಿಕದ ಅಂಗವಾಗಿ ಆಯೋಜಿಸಿದ್ದ ಶಿಕ್ಷಣ ಉಳಿಸಿ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಮಹಾರಾಷ್ಟ್ರದಲ್ಲಿ ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ ಅವರು ಬಾಲಕಿಯರ ಶಿಕ್ಷಣಕ್ಕೆ ಶ್ರಮಿಸಿದರೆ, ರಾಜಾರಾಮ್ ಮೋಹನರಾಯ್ ಅವರು ವಿಧವಾ ಪುನರ್ವಿವಾಹದ ಹಕ್ಕಿಗಾಗಿ ಹೋರಾಡಿದರು. ಕವಿ ಖಲೀಲ್ ಗಿಬ್ರಾನ್ ಹೇಳಿದಂತೆ, ನಮ್ಮ ಮಕ್ಕಳು ನಮ್ಮವಲ್ಲ, ನಮ್ಮ ಮೂಲಕ ಬಂದ ಸಮಾಜದ ಮಕ್ಕಳು ಎಂದು ಹೇಳಿದ್ದಾರೆನೆ. ಅಂತಹ ಮಕ್ಕಳ ವ್ಯಕ್ತಿತ್ವವನ್ನು ರೂಪಿಸುವ, ಸಮಾಜದ ಸಮಗ್ರ ಬೆಳವಣಿಗೆಗಾಗಿ ಪೂರಕವಾದ, ಧರ್ಮನಿರಪೇಕ್ಷ, ವೈಜ್ಞಾನಿಕ ಶಿಕ್ಷಣವನ್ನು ರೂಪಿಸಬೇಕಿದೆ ಎಂದರು.
ತತ್ವಶಾಸ್ತ್ರ, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಸೇರಿದಂತೆ ವಿಶ್ವದ ಎಲ್ಲ ಬಗೆಯ ಜ್ಞಾನ ಪಡೆಯುವಂತಾಗಬೇಕು. ಇದಕ್ಕಾಗಿ ಶಿಕ್ಷಣ ಉಳಿಸಿ ಎಂಬ ಘೋಷವಾಕ್ಯವನ್ನು ಹಿಡಿದುಕೊಂಡು ಮುಂದೆ ಹೋಗೋಣ ಎಂದು ಹೇಳಿದರು.
ಸಾವಿತ್ರಿ ಅತಿಥಿಗಳನ್ನು ಪರಿಚಯಿಸಿದರು. ಉಪನ್ಯಾಸಕಿ ವಿಶಾಲಾಕ್ಷಿ ಪಾಟೀಲ, ಹೈಕೋರ್ಟ್ ವಕೀಲರಾದ ವಿಜಯಾ, ಕಾಳೇಜಿನ ಉಪನ್ಯಾಸಕಿ ಚಾಂದಬಿಬಿ ವೇದಿಕೆಯಲ್ಲಿದ್ದರು.
ಶಿಕ್ಷಣ ಉಳಿಸಿ ಸಮಿತಿಯ ಸದಸ್ಯರು ಹಾಗೂ ವಿದ್ಯಾರ್ಥಿನಿಯರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.