ಆಳಂದ: ತಾಲ್ಲೂಕಿನ ಜಮಗಾ(ಜೆ) ಗ್ರಾಮದ ಸಣ್ಣ ಸೇತುವೆಯು ಸೋಮವಾರದ ಮಳೆಗೆ ಕುಸಿದು ಬಿದ್ದಿದ್ದು, ಸಂಚಾರಕ್ಕೆ ಅಪಾಯಕಾರಿಯಾಗಿ ಪರಿಣಮಿಸಿದೆ.
ಆಳಂದ–ಮಾದನ ಹಿಪ್ಪರಗಾ ಸಂಪರ್ಕದ ಮುಖ್ಯರಸ್ತೆ ಇದಾಗಿದೆ. ಸೇತುವೆಯ ಎರಡೂ ಬದಿಗೆ ನೀರು ನುಗ್ಗಿ ಸೇತುವೆಗೆ ಹಾನಿಯಾಗಿದೆ. ದೊಡ್ಡ ವಾಹನಗಳು ಈ ರಸ್ತೆ ಮೇಲೆ ಹಾದು ಹೋಗುವುದು ಅಪಾಯಕ್ಕೆ ಎಡೆಮಾಡಿ ಕೊಡುವಂತೆ ಕಂಡು ಬರುತ್ತಿದೆ. ಈ ಸಂಪರ್ಕ ರಸ್ತೆ ಮುಖಾಂತರ ನೂರಾರು ವಾಹನಗಳು ಸಂಚರಿಸುತ್ತವೆ.
ಧಾರಾಕಾರ ಮಳೆಯಿಂದ ಹಳ್ಳಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಂದಿದೆ. ಹಳ್ಳದ ನೀರು ನುಗ್ಗಿ ಸುತ್ತಲಿನ ಹೊಲಗದ್ದೆಗಳಲ್ಲಿನ ಬೆಳೆ ಹಾನಿಯಾಗಿದೆ. ಜಮಗಾ (ಜೆ) ಮುಖ್ಯರಸ್ತೆಗೆ ಹೊಂದಿಕೊಂಡು ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ಬೆಳೆಗಳು ಬೆಳೆಯಲಾಗಿತ್ತು. ತೊಗರಿ, ಹೆಸರು ಬೆಳೆಸಹಿತ ಈ ತರಕಾರಿ ಬೆಳೆ ನಷ್ಟವಾಗಿದೆ ಎಂದು ರೈತ ಶಿವಲಿಂಗಪ್ಪ ಜಮಗಾ(ಜೆ) ಹೇಳಿದರು.
ತಹಶೀಲ್ದಾರ್ ದಯಾನಂದ ಪಾಟೀಲ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಗ್ರಾಮದ ರೈತರು ಬೆಳೆ ಹಾನಿಗೆ ಪರಿಹಾರ ನೀಡಲು ಹಾಗೂ ಸೇತುವೆ ದುರಸ್ತಿಗೆ ಒತ್ತಾಯಿಸಿದರು.
ಬೆಳೆ ಹಾನಿ ಬಗ್ಗೆ ರೈತರು ಅರ್ಜಿ ಸಲ್ಲಿಸಲು ತಿಳಿಸಿದ ತಹಶೀಲ್ದಾರ್ ಅವರು ಸೇತುವೆ ಕುಸಿದಿರುವ ಬಗ್ಗೆ ಅಧಿಕಾರಿಗಳಿಂದ ಪರಿಶೀಲನೆ ನಡೆಸಿ ದುರಸ್ತಿಗೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.