ADVERTISEMENT

ಜೆಡಿಎಸ್ ತೆರೆದ ‌ಬಾಗಿಲು; ಹೋಗುವವರು ಹೋಗಲಿ, ಬರುವವರು ಬರಲಿ: ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2021, 11:15 IST
Last Updated 30 ಆಗಸ್ಟ್ 2021, 11:15 IST
ಕಲಬುರ್ಗಿ ಪಾಲಿಕೆ ಚುನಾವಣಾ ಪ್ರಚಾರ್ಥ ಎಚ್‌ಡಿಕೆ ಅವರು ಜೆಡಿಎಸ್ ಪರವಾಗಿ ಮತಯಾಚನೆ ಮಾಡಿದರು
ಕಲಬುರ್ಗಿ ಪಾಲಿಕೆ ಚುನಾವಣಾ ಪ್ರಚಾರ್ಥ ಎಚ್‌ಡಿಕೆ ಅವರು ಜೆಡಿಎಸ್ ಪರವಾಗಿ ಮತಯಾಚನೆ ಮಾಡಿದರು   

ಕಲಬುರ್ಗಿ: ‘ಜಾತ್ಯತೀತ ಜನತಾದಳ (ಜೆಡಿಎಸ್) ತೆರೆದ ಬಾಗಿಲಿದ್ದಂತೆ. ಹೋಗುವವರು ಹೋಗಲಿ, ಬರುವವರು ಬರಲಿ‌’ಎಂದು ಜೆಡಿಎಸ್ ವರಿಷ್ಠ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ಪಾಲಿಕೆ ಚುನಾವಣೆ ಪ್ರಚಾರದ ವೇಳೆಕಲಬುರ್ಗಿ ನಗರಕ್ಕೆ ಬಂದಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್‌ಸೇರುವ ಬಗ್ಗೆ ಜಿ.ಟಿ. ದೇವೇಗೌಡ ಅವರು ತಮ್ಮ ನಿರ್ಧಾರವನ್ನು ಹೇಳಿದ್ದಾರೆ. ಆ ಬಗ್ಗೆ ಹೆಚ್ಚು ಪ್ರತಿಕ್ರಿಯೆ ನೀಡುವುದಿಲ್ಲ. ನಾವು ಮುಖಂಡರನ್ನು ಕರೆತರಲು ಬೇರೆ ಪಕ್ಷದ ಮುಖಂಡರ ಮನೆ ಬಳಿ ನಿಂತಿಲ್ಲ.‌ ಕಾಂಗ್ರೆಸ್, ಬಿಜೆಪಿಯವರೇ ಈ ಕೆಲಸ ಮಾಡುತ್ತಿದ್ದಾರೆ. ನಾವು ನಮ್ಮ ಕಾರ್ಯಕರ್ತರನ್ನು ನಂಬಿ ಪಕ್ಷ ಸಂಘಟನೆ ಮಾಡುತ್ತಿದ್ದೇವೆ’ ಎಂದರು.

‘ಕಲಬುರ್ಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕನಿಷ್ಠ 20 ಜೆಡಿ ಎಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಕಲಬುರ್ಗಿ, ಹುಬ್ಬಳ್ಳಿ- ಧಾರವಾಡ, ಬೆಳಗಾವಿ ಮಹಾನಗರ ಪಾಲಿಕೆಗಳಲ್ಲಿ ಸ್ವತಂತ್ರವಾಗಿ ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ಅತಂತ್ರ‌ ಫಲಿತಾಂಶ ಬಂದರೆ ಮುಂದೆ ಯಾವ ಪಕ್ಷದೊಂದಿಗೆ ‌ಮೈತ್ರಿ ಮಾಡಿಕೊಳ್ಳಬೇಕು ಎಂಬುದನ್ನು ನಿರ್ಧರಿಸುತ್ತೇವೆ’ಎಂದರು.

ADVERTISEMENT

‘ಪಕ್ಷದ ಕಾರ್ಯಕರ್ತರು ಸರಿ ಇಲ್ಲ ಎಂದು ನಾನು ಹೇಳಿಲ್ಲ. ಅದನ್ನು ಮಾಧ್ಯಮಗಳು ತಿರುಚಿವೆ. ನಾನು ಬಂದು ಹೋದ ನಂತರ ಕಾರ್ಯಕರ್ತರು ನಿಷ್ಕ್ರಿಯರಾಗುತ್ತಾರೆ ಎಂದು ಮುಖಂಡರು ಹೇಳಿದ್ದರು. ಅದನ್ನೇ ‌ನಾನು ಹೇಳಿದ್ದೇನೆ’ ಎಂದರು‌

‘ಲಕ್ಷಾಂತರ ‌ಕಾರ್ಯಕರ್ತರಿಂದ ಪಕ್ಷ ಉಳಿದಿದೆ. ಕಾರ್ಯಕರ್ತರಿಗೆ ನಾನು ಅವಹೇಳನ ಮಾಡಿಲ್ಲ’ಎಂದರು.

‘ಮೈಸೂರು ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರ‌ ವೈಫಲ್ಯ ಎದ್ದು ಕಾಣುತ್ತದೆ’ಎಂದು ತಿಳಿಸಿದರು.

ಶಾಸಕ ಬಂಡೆಪ್ಪ‌ ಕಾಶೆಂಪೂರ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಕೇದಾರಲಿಂಗಯ್ಯ ಹಿರೇಮಠ, ಮುಖಂಡರಾದ ನಾಸಿರ್ ಹುಸೇನ್, ಸಂಜೀವನ ಯಾಕಾಪುರ, ಬಾಲರಾಜ ಗುತ್ತೇದಾರ, ಶಿವಕುಮಾರ ನಾಟೀಕಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.