ಕಲಬುರ್ಗಿ: ಜಿಲ್ಲೆಯಲ್ಲಿರುವ ಅಂಗವಿಕಲರಿಗೆ ಸರ್ಕಾರ ಉದ್ಯೋಗಾವಕಾಶ ನೀಡಬೇಕು ಎಂದು ಒತ್ತಾಯಿಸಿ ಗುಲಬರ್ಗಾ ಜಿಲ್ಲಾ ಕಿವುಡರ ಸಂಘದ ನೇತೃತ್ವದಲ್ಲಿ ನೂರಾರು ಅಂಗವಿಕಲರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಅಂಗವಿಕಲರು ಸಾಕಷ್ಟು ವಿದ್ಯಾವಂತರಾಗಿದ್ದು, ಕುಟುಂಬದ ಜವಾಬ್ದಾರಿಯನ್ನು ಹೊರಬೇಕಿದೆ. ಹೀಗಾಗಿ ಅಂಗವಿಕಲರಿಗಾಗಿ ಪ್ರತಿವರ್ಷ ಶೈಕ್ಷಣಿಕ ಅರ್ಹತೆಯ ಆಧಾರದ ಮೇಲೆ ಸರ್ಕಾರಿ ಕಚೇರಿಗಳಲ್ಲಿ ನೇಮಕಾತಿಗಳನ್ನು ಮಾಡಬೇಕು. ಜಿಲ್ಲಾಧಿಕಾರಿಗಳ ಅಧೀನದಲ್ಲಿರುವ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ರೋಸ್ಟರ್ ಪರಿಶೀಲನೆ ಮಾಡಿ ಶೇ 4ರಷ್ಟು ನೇಮಕಾತಿಯಲ್ಲಿ ಆದ್ಯತೆ ನೀಡಬೇಕು. ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಅಂಗವಿಕಲರ ಸಂಕ್ಷೇಮ ಶಾಖೆಯನ್ನು ಗುರುತಿಸಿ ಶೇ 3ರಿಂದ 4ರಷ್ಟು ನೇಮಕಾತಿ ಮಾಡಿಕೊಳ್ಳಬೇಕು. ಕಿರಿಯ ಸಹಾಯಕ, ಟೈಪಿಸ್ಟ್ (ಕಂಪ್ಯೂಟರ್ ಆಪರೇಟರ್) ಹುದ್ದೆಗಳನ್ನು ಪ್ರೌಢಶಿಕ್ಷಣದಲ್ಲಿ ಗರಿಷ್ಠ ಶಿಕ್ಷಣ ಪಡೆದವರಿಗೆ ಉದ್ಯೋಗವನ್ನು ಕೊಡಬೇಕು. ಶೇ 75ರಿಂದ ಶೇ 100ರವರೆಗೆ ಮಾತ್ರ ಕಿವುಡು ಹಾಗೂ ಮೂಗರಿಗೆ ಮಾತ್ರ ಉದ್ಯೋಗ ಕಲ್ಪಿಸಿಕೊಡಬೇಕು. ಕಿವುಡ ಹಾಗೂ ಮೂಗರಿಗೆ (ಇಎನ್ಟಿ) ಬ್ಯಾರಾ ತಪಾಸಣೆಯ ಮೂಲಕವೇ ನೇಮಕಾತಿ ಮಾಡಬೇಕು. ಇದನ್ನು ಸರ್ಕಾರವೇ ನೇರ ಪರಿಶೀಲನೆ ಮಾಡಬೇಕು. ಸರ್ಕಾರಿ ಆದೇಶದ ಪ್ರಕಾರ ಸ್ಥಳೀಯರಿಗೆ ಮಾತ್ರ ಅಂಗವಿಕಲತೆಯ ಆಧಾರದ ಮೇಲೆ ಉದ್ಯೋಗ ಕೊಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಕಿವುಡರ ಸಂಘದ ಅಧ್ಯಕ್ಷ ಧನಂಜಯ ಉದನೂರ, ಡೆವಲಪ್ಮೆಂಟ್ ಸೊಸೈಟಿ ಫಾರ್ ಡೆಫ್ನ ಕಾರ್ಯದರ್ಶಿ ವಿ. ಭಾರತಿ ಪ್ರಸಾದ್, ಮುಖಂಡರಾದ ಬಸಲಿಂಗಯ್ಯ ಹಿರೇಮಠ, ಶಶಿಕಾಂತ ರಸ್ತಾಪುರ, ಮಲ್ಲಿಕಾರ್ಜುನ ಸುರಪುರ, ಗೋವಿಂದಸ್ವಾಮಿ ಗುತ್ತೇದಾರ, ವಾಸುದೇವ ಕೆ. ದೇಸಾಯಿ, ಏಜಾಜ್ ಮೊಹಮ್ಮದ್, ಶರಣಗೌಡ ಜೆ. ಬಿರಾದಾರ, ಹಯ್ಯಾಳಪ್ಪ ಎನ್. ವಗ್ಗೆನ್ನವರ, ಶೇಖ್ ಕಲೀಲ್ ಅಹ್ಮದ್, ಆನಂದ ವಿ. ಪಾಟೀಲ, ಶಾಂತಕುಮಾರ ಜಿ. ಹೂಗಾರ, ಗೌತಮ ಎಂ. ಕೆರಮಬಾಗಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.