ADVERTISEMENT

ಹೆಚ್ಚಿನ ಅನುದಾನಕ್ಕೆ ಶಾಸಕ ಡಾ.ಅಜಯಸಿಂಗ್ ಮನವಿ

ಜೇವರ್ಗಿ: 21,325 ಹೆಕ್ಟೇರ್ ಬೆಳೆ ಹಾನಿ, 190 ಜನರಿಗೆ ₹7 ಲಕ್ಷ ಪರಿಹಾರ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2020, 2:27 IST
Last Updated 6 ಅಕ್ಟೋಬರ್ 2020, 2:27 IST
ಜೇವರ್ಗಿ ತಾಲ್ಲೂಕಿನ ನೇದಲಗಿಯಲ್ಲಿ ಅತಿವೃಷ್ಟಿಯಿಂದ ಹಾನಿಗೀಡಾದ ಜಮೀನು ಗಳಿಗೆ ಶಾಸಕಅಜಯಸಿಂಗ್ ಭೇಟಿ ಪರಿಶೀಲಿಸಿದರು. ತಹಶೀಲ್ದಾರ್ ಸಿದರಾಯ ಭೋಸಗಿ, ಕೃಷಿ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಬ್ಯಾಕೋಡ ಇದ್ದರು
ಜೇವರ್ಗಿ ತಾಲ್ಲೂಕಿನ ನೇದಲಗಿಯಲ್ಲಿ ಅತಿವೃಷ್ಟಿಯಿಂದ ಹಾನಿಗೀಡಾದ ಜಮೀನು ಗಳಿಗೆ ಶಾಸಕಅಜಯಸಿಂಗ್ ಭೇಟಿ ಪರಿಶೀಲಿಸಿದರು. ತಹಶೀಲ್ದಾರ್ ಸಿದರಾಯ ಭೋಸಗಿ, ಕೃಷಿ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಬ್ಯಾಕೋಡ ಇದ್ದರು   

ಜೇವರ್ಗಿ: ತಾಲ್ಲೂಕಿನಲ್ಲಿ ಕಳೆದ ವಾರ ಸುರಿದ ಧಾರಾಕಾರ ಮಳೆಯಿಂದ ಬೆಳೆ ಹಾನಿಗೀಡಾದ ಜಮೀನುಗಳಿಗೆ ಶಾಸಕ ಡಾ.ಅಜಯಸಿಂಗ್ ಸೋಮವಾರ ಭೇಟಿ ನೀಡಿ ವೀಕ್ಷಿಸಿದರು.

ಮಂದೇವಾಲ, ನೇದಲಗಿ, ಗುಡೂರ (ಎಸ್.ಎನ್) ಗ್ರಾಮಗಳಿಗೆ ಭೇಟಿ ನೀಡಿದ ಅವರು ತಹಶೀಲ್ದಾರ್ ಸಿದರಾಯ ಭೋಸಗಿ ಅವರಿಂದ ಮಾಹಿತಿ ಪಡೆದುಕೊಂಡರು.

ನಂತರ ಮಾತನಾಡಿದ ಅವರು, ಜೇವರ್ಗಿ ತಾಲ್ಲೂಕಿನ ಜೇವರ್ಗಿ, ನೆಲೋಗಿ, ಆಂದೋಲಾ ಹೋಬಳಿಗಳಲ್ಲಿ ಒಟ್ಟು 21,325 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿದ ಪ್ರಮುಖ ಮುಂಗಾರು ಬೆಳೆಗಳಾದ ತೊಗರಿ, ಹತ್ತಿ, ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗಳು ಹಾನಿಗೀಡಾಗಿವೆ. 293 ಮನೆಗಳಿಗೆ ನೀರು ನುಗ್ಗಿದೆ. ಈಗಾಗಲೇ 190 ಮನೆಗಳಿಗೆ ತಲಾ ₹ 3,800 ರಂತೆ ಒಟ್ಟು ₹ 7.15 ಲಕ್ಷ ಪರಿಹಾರ ವಿತರಿಸಲಾಗಿದೆ ಎಂದರು

ADVERTISEMENT

331 ಮನೆಗಳು ಹಾನಿಗೀಡಾಗಿದ್ದು, ಈ ಕುಟುಂಬಗಳಿಗೆ ಶೀಘ್ರ ಪರಿಹಾರ ನೀಡಲಾಗುವುದು ಎಂದು ಹೇಳಿದರು.

ಪರಿಹಾರಕ್ಕೆ ಮನವಿ: ಬೆಳೆ ಮತ್ತು ಮನೆ ಹಾನಿಗೀಡಾದವರಿಗೆ ಹೆಚ್ಚಿನ ಅನುದಾನ ಬಿಡುಗಡೆಗೊಳಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

ನಂತರ ಶಾಸಕರು ಗುಡೂರ (ಎಸ್.ಎನ್), ಮಯೂರ, ಮುರಗಾನೂರ, ಹಾಲಘತ್ತರಗಾ, ಬಿಲ್ಲಾಡ ಬಳ್ಳುಂಡಗಿ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಹಾನಿಗೀಡಾದ ಬೆಳೆಗಳ ಕುರಿತು ಕೃಷಿ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಶಾಸಕರೊಂದಿಗೆ ತಹಶೀಲ್ದಾರ್ ಸಿದರಾಯ ಭೋಸಗಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಬ್ಯಾಕೋಡ, ಮುಖಂಡರಾದ ಕಾಶಿರಾಯಗೌಡ ಯಲಗೋಡ, ಮಲ್ಲಣ್ಣಗೌಡ ನೇದಲಗಿ, ಸಿದ್ದಣ್ಣ ಮಯೂರ, ರಾಜಶೇಖರ ಚೂರಿ ಬಳ್ಳುಂಡಗಿ, ಕರೆಪ್ಪ ಕರಗೊಂಡ, ರಾವುತರಾಯ ಕಲ್ಲೂರ, ಶಿವಾನಂದ ಕಲ್ಲೂರ, ವಿಶ್ವನಾಥ ಬಿರಾದಾರ ಬಳ್ಳುಂಡಗಿ, ತಿಪ್ಪಣ್ಣ ನೇದಲಗಿ, ಖುರ್ಷಿದ್ ಅಲಿ ನೇದಲಗಿ, ಸುರೇಶ ಬೇಲೂರ, ಪರಶುರಾಮ ಪಾಟೀಲ, ದಿನೇಶ ಠಾಕೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.