ಯಡ್ರಾಮಿ: ತಾಲೂಕಿನ ಮಳ್ಳಿ ಗ್ರಾಮದ ಹಳ್ಳದ ಅವೈಜ್ಞಾನಿಕ ಕಾಮಗಾರಿ ಸ್ಥಗಿತಗೊಳಿಸಿದ ಸ್ಥಳಕ್ಕೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಹಾಗೂ ಗುತ್ತಿಗೆದಾರರು ಶನಿವಾರ ದಿಢೀರನೆ ಭೇಟಿ ನೀಡಿದರು.
ಮಳ್ಳಿ ಗ್ರಾಮದ ಹಳ್ಳದಿಂದ ಕಡಕೋಳ ಹಳ್ಳದವರೆಗೆ ಹೂಳು ಎತ್ತಿ ನಾಲೆ ಮಾಡುವ 6.5 ಕಿ.ಮೀ ಉದ್ದದ ಕಾಮಗಾರಿ ಎರಡು ವಾರಗಳ ಹಿಂದೆ ಪ್ರಾರಂಭವಾಗಿತ್ತು. ಆದರೆ ಕಾಮಗಾರಿ ಅವೈಜ್ಞಾನನಿಕವಾಗಿ ನಡೆಯುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರಿಂದ ಕಾಮಗಾರಿಯನ್ನು ನಿಲ್ಲಿಸಿದ್ದರು.
ಹೀಗಾಗಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದರು. ಗ್ರಾಮಸ್ಥರ ಅನುಕೂಲಕ್ಕೆ ತಕ್ಕಂತೆ ಕಾಮಗಾರಿ ಮಾಡಿಕೊಡುವುದಾಗಿ ಅಧಿಕಾರಿಗಳು ಹಾಗೂ ಗುತ್ತಿಗೆದಾರ ಭರವಸೆ ನೀಡಿದ ಮೇಲೆ ಶನಿವಾರ ಸಂಜೆ ಕಾಮಗಾರಿ ಪುನರಾರಂಭಗೊಂಡಿತು.
ಇದಕ್ಕೂ ಮುನ್ನ, ಊರಿನ ಮಹಿಳೆಯರು ಗುಂಪು ಗುಂಪಾಗಿ ಕಾಮಗಾರಿ ಸ್ಥಳಕ್ಕೆ ಬಂದು ಗುತ್ತಿಗೆದಾರರ ಮೇಲೆ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು. ಈ ಸಂದರ್ಭದಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್ ಆರ್. ಪಾಟೀಲ, ಕಿರಿಯ ಎಂಜಿನಿಯರ್ ಸುನೀಲಕುಮಾರ, ಹಣಮಂತ, ಗ್ರಾಮಸ್ಥರಾದ ಸಂತೋಷ ಯಾದಗಿರ, ಮಲ್ಲರಡ್ಡಿ ಕೊಂಗಂಡಿ, ಅಯ್ಯಪ್ಪ ಕೋಟ್ಯಾಳ, ಗಿರಿಮಲ್ಲಪ್ಪಗೌಡ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.