ADVERTISEMENT

ಚಿತ್ತಾಪುರ | ಕಾಗಿಣಾ ನದಿ ಪ್ರವಾಹ : ಸಾವಿರಾರು ಎಕರೆ ಬೆಳೆ ಹಾನಿ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2025, 4:26 IST
Last Updated 29 ಸೆಪ್ಟೆಂಬರ್ 2025, 4:26 IST
ಚಿತ್ತಾಪುರ ತಾಲ್ಲೂಕಿನ ಮುಡಬೂಳ ಗ್ರಾಮದ ಮನೆಯೊಂದು ಶನಿವಾರ ಪ್ರವಾಹದಲ್ಲಿ ಸಂಪೂರ್ಣ ಜಲಾವೃತವಾಗಿದೆ
ಚಿತ್ತಾಪುರ ತಾಲ್ಲೂಕಿನ ಮುಡಬೂಳ ಗ್ರಾಮದ ಮನೆಯೊಂದು ಶನಿವಾರ ಪ್ರವಾಹದಲ್ಲಿ ಸಂಪೂರ್ಣ ಜಲಾವೃತವಾಗಿದೆ   

ಚಿತ್ತಾಪುರ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ತಾಲ್ಲೂಕಿನಲ್ಲಿ ಹರಿಯುತ್ತಿರುವ ಕಾಗಿಣಾ ನದಿಯಲ್ಲಿ ಕಟ್ಟಿರುವ ದಂಡೋತಿ ಸೇತುವೆ ಸೇರಿದಂತೆ ಮುಡಬೂಳ, ಮುತ್ತಗಾ, ಶಂಕರವಾಡಿ, ಇಂಗಳಗಿ ಬಾಂದಾರು ಸೇತುವೆಗಳು ಮುಳಗಡೆಯಾಗಿದ್ದವು.

ದಂಡೋತಿ ಸೇತುವೆ ಮಾರ್ಗದ ಸಾರಿಗೆ ಸಂಚಾರ ಶುಕ್ರವಾರ ಮಧ್ಯರಾತ್ರಿಯಿಂದ ಸಂಪೂರ್ಣ ಬಂದ್ ಆಗಿತ್ತು. ಕಲಬುರಗಿಗೆ ಸಂಚರಿಸುತ್ತಿದ್ದ ಬಸ್ ಸಂಚಾರ ಶಹಾಬಾದ್ ಮಾರ್ಗಕ್ಕೆ, ಸೇಡಂ ಪಟ್ಟಣಕ್ಕೆ ಸಂಚರಿಸುತ್ತಿದ್ದ ಬಸ್ ಸಂಚಾರ ಮಳಖೇಡ ಮಾರ್ಗಕ್ಕೆ ಬದಲಾಯಿಸಲಾಗಿದೆ.

ಮುತ್ತಗಾ-ಕದ್ದರಗಿ ನಡುವಿನ ಬಾಂದಾರ ಸೇತುವೆ, ಮಲಕೂಡ ಗ್ರಾಮದ ಹತ್ತಿರ ಬೆಣ್ಣೆತೊರಾ ನದಿಗೆ ಕಟ್ಟಿರುವ ಬಾಂದಾರ ಸೇತುವೆ ಪ್ರವಾಹದಲ್ಲಿ ಮುಳುಗಡೆಯಾಗಿದ್ದವು.

ADVERTISEMENT

ತಾಲ್ಲೂಕಿನ ಮುಡಬೂಳ ಗ್ರಾಮದ ಹತ್ತಿರ ನಾಗಾವಿ ಹಳ್ಳದಲ್ಲಿ ಪ್ರವಾಹ ಹೆಚ್ಚಾಗಿ ಮತ್ತು ಕಾಗಿಣಾ ನದಿಯ ಪ್ರವಾಹದ ಹಿನ್ನೀರಿನಿಂದ ಮತ್ತು ಮರಗೋಳ ನಾಲಾ ಪ್ರವಾಹದಿಂದ ರಸ್ತೆಯ ಮೇಲೆ ನೀರು ಹರಿಯುತ್ತಿದೆ. 

ಇವಣಿ ಗ್ರಾಮದ ಹಳ್ಳದ ಪ್ರವಾಹ ಹಾಗೂ ಕಾಗಿಣಾ ನದಿಯ ಹಿನ್ನೀರು ಸೇರಿ ಸೇತುವೆ ಸಂಪೂರ್ಣ ಮುಳುಗಿದೆ. ಹೊಲಕ್ಕೆ ನುಗ್ಗಿದೆ.

ನಿದ್ದೆಗೆಟ್ಟು ಅಧಿಕಾರಿಗಳ ಅಲೆದಾಟ: ತಾಲ್ಲೂಕಿನಾದ್ಯಂತ ಸುರಿಯುತ್ತಿರುವ ಮಳೆ ಮತ್ತು ಬೆಣ್ಣೆತೊರಾ, ಕಾಗಿಣಾ, ಭೀಮಾ ನದಿಗಳು ಭೋರ್ಗರೆಯುತ್ತಿದ್ದು ಸಾರ್ವಜನಿಕರು ಅಪಾಯಕ್ಕೆ ಸಿಲುಕದಂತೆ ಎಚ್ಚರಿಕೆ ವಹಿಸಿ ತಹಶೀಲ್ದಾರ್ ನಾಗಯ್ಯ ಹಿರೇಮಠ, ಶಹಾಬಾದ್ ಡಿವೈಎಸ್‌ಪಿ ಶಂಕರಗೌಡ ಪಾಟೀಲ ನಿದ್ದೆಗೆಟ್ಟು ರಾತ್ರಿಯಿಡಿ ಅಲೆದಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.