
ಜೇವರ್ಗಿ: ತಾಲ್ಲೂಕಿನ ಆಂದೋಲಾ ಗ್ರಾಮದ ಆರಾಧ್ಯ ದೈವ ಸದ್ಗುರು ಕರುಣೇಶ್ವರರು ಕಾಯಕ, ದಾಸೋಹ, ಭಕ್ತಿ, ಜ್ಞಾನ ಕ್ರಿಯೆಗಳಿಗೆ ಹೆಸರುವಾಸಿ. ಅಲ್ಲದೇ ಅನೇಕ ಪವಾಡಗಳ ಮೂಲಕ ಭಕ್ತರನ್ನು ಉದ್ದರಿಸಿದ್ದಾರೆ.
ಗುರು–ಲಿಂಗ–ಜಂಗಮ ಪ್ರೇಮಿಗಳಾದ ವೀರಯ್ಯ ಮತ್ತು ಬಸವಮ್ಮ ದಂಪತಿಗಳ ಉದರದಲ್ಲಿ ತ್ರಿಕಾಲ ಜ್ಞಾನಿ ಗುರುಲಿಂಗ ಶಿವಾಚಾರ್ಯರ ಕೃಪಾಶೀರ್ವಾದದಿಂದ ಜನಿಸಿದ ಕರುಣೇಶ್ವರರು, ಬಾಲ್ಯದಿಂದಲೇ ಸತ್ಯ, ಶಾಂತಿ, ಔದಾರ್ಯ, ಕ್ಷಮಾ ಗುಣಗಳನ್ನು ಮೈಗೂಡಿಸಿಕೊಂಡರು. ಸಗರನಾಡಿನ ಶಿವಶರಣರಲ್ಲಿಯೇ ಅಗ್ರಗಣ್ಯರಾದ ಕರುಣೇಶ್ವರರು ಗುರುಗಳ ಅಪ್ಪಣೆಯಂತೆ ಚಟ್ನಳ್ಳಿಯ ಸುಬೇದಾರ ಹಂಪಯ್ಯನವರ ಸುಪುತ್ರಿಯನ್ನು ವಿವಾಹವಾದರು.
ಮುಂದೆ ಸತಿಪತಿಗಳು ಕೃಷಿಯನ್ನೇ ಕಾಯಕವಾಗಿಸಿಕೊಂಡಿದ್ದರು. ಆ ಕಾಲದಲ್ಲಿ ಭೀಕರ ಬರಗಾಲ ತಲೆದೋರಿ ತೊಂದರೆಯಾದಾಗ ಕರುಣೇಶ್ವರರು ತಮ್ಮ ಮನೆಯಲ್ಲಿನ ಚಿನ್ನಾಭರಣವನ್ನು ಶೀಲವಂತರ ಅಂಗಡಿಯಲ್ಲಿ ಅಡವಿಟ್ಟು ಕಾಯಕ, ದಾಸೋಹ ಕೈಗೊಂಡ ಮಹಾನ್ ಸಂತ. ಗುರುಗಳ ಸಲಹೆಯಂತೆ ಒಂದು ದಿನ ಕರುಣೇಶ್ವರರಿಗೆ ಬಲಮುರಿಯ ಶಂಖ ಲಭಿಸಿದ ನಂತರ ಇಷ್ಟಾರ್ಥಗಳನ್ನು ಸಿದ್ಧಿಸಿಕೊಂಡು ದಾಸೋಹ ಕಾರ್ಯ ನಡೆಸುತ್ತಾರೆ.
ಪವಾಡ ಪುರುಷ ಕರುಣೇಶ್ವರರು:
ಸಗರನಾಡಿನ ಶ್ರೇಷ್ಠ ಶರಣ ಕರುಣೇಶ್ವರರು ವಿಶ್ರಾಂತಿ ಪಡೆಯುತ್ತಿರುವ ಸಂದರ್ಭದಲ್ಲಿ ಹಾವು (ಸರ್ಪ) ಬಂದು ನೆರಳಾಗಿದ್ದು, ಸಂತಾನ ಭಾಗ್ಯ ಪ್ರಾಪ್ತಿ ನೀಡಿದ್ದು, ವಿಷಪೂರಿತ ಆಹಾರ ಅಮೃತವಾಗಿದ್ದು, ಹುಣ್ಣು ವಾಸಿಯಾಗಿದ್ದು, ಮೂರ್ಛೆ ರೋಗ ನಿವಾರಣೆ ಹೀಗೆ ಹತ್ತು ಹಲವಾರು ಪವಾಡಗಳನ್ನು ಮಾಡಿದ್ದಾರೆ.
ಕರುಣೇಶ್ವರರ ವಂಶಸ್ಥರು ಅಂದಿನಿಂದ ಇಂದಿನವರೆಗೆ ಕೃಷಿ ಕಾಯಕ ಮಾಡುತ್ತಾ ಜಂಗಮ ಸೇವೆ, ದಾಸೋಹ ಕಾರ್ಯಗಳನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಪ್ರತಿ ವರ್ಷವೂ ಜಾತ್ರೆ ವಿಜೃಂಬಣೆಯಿಂದ ಜರುಗುತ್ತದೆ. ಮಠದ ಪೀಠಾಧಿಪತಿ ಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯದಲ್ಲಿ ಪುರಾಣ, ಪ್ರವಚನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಗೌರಿ ಹುಣ್ಣಿಮೆಯಾದ ಬಳಿಕ ಪಂಚಮಿ ದಿನ (ನ. 9) ಕರುಣೇಶ್ವರರ ರಥೋತ್ಸವ ನಡೆಯಲಿದೆ. ರಥೋತ್ಸವದ ಆರಂಭದಲ್ಲಿ ಹಾಗೂ ಮಂಗಳಾರತಿ ಸಮಯದಲ್ಲಿ ಗುರು–ಶಿಷ್ಯರನ್ನು ಮೂಲ ಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಐದು ದಿನಗಳವರೆಗೆ ನಿತ್ಯ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಜತೆಗೆ ನಾಟಕ, ಕುಸ್ತಿ ಪಂದ್ಯಗಳು ಜರುಗಲಿವೆ. ಐದನೇ ದಿನ ಕಳಸ ಇಳಿಸುವ ಸಂದರ್ಭದಲ್ಲಿ ಸಾವಿರಾರು ಜನರಿಗೆ ಜೋಳದ ಕಡುಬಿನ ವಿಶೇಷ ಪ್ರಸಾದ ವಿತರಣೆ ಮಾಡಲಾಗುತ್ತದೆ.
ಸದ್ಗುರು ಕರುಣೇಶ್ವರರು ಈ ಭಾಗದ ಶರಣರಲ್ಲಿಯೇ ಅಗ್ರಗಣ್ಯರಾಗಿದ್ದಾರೆ. ಬೇಡಿ ಬಂದ ಭಕ್ತರನ್ನು ಉದ್ದರಿಸುವ ಕರುಣಾಮಯಿ ಕರುಣೇಶ್ವರರ ಮಹಿಮೆ ಅಪಾರಸಿದ್ದಲಿಂಗ ಸ್ವಾಮೀಜಿ ಪೀಠಾಧಿಪತಿ ಕರುಣೇಶ್ವರರ ಮಠ ಆಂದೋಲಾ
ಕರುಣೇಶ್ವರರ ಜಾತ್ರಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ನಾಡಿನ ಮೂಲೆಮೂಲೆಗಳಿಂದ ಸಹಸ್ರಾರು ಭಕ್ತರು ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗುತ್ತಾರೆ.ಸಿದ್ದು ಸಾಹು ಅಂಗಡಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜೇವರ್ಗಿ–ಯಡ್ರಾಮಿ ತಾಲ್ಲೂಕಾಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.