ಕಲಬುರಗಿ: ‘ಆಸಕ್ತಿಯಿಂದ ತರಬೇತಿ ಪಡೆದು ಸೂಕ್ತ ಉದ್ಯೋಗ ಪಡೆಯಬೇಕು. ಕೆಲಸವನ್ನು ನಿಷ್ಠೆಯಿಂದ ಮಾಡಬೇಕು’ ಎಂದು ನಗರ ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ. ಹೇಳಿದರು.
ನಗರದ ಐಟಿಐ ಕಾಲೇಜು ಆವರಣದಲ್ಲಿ ಬುಧವಾರ ಸರ್ಕಾರಿ ಹಾಗೂ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳು, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಸಹಯೋಗದಲ್ಲಿ ನಡೆದ ಜಿಲ್ಲಾ ಮಟ್ಟದ ಶಿಶಿಕ್ಷು ಹಾಗೂ ಉದ್ಯೋಗ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘25 ವರ್ಷಗಳ ಹಿಂದೆ ಐಟಿಐ ತರಬೇತಿ ಪಡೆದ ನನ್ನ ಸ್ನೇಹಿತರೊಬ್ಬರು ಪ್ರಾರಂಭದಲ್ಲಿ ₹2,000 ಸಂಬಳದೊಂದಿಗೆ ಉದ್ಯೋಗ ಆರಂಭಿಸಿದರು. ಅದರೊಂದಿಗೆ ಡಿಪ್ಲೋಮಾ ಕೋರ್ಸ್ ಮುಗಿಸಿ ಉದ್ಯೋಗದಲ್ಲಿ ಮುಂಬಡ್ತಿ ಹೊಂದಿ ಪ್ರಸ್ತುತ ಮಾಸಿಕ ₹2.5 ಲಕ್ಷ ಸಂಬಳ ಪಡೆಯುತ್ತಿದ್ದಾರೆ‘ ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಾಚಾರ್ಯ ಮುರಳೀಧರ ರತ್ನಗಿರಿ, ‘ಮೇಳದಲ್ಲಿ ಸುಮಾರು 25ಕ್ಕೂ ಹೆಚ್ಚು ಉದ್ಯೋಗದಾತರು ಭಾಗವಹಿಸಿದ್ದು ಸುಮಾರು 800 ಅಭ್ಯರ್ಥಿಗಳು ಆನ್ಲೈನ್ನಲ್ಲಿ ನೋಂದಣಿ ಮಾಡಿಸಿಕೊಂಡಿದ್ದರು. ಸುಮಾರು 300ಕ್ಕೂ ಹೆಚ್ಚು ಅಭ್ಯರ್ಥಿಗಳು ಶಿಶಿಕ್ಷು/ಉದ್ಯೋಗ ಪಡೆಯುವುರು’ ಎಂದು ತಿಳಿಸಿದರು.
ವಿಭಾಗೀಯ ಕಚೇರಿಯ ಜಂಟಿ ನಿರ್ದೇಶಕ ರಾಜೇಶ ಬಾವಗಿ ಮಾತನಾಡಿ, ‘ಸ್ಪರ್ಧಾತ್ಮಕ ಯುಗದಲ್ಲಿ ತಾಂತ್ರಿಕ ಕೋರ್ಸ್ಗಳಾದ ಐಟಿಐ ವೃತ್ತಿಯನ್ನು ಅಭ್ಯಾಸ ಮಾಡಿ ನಿಮ್ಮ ಭವಿಷ್ಯವನ್ನು ಉಜ್ವಲವಾಗಿಸಿಕೊಳ್ಳಿ. ಸ್ವಯಂ ಉದ್ಯೋಗದ ಅವಕಾಶಗಳು ಕೂಡ ಸಾಕಷ್ಟು ಇವೆ’ ಎಂದು ವಿವರಿಸಿದರು.
ಆಡಳಿತಾಧಿಕಾರಿ ಸುರೇಶ ವಗ್ಗೆ, ವಿಭಾಗೀಯ ಕಚೇರಿಯ ಉಪನಿರ್ದೇಶಕಿ ಡಾ.ರುಬಿನಾ ಪರ್ವೀನ್, ಪಿಯೂಶ್ ಪರಿಹಾರ, ಪ್ರಾಚಾರ್ಯ ಶಕೀಲ್ ಅನ್ಸಾರಿ, ಉದ್ಯಮಿ ವೀರೇಶ, ತರಬೇತಿ ಅಧಿಕಾರಿ ಭಾರತಿ ಮಹಾದೇವಪ್ಪ, ವಿಜಯಕುಮಾರ ಮೇಳಕುಂದಿ, ಬಸನಗೌಡ ಪಾಟೀಲ ಸೇರಿದಂತೆ ವಿವಿಧ ಸಂಸ್ಥೆಗಳ ಪ್ರತಿನಿಧಿಗಳು, ಉದ್ಯೋಗದಾತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.